ಕೊಪ್ಪಳ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಅಪರ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ. ಮನವಿಯಲ್ಲಿ "ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತಿತ್ತು " ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಹೇಳಿದ್ದು, ಅವರ ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಭಾರತದ ಇತಿಹಾಸದಲ್ಲಿ ಪರಿಶಿಷ್ಟ ಮತ್ತು ಶೋಷಿತ ಸಮುದಾಯಗಳಿಗೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ವಿಪರೀತ ಅವಮಾನ, ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರೂ ರಕ್ಷಣೆ ಮಾಡಿದ ಉದಾಹರಣೆ ಇಲ್ಲ. ಆದರೆ, ಪರಿಶಿಷ್ಟರ, ಮಹಿಳೆಯರ ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ಮಹಾಲೋಕದೃಷ್ಟಿಯ ಮೂಲಕ ಪ್ರತಿದಿನವೂ ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತವರ ಸಂವಿಧಾನ ಎಂಬುದನ್ನು ನಾವುಗಳು ಎದೆ ತಟ್ಟಿಕೊಂಡು ಹೇಳುತ್ತೇವೆ. ಭಾರತದಲ್ಲಿ ಅಸ್ಪೃಶ್ಯತೆ ಅನುಭವಿಸಿದ ನಮ್ಮ ಜನರು ಇಲ್ಲಿನ ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್ ಅವರನ್ನು ಬಿಟ್ಟು ಅಮಿತ್ ಶಾ ಅವರ ದೇವರ ಹೆಸರನ್ನು ಹೇಳುತ್ತ ಕೂತಿದ್ದರೆ ಇಷ್ಟೊತ್ತಿಗೆ ಅವರೆಲ್ಲರೂ ದೇವರ ಪಾದ ಸೇರಬೇಕಾಗಿತ್ತು. ಜೊತೆಗೆ ಯಾವ ಧರ್ಮ ಅಥವಾ ದೇವರು ನಮ್ಮನ್ನು ರಕ್ಷಣೆ ಮಾಡುವುದಿಲ್ಲ, ಬದಲಿಗೆ ಶಿಕ್ಷಣ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವೇ ನಮ್ಮ ಬದುಕನ್ನು ಬದಲಿಸುವ ಕೀಲಿಕೈ " ಎಂಬ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮಾತನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆ. ಪುಣ್ಯಗಿಣ್ಯ ಎಂದು ಹೇಳುತ್ತ ಸಮಾಜಕ್ಕೆ ಕಂಟಕ ಪ್ರಾಯವಾದ ಮೌಢ್ಯತೆಯನ್ನು ಆಚರಿಸುವುದಕ್ಕಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೀನ ಧೈರ್ಯ ತೋರುತ್ತಿರುವ ಅಮಿತ್ ಶಾ ಅವರು ದೇಶದ ಮುಂದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಮ್ಮ ಕೇಂದ್ರ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಆಗ್ರಹಿಸಿದರು.ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ, ಟಿಯುಸಿಐ ಮುಖಂಡ ಕೆ.ಬಿ. ಗೋನಾಳ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಕೆ.ಎಂ.ಆರ್.ವಿ. ಅಧ್ಯಕ್ಷ ಮುದುಕಪ್ಪ ಎಂ. ಹೊಸಮನಿ. ದಲಿತ ಯುವ ವೇದಿಕೆ ಜಿಲ್ಲಾ ಸಂಚಾಲಕ ಸುಂಕಪ್ಪ ಮಿಸಿ, ಅಹಿಂದ ಜಿಲ್ಲಾ ಸಂಚಾಲಕ ರಮೇಶ್ ಸಾಲ್ಮನಿ, ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಬಂದೆ ನವಾಝ ಮನಿಯಾರ್, ಭೀಮ ಆರ್ಮಿ ಏಕತಾ ಮಿಷನ್ ಜಿಲ್ಲಾ ಕಾರ್ಯದರ್ಶಿ ವೀರೇಶ ತೆಗ್ಗಿನಮನಿ, ಕರ್ನಾಟಕ ರಾಜ್ಯಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ ಸೇರಿದಂತೆ ಮೊದಲಾದವರು ಇದ್ದರು.ಶಾ ಹೇಳಿಕೆ ವಿರೋಧಿಸಿ ಜ. 6ರಂದು ಕೊಪ್ಪಳ ಬಂದ್: ಬೆಟ್ಟದೂರು
ಕೊಪ್ಪಳ:
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಸಂಸತ್ತಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಜ. ೬ರಂದು ಕೊಪ್ಪಳ ಬಂದ್ ಕರೆ ನೀಡಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಸಂಚಾಲಕ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.ಕೊಪ್ಪಳ ಮಿಡಿಯಾ ಕ್ಲಬ್ನಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ದೇಶಕ್ಕೆ ಸಂವಿಧಾನ ನೀಡಿರುವ ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತು ಸಂಸತ್ತಿನಲ್ಲಿಯೇ ಅಪಮಾನ ಆಗುವ ರೀತಿಯಲ್ಲಿ ಹೇಳಿಕೆ ನೀಡಿದ್ದನ್ನು ಸಹಿಸಿಕೊಂಡು ಇರಲು ಸಾಧ್ಯವೇ ಇಲ್ಲ. ಇದು ಅವರ ಒಳಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಕಿಡಿಕಾರಿದ್ದಾರೆ.ಗಾಂಧಿ ಜೊತೆ ಭಿನ್ನಾಭಿಪ್ರಾಯ ಇದ್ದರೂ ಅವರಿಗೆ ಅಗೌರವದಿಂದ ನಡೆದವರಲ್ಲ. ಅಂಬೇಡ್ಕರ್ ಅವರು ಸಮಾನತೆ ಬದುಕಿಗಾಗಿ ಜೀವನವನ್ನೇ ಮೀಸಲಿಇಟ್ಟು, ಹೋರಾಟ ಮಾಡಿದ್ದಾರೆ. ಶೋಷಿತರಿಗೆ ಸಂವಿಧಾನದ ಮೂಲಕ ಧ್ವನಿ ನೀಡಿದ್ದಾರೆ. ಅಂಥ ಮಹಾನ್ ನಾಯಕರ ಕುರಿತು ಮಾತನಾಡುವಾಗ ಎಚ್ಚರದಿಂದ ಇರಬೇಕು.ಅವರು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಲು ಗಾಂಧೀಜಿ ಅವರೇ ಹೆಸರು ಸೂಚಿಸಿದ್ದರು. ದೇಶಕ್ಕೆ ಸುಭದ್ರ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರ ಸ್ಮರಣೆ ಬಿಟ್ಟು ದೇವರ ಸ್ಮರಣೆ ಮಾಡಿ ಎಂದಿರುವುದು ಮೇಲ್ನೋಟಕ್ಕೆ ಖಂಡಿಸಬೇಕು ಎನಿಸುತ್ತದೆ. ಇದರಲ್ಲಿ ಅವರ ಹಿಡನ್ ಅಜೆಂಡಾ ಇರುವುದು ಗೊತ್ತಾಗುತ್ತದೆ ಎಂದರು.ಜಗತ್ತಿನಲ್ಲಿ ಬೇರೆ ದೇಶಗಳ ಸಂವಿಧಾನ ರಚನೆಯಾಗಿ ೩೦-೪೦ ವರ್ಷಕ್ಕೆ ವಿರೋಧ ವ್ಯಕ್ತವಾಗಿವೆ. ಆದರೆ, ಭಾರತದಲ್ಲಿ ಸಂವಿಧಾನ ತಿದ್ದುಪಡಿಯಾಗಿದ್ದರೂ ಸುಭದ್ರವಾಗಿದೆ. ಕೇಂದ್ರ ಗೃಹಮಂತ್ರಿ ಅಮಿತ್ ಶಾ ಬಾಬಾ ಸಾಹೇಬರ ಬಗ್ಗೆ ಹೇಳಿರುವುದು ಸರಿಯಲ್ಲ. ಅಂಬೇಡ್ಕರ್ ಅವರು ಶೋಷಿತರಿಗೆ ದೇವರ ಸ್ಥಾನದಲ್ಲಿದ್ದಾರೆ. ಶೋಷಣೆಗೆ ಒಳಗಾಗದವರಿಗೆ ಅವರ ನೋವು ಗೊತ್ತಾಗಲ್ಲ ಎಂದರು.ಶಾ ಅವರ ಹೇಳಿಕೆಯನ್ನು ಖಂಡಿಸಿ ಜ. ೬ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಸ್ವಯಂ ಪ್ರೇರಿತ ಬಂದ್ಗೂ ಕರೆ ನೀಡಿದ್ದೇವೆ ಎಂದರು.ಸಮಿತಿಯ ಮುಖಂಡ ಹನುಮೇಶ ಕಡೆಮನಿ ಮಾತನಾಡಿ, ಜ. ೬ರಂದು ಕೊಪ್ಪಳ ಬಂದ್ ಕರೆ ನೀಡಲಾಗಿದ್ದು, ಈಗಾಗಲೇ ಹಲವು ಸಂಘಟನೆಗಳ ಜೊತೆ ಮಾತನಾಡಿದಾಗ ಬೆಂಬಲಿಸುವುದಾಗಿ ಹೇಳಿದ್ದಾರೆ. ಬೆಳಗ್ಗೆ ತಾಲೂಕು ಕ್ರೀಡಾಂಗಣದಿಂದ ಮೆರವಣಿಗೆ ಪ್ರಾರಂಭ ಮಾಡಿ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಅಶೋಕ ವೃತ್ತಕ್ಕೆ ಜಾಥಾ ತೆರಳಲಿದೆ. ಈ ಜಾಥಾದಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದರು.ಟಿ. ರತ್ನಾಕರ, ಈಶಪ್ಪ ಛಲವಾದಿ, ಸಲೀಂ ಖಾದ್ರಿ ಇದ್ದರು.