ಹಾವೇರಿ ವಿವಿ ಉಳಿವಿಗೆ ಪ್ರಾಮಾಣಿಕ ಪ್ರಯತ್ನ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ

KannadaprabhaNewsNetwork | Published : Apr 8, 2025 12:31 AM

ಸಾರಾಂಶ

ಮುಖ್ಯಮಂತ್ರಿಗಳು ಬಜೆಟ್ ಅಧಿವೇಶನದಲ್ಲಿ ವಿವಿಗಳನ್ನು ಮುಚ್ಚುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಹಾವೇರಿ ವಿವಿಯನ್ನು ಮುಚ್ಚುವ ಪ್ರಶ್ನೆ ಬರುವುದಿಲ್ಲ ಎಂದು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಹಾವೇರಿ: ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚದಂತೆ ಹಾಗೂ ವಿಲೀನಗೊಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.ಸ್ಥಳೀಯ ನಗರಸಭೆ ಕಚೇರಿಯಲ್ಲಿ ಸೋಮವಾರ ಹಾವೇರಿ ವಿವಿಯನ್ನು ವಿಲೀನ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೂಡಲೇ ರದ್ದುಪಡಿಸಬೇಕು ಹಾಗೂ ವಿವಿಗೆ ಅಗತ್ಯ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿ, ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರು ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದರು.ಮುಖ್ಯಮಂತ್ರಿಗಳು ಬಜೆಟ್ ಅಧಿವೇಶನದಲ್ಲಿ ವಿವಿಗಳನ್ನು ಮುಚ್ಚುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಹಾವೇರಿ ವಿವಿಯನ್ನು ಮುಚ್ಚುವ ಪ್ರಶ್ನೆ ಬರುವುದಿಲ್ಲ ಎಂದರು.ಆಗ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಮಾತನಾಡಿ, ಸರ್ಕಾರ ಬಜೆಟ್ ಅಧಿವೇಶನದಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಎಂದು ಆದೇಶ ಮಾಡುತ್ತದೆ ಎಂದು ಜಿಲ್ಲೆಯ ಜನತೆ ಆಶಾಭಾವನೆ ಹೊಂದಿತ್ತು. ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ವಿಭಿನ್ನ ಮತ್ತು ಗೊಂದಲಕಾರಿ ಹೇಳಿಕೆಗಳು ನಮಗೆ ಮತ್ತಷ್ಟು ಆತಂಕವನ್ನುxಟು ಮಾಡಿವೆ ಎಂದರು.ಸ್ವತಃ ಮುಖ್ಯಮಂತ್ರಿಗಳು ವಿವಿ ಮುಚ್ಚುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ, ಸಂಪುಟ ಉಪಸಮಿತಿಯ ತೀರ್ಮಾನವು ಸಂಪುಟ ಸಭೆಗೆ ಬಂದ ನxತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಉಪಮುಖ್ಯಮಂತ್ರಿಯವರು ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ. ಬದಲಾಗಿ ವಿಲೀನಗೊಳಿಸುತ್ತೇವೆ ಅಂತ ಹೇಳಿದ್ದಾರೆ ಎಂದು ಸಚಿವರ ಗಮನ ಸೆಳೆದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಶ್ವವಿದ್ಯಾಲಯಗಳಿಂದಲೂ ವರದಿ ತರಿಸಿಕೊಳ್ಳಲಾಗುವುದು. ಎರಡೂ ಕಡೆಯಿಂದ ಆಲೋಚಿಸಿ ಹಾವೇರಿ ವಿವಿಗೆ ಅನ್ಯಾಯವಾಗದಂತೆ ಉಳಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನ ಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಸಾಹಿತಿ ಸತೀಶ ಕುಲಕರ್ಣಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸಂಜೀವಕುಮಾರ ನೀರಲಗಿ, ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರಾದ ಹೊನ್ನಪ್ಪ ಮರೆಮ್ಮನವರ, ಉಡಚಪ್ಪ ಮಾಳಗಿ, ಎಂ. ಆಂಜನೇಯ, ಮಲ್ಲಿಕಾರ್ಜುನ ಬಳ್ಳಾರಿ, ವಿಭೂತಿ ಶೆಟ್ಟಿನಾಯಕ, ಬಸವರಾಜ ಎಸ್, ಪದ್ಮರಾಜ ಕಳಸೂರು, ಸಿದ್ದು ಮರೆಮ್ಮನವರ ಸೇರಿದಂತೆ ಇತರರು ಇದ್ದರು.

Share this article