ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೆರೆಗಳಲ್ಲಿ ರೈತರ ಜಮೀನಿಗೆ ಮಣ್ಣು ತುಂಬಲು ಅವಕಾಶ ಮಾಡಿಕೊಡಬೇಕು, ಜಮೀನುಗಳ ಮಣ್ಣು ಮಳೆ ಬಂದ ವೇಳೆ ಕೊಚ್ಚಿಕೊಂಡು ಕೆರೆ-ಕಟ್ಟೆಗಳಿಗೆ ಸೇರುತ್ತಿದೆ. ಇದು ಮತ್ತೆ ರೈತರ ಜಮೀನಿಗೆ ಸೇರಬೇಕು ಎಂದು ರಾಜ್ಯ ಹಸಿರು ಸೇನೆ ಸಂಚಾಲಕ ಆನಂದ್ ಪಾಟೇಲ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದರು.ನಗರ ವ್ಯಾಪ್ತಿಗಳಲ್ಲಿ ಸುಮಾರು ೫೦ ರಿಂದ ೬೦ ವರ್ಷ ರೈತರು ಉಳುಮೆ ಮಾಡಿಕೊಂಡು ಟಿ.ಟಿ ಕಟ್ಟಿ ಅರ್ಜಿ ಸಲ್ಲಿಸಿದ್ದು ಇದುವರೆಗೂ ಸರ್ಕಾರ ಸ್ಪಷ್ಟ ನಿರ್ಧಾರ ಕೊಟ್ಟಿಲ್ಲ, ಕೆ.ಐ.ಎ.ಡಿ.ಬಿ ಇಲಾಖೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಇಂದು ಈ ಪ್ರದೇಶದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬಂದಿವೆ ಎಂದು ಹೇಳಿದರು. ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಭರವಸೆ ನೀಡಿ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿದೆ.ಆದರೆ ಉದ್ಯೋಗ ನೀಡದೆ ಶೋಷಿಸುತ್ತಾ ಬಂದಿದೆ, ಈ ಎಲ್ಲಾ ಸಮಸ್ಯೆ ಪ್ರಶ್ನಿಸಿ ಮಾ.೯ರಂದು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖೈಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಜಿಲ್ಲಾಧ್ಯಕ್ಷ ಕೆ.ಎಸ್ ಧನಂಜಯಾರಾಧ್ಯ ಮಾತನಾಡಿ, ಭದ್ರ ಮೇಲ್ದಂಡೆ, ಎತ್ತಿನಹೊಳೆ, ಹೇಮಾವತಿ ನೀರಿನ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕೆರೆ-ಕಟ್ಟೆಗಳಿಗೆ ನೀರು ಒದಗಿಸಬೇಕು, ಬಾಕಿಯಿರುವ ಸಾಗುವಳಿಯನ್ನು ರೈತರಿಗೆ ಮಂಜೂರು ಮಾಡಬೇಕು. ೨೦೧೩ರ ಕಾಯ್ದೆಯಂತೆ ಕೃಷಿ ಭೂಮಿಯನ್ನು ರೈತರಿಂದ ಬಲವಂತವಾಗಿ ವಶಪಡಿಸಿಕೊಳ್ಳಬಾರದು, ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕೈಗಾರಿಕೆ ಕಂಪನಿ ರೈತರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಹೇಳಿದರು. ತಾಲೂಕು ಅಧ್ಯಕ್ಷ ಸಿದ್ದರಾಜು ಮಾತನಾಡಿ, ರೈತರು ಜಿಲ್ಲೆಯಲ್ಲಿ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯುತ್ ಇಲಾಖೆ ರೈತರಿಗೆ ಸಮರ್ಪಕ ವಿದ್ಯುತ್ ನೀಡದೆ ಕಣ್ಣಾಮುಚ್ಚಾಲೆ ಆಡುತ್ತಿದೆ. ರೈತರಿಗೆ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಟಿ.ಸಿ ಕಂಬ, ಲೈನ್ ಇತರೆ ಉಪಕರಣಗಳ ಖರ್ಚು ವೆಚ್ಚಗಳನ್ನು ತ್ವರಿತವಾಗಿ ಭರಿಸಬೇಕಿದೆ ಎಂದು ಹೇಳಿದರು. ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಲೋಕಣ್ಣ, ಜಿಲ್ಲಾ ಕಾರ್ಯದರ್ಶಿ ಪುಟ್ಟರಾಜು, ಕೆಂಪರಾಜು, ರಾಮಚಂದ್ರಯ್ಯ, ಮಲ್ಲೇಶಯ್ಯ, ವೀರಯ್ಯ, ಲಕ್ಷ್ಮನಾಯ್ಕ, ಲಚ್ಚಿರಾಮನಾಯ್ಕ್ ಗಿರೀಶ್ ಆರಾಧ್ಯ, ಸಿದ್ದನಂಜರಾಧ್ಯ ಸೇರಿದಂತೆ ತಾಲೂಕಿನ ರೈತ ಸಂಘದ ಪ್ರಮುಖರು ಹಾಜರಿದ್ದರು.