ಕನ್ನಡಪ್ರಭ ವಾರ್ತೆ ಮಡಿಕೇರಿಹಬ್ಬ, ಜಾತ್ರೆ, ಚುನಾವಣೆ, ಪ್ರಮುಖ ಕಾರ್ಯಕ್ರಮಗಳು, ಪ್ರಾಕೃತಿಕ ವಿಕೋಪ ಹೀಗೆ ಹಲವು ತುರ್ತು ಸಂದರ್ಭದಲ್ಲಿ ಪೊಲೀಸರ ಜತೆ ಕೈಜೋಡಿಸಿ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕದಳದ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಎಂದು ಹೇಳಿದರು.
ಗೃಹ ರಕ್ಷಕದಳ ವಿಭಾಗದಿಂದ ಕೊಡಗು ಜಿಲ್ಲಾ ಗೃಹ ರಕ್ಷಕದಳ ಕಚೇರಿ ಆವರಣದಲ್ಲಿ ಶನಿವಾರ ನಡೆದ ‘ಗೃಹ ರಕ್ಷಕದಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ರಕ್ಷಕದಳದ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಮೆಚ್ಚಬೇಕಿದೆ. ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಗೃಹ ರಕ್ಷಕರು ಪೊಲೀಸರ ಜೊತೆ ಸೇರಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಠರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ ರಾಜ್ ಮಾತನಾಡಿ, ಜಿಲ್ಲೆಗೆ ಗೃಹರಕ್ಷಕರ 500 ಮಂಜೂರಾತಿಯಲ್ಲಿ, 250 ಗೃಹ ರಕ್ಷಕರಿಗೆ ಅವಕಾಶವಿದ್ದು, 150 ಮಂದಿ ಪೊಲೀಸರ ಜತೆ ಸರಿಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.ಗೃಹ ರಕ್ಷಕರು ಮಳೆ, ಗಾಳಿ, ಚಳಿ ಎನ್ನದೆ ಜಿಲ್ಲೆಯಲ್ಲಿ ಪೊಲೀಸರ ಜೊತೆಗೂಡಿ ಕರ್ತವ್ಯ ನಿರ್ವಹಿಸುತ್ತಾರೆ. ಸಂಚಾರ ನಿಯಂತ್ರಣ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗೃಹ ರಕ್ಷಕರು ಪೊಲೀಸರ ಜೊತೆಗೂಡಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಶಿಸ್ತು ಕಾಪಾಡಿಕೊಂಡು ಹೋಗಬೇಕು. ಆಡಳಿತ ವ್ಯವಸ್ಥೆ ತಮ್ಮ ಜೊತೆ ಇರಲಿದ್ದು, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಾರ್ವಜನಿಕರ ಜೊತೆ ಸಂಯಮ ಮತ್ತು ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದರು.ಉದ್ಯೋಗದಾತರು ಹೆಚ್ಚಿನ ಸಂಖ್ಯೆಯಲ್ಲಿ ಗೃಹ ರಕ್ಷಕದಳ ವಿಭಾಗಕ್ಕೆ ಸೇರುವಂತಾಗಬೇಕು. ಸರ್ಕಾರ ಮಾನವೀಯ ನೆಲಗಟ್ಟಿನಲ್ಲಿ ಸಾಧ್ಯವಾದಷ್ಟು ಉದ್ಯೋಗ ಕಲ್ಪಿಸಿ, ದುಡಿಮೆಗೆ ತಕ್ಕ ಪ್ರತಿಫಲ ಕಲ್ಪಿಸಲು ಪ್ರಯತ್ನಿಸಿದೆ ಎಂದು ಸುಂದರ್ ರಾಜ್ ವಿವರಿಸಿದರು.
ಗೃಹ ರಕ್ಷಕರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ಸಾಹದಿಂದ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಇದೇ ಸಂದರ್ಭ ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಠರು ಸಲಹೆ ಮಾಡಿದರು.ಡಿವೈಎಸ್ಪಿ ಎಂ.ಜಗದೀಶ್ ಮಾತನಾಡಿ, ಪೊಲೀಸರ ಜೊತೆಗೂಡಿ ಗೃಹ ರಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ. ಗೃಹ ರಕ್ಷಕರ ಕಾರ್ಯ ಪೊಲೀಸ್ ಇಲಾಖೆಗೆ ಅಮೂಲ್ಯವಾಗಿದೆ ಎಂದರು.
ಜಿಲ್ಲಾ ಕಾರಾಗೃಹ ಇಲಾಖೆಯ ಅಧೀಕ್ಷಕ ಸಂಜಯ್ ಜತ್ತಿ ಮಾತನಾಡಿ, ಗೃಹ ರಕ್ಷಕರು ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ರೀತಿ ಹೆಮ್ಮೆ. ಆ ನಿಟ್ಟಿನಲ್ಲಿ ವೃತ್ತಿ ಧರ್ಮವನ್ನು ಗೌರವಿಸಿ ಸಮಾಜಮುಖಿಯಾಗಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮೆಚ್ಚುವಂತಹದ್ದು ಎಂದರು.ಮುಖ್ಯಪೇದೆ ಫಾರೂಖ್ ನಿರೂಪಿಸಿದರು. ಗೃಹ ರಕ್ಷಕಿಯರಾದ ಕೆ.ಎಸ್.ಲವಿ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿದರು.