ಪ್ರಾಮಾಣಿಕತೆ ಸಮಾಜದಲ್ಲಿ ಇನ್ನೂ ಬೆಲೆ ಇದೆ

KannadaprabhaNewsNetwork | Published : Jun 12, 2024 12:33 AM

ಸಾರಾಂಶ

ಸಮಾಜದಲ್ಲಿ ಪ್ರಾಮಾಣಿಕ ಸೇವೆಗೆ, ದುಡಿಮೆಗೆ ಯಾವತ್ತು ಬೆಲೆ ಇರುತ್ತದೆ. ವೃತ್ತಿಗೆ ನಿವೃತ್ತಿ ಹೊರತು ಒಡನಾಟಕ್ಕೆ ಅಲ್ಲ, ಸದಾ ನಿಮ್ಮ ಸುಖದುಃಖದಲ್ಲಿ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹೆಚ್.ಎಸ್. ಜೈಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜದಲ್ಲಿ ಪ್ರಾಮಾಣಿಕ ಸೇವೆಗೆ, ದುಡಿಮೆಗೆ ಯಾವತ್ತು ಬೆಲೆ ಇರುತ್ತದೆ. ವೃತ್ತಿಗೆ ನಿವೃತ್ತಿ ಹೊರತು ಒಡನಾಟಕ್ಕೆ ಅಲ್ಲ, ಸದಾ ನಿಮ್ಮ ಸುಖದುಃಖದಲ್ಲಿ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹೆಚ್.ಎಸ್. ಜೈಕುಮಾರ ಹೇಳಿದರು.

ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ರಾಜ್ಯ ಸಮಿತಿ ಹಾಗೂ ಜಿಲ್ಲಾ ಘಟಕದ ವತಿಯಿಂದ ವಾಣಿಜ್ಯ ಇಲಾಖೆ ತೆರಿಗೆಗಳ ಸಹಾಯಕ ಆಯುಕ್ತ ಸುರೇಶ ಜೀಬಿ ಹಾಗೂ ಆರೋಗ್ಯ ಇಲಾಖೆಯ ಫಾರ್ಮಸಿ ಅಧಿಕಾರಿ ಚನ್ನಾರೆಡ್ಡಿ ಜಿ ಏಮಂಟಿ ಅವರು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ಪ್ರಯುಕ್ತವಾಗಿ ನಡೆದ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಅವಿಸ್ಮರಣೀಯ ಕ್ಷಣಗಳು. ಈ ಕ್ಷಣಗಳು ಏನೋ ಒಂಥರ ಖುಷಿ ಕೊಡುತ್ತಿದೆ. 2004ರಲ್ಲಿ ಜೀಬಿ ಅವರು ಒಕ್ಕೂಟದಿಂದ ರ‍್ಯಾಲಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಒಕ್ಕೂಟದ ಏಳ್ಗೆಗೆ ಬಹಳಷ್ಟು ಶ್ರಮಿಸಿದ್ದಾರೆ. ಅದರಂತೆ ಚಂದ್ರಶೇಖರ ಲೇಂಡಿ ಅವರು ಪಿಲ್ಲರ್ ಆಗಿ ಕೆಲಸ ಮಾಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಒಕ್ಕೂಟಕ್ಕೆ ಇವರು ಆಧಾರ ಸ್ತಂಭವಾಗಿ ಕೆಲಸ ನಿರ್ವಹಿಸಿದ್ದಾರೆ. ಇನ್ಮುಂದೆ ಹೆಚ್ಚಿನ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಬೆಂಗಳೂರಿನ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಗೌರವಾಧ್ಯಕ್ಷ ಮಹಾದೇವಯ್ಯ ಮಠಪತಿ ಮಾತನಾಡಿ, ನಿವೃತ್ತಿ ಎಂದರೆ ಅಂತ್ಯವಲ್ಲ ಆರಂಭ ಎಂದರ್ಥ. ವಯೋನಿವೃತ್ತಿಯನ್ನು ಸಾಮೂಹಿಕವಾಗಿ ಆಚರಿಸಿಕೊಳ್ಳುವುದು ಬಹಳಷ್ಟು ವಿರಳ. ವಯೋನಿವೃತ್ತಿಯು ಬರೀ ಮನೆ ಬಂಧು ಬಳಗದಲ್ಲಿ ಆಚರಿಸಿಕೊಳ್ಳುತ್ತಾರೆ. ಆದರೆ ಸುರೇಶ ಜಿಬಿ ಹಾಗೂ ಚನ್ನಾರೆಡ್ಡಿ ಏಮಂಟಿ ಇದಕ್ಕೆ ಹೊರತಾಗಿದ್ದಾರೆ. ಅವರು ಸಮಾಜಕ್ಕಾಗಿ ಸ್ವಾರ್ಥವನ್ನು ಬಿಟ್ಟು ಸಮಾಜದ ಏಳ್ಗೆಗೆ ದುಡಿದ್ದಾರೆ. ಇವರು ತಮ್ಮ ಸರ್ಕಾರಿ ಸೇವೆಯ ಮಧ್ಯೆಯು ಸಮಾಜ ಸೇವೆ ಸಂಘಟನೆ ಹೋರಾಟಕ್ಕೆ ಕೈ ಜೋಡಿಸಿ ಶಕ್ತಿ ತುಂಬಿದ್ದಾರೆ ಎಂದರು.

ಗೌರವಾಧ್ಯಕ್ಷ ಚಂದ್ರಶೇಖರ ಲೆಂಡಿ ಮಾತನಾಡಿ, ಜೀಬಿ ಹಾಗೂ ಏಮಂಟಿಯವರು ತಾವುಗಳು ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಹಾಗೂ ಒಕ್ಕೂಟದಲ್ಲಿ ಭಾಗವಹಿಸಿ ಜನಸಾಮಾನ್ಯರ ಬಾಳಲ್ಲಿ ಬೆಳಕಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಸುರೇಶ ಜೀಬಿ ಮಾತನಾಡಿ, ಸಂವಿಧಾನ ಬದ್ಧವಾಗಿ ಕಟ್ಟಕಡೆಯ ವ್ಯಕ್ತಿ ಬದುಕಬೇಕೆನ್ನುವ, ಅವರ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ಬದುಕು ಆರ್ಥಿಕ ಬದಲಾಣೆ, ಎಲ್ಲ ಸಮುದಾಯ ಸೇರಿ ಜಾತ್ಯಾತೀತವಾಗಿ ಕುವೆಂಪು ಅವರ ವಿಶ್ವಮಾನವರಂತೆ ಅವರ ಆಶಯಗಳೊಂದಿಗೆ ಜನಜಾಗೃತಿ ಸೇರಿದಂತೆ ಶ್ರಮಿಸಲಾಗುತ್ತಿದೆ ನಮಗಾಗಿ ನಾವು ಏನು ಮಾಡಿದ್ದೇವೆ ಎನ್ನುವುದು ಮುಖ್ಯವಲ್ಲ ಸಮಾಜಕ್ಕೆ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕದಿಂದ ಮತ್ತು ಅಪಾರ ಬಂಧು ಬಳಗ, ಸ್ನೇಹಿತ ವರ್ಗದವರು ನಿವೃತ್ತಿ ಹೊಂದಿದ ಸುರೇಶ ಜೀಬಿ ಹಾಗೂ ಚೆನ್ನಾರೆಡ್ಡಿ ಏಮಂಟಿ ಅವರನ್ನು ಸನ್ಮಾನಿಸಿ ಗೌರವಿಸಿದರು. ದ್ರಾಕ್ಷಾಯಿಣಿ ಹುಡೇದ ಸ್ವಾಗತಿಸಿದರು. ಬಸವರಾಜ ಜೀಬಿ ವಂದಿಸಿದರು.

Share this article