ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕನ್ನಡಪರ ಸಂಘಟನೆಗಳಿಗೆ ಪ್ರಾಮಾಣಿಕತೆ ಬಹಳ ಮುಖ್ಯ: ಕೊಟ್ರೇಶ್ ಉಪ್ಪಾರ್ ಅಭಿಪ್ರಾಯ

KannadaprabhaNewsNetwork | Published : Jun 16, 2025 1:05 AM

ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅನುದಾನ ಪಡೆದು ಸಮ್ಮೇಳನಗಳನ್ನು ಮಾಡುವ ಕನ್ನಡಪರ ಸಂಸ್ಥೆಗಳು, ಸಾರ್ವಜನಿಕರ ಹಣವನ್ನು ಕೋಟಿಗಟ್ಟಲೆ ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಿ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿರುವುದು ದುರಂತ.

ಕನ್ನಡಪ್ರಭ ವಾರ್ತೆ ಆಲೂರು

ನಾಡು- ನುಡಿ ಸೇವೆಯಲ್ಲಿ ತೊಡಗಿರುವ ಕನ್ನಡಪರ ಸಂಘಟನೆಗಳಿಗೆ ಪಾರದರ್ಶಕ ಹಾಗೂ ಪ್ರಾಮಾಣಿಕ ವ್ಯವಹಾರ ದೃಷ್ಟಿಕೋನಗಳು ಬಹಳ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ಕಳೆದ ಮೂರೂ ತಾಲೂಕು ಸಮ್ಮೇಳನಗಳ ಖರ್ಚು ವೆಚ್ಚಗಳನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕ ಪಾರದರ್ಶಕವಾಗಿ ನೀಡಿರುವುದು ಸ್ತುತ್ಯಾರ್ಹ ಸಂಗತಿ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ತಾಲೂಕು ಘಟಕವು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ತಾಲೂಕು ಕಾರ್ಯದರ್ಶಿ ಧರ್ಮ ಕೆರಲೂರು ವಾರ್ಷಿಕ ವರದಿ ಹಾಗೂ ಆಯ- ವ್ಯಯ ಮಂಡನೆ ಮಾಡಿದ ನಂತರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರದ ಅನುದಾನ ಪಡೆದು ಸಮ್ಮೇಳನಗಳನ್ನು ಮಾಡುವ ಕನ್ನಡಪರ ಸಂಸ್ಥೆಗಳು, ಸಾರ್ವಜನಿಕರ ಹಣವನ್ನು ಕೋಟಿಗಟ್ಟಲೆ ದುರ್ಬಳಕೆ ಮಾಡಿಕೊಂಡು ವಂಚನೆ ಎಸಗಿ ನ್ಯಾಯಾಲಯಗಳಿಂದ ಛೀಮಾರಿ ಹಾಕಿಸಿಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿರುವುದು ದುರಂತ. ಕನ್ನಡ ನಾಡು- ನುಡಿ ಹೆಸರಿನಲ್ಲಿ ವೈಯಕ್ತಿಕ ಬೇಳೆ ಬೇಯಿಸಿಕೊಳ್ಳುವ, ಅಧಿಕಾರಶಾಹಿ ವ್ಯಕ್ತಿಗಳನ್ನು ಸಮಾಜ ಖಂಡಿಸಬೇಕಿದೆ. ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಪ್ರಾರಂಭದಿಂದಲೂ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸುವ ಹಿನ್ನೆಲೆಯಲ್ಲಿ ಸರಳ ಹಾಗೂ ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಕನ್ನಡಪರ ಮನಸ್ಸುಗಳನ್ನು ಒಂದುಗೂಡಿಸಿ ಉತ್ತಮೋತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ದಿಸೆಯಲ್ಲಿ ಪ್ರಾರಂಭದಿಂದಲೂ ಆಲೂರು ತಾಲೂಕಿನಲ್ಲಿ ನೂರಾರು ಮನಸ್ಸುಗಳು ಕೈಜೋಡಿಸಿ, ತಾಲೂಕು ಘಟಕವನ್ನು ಕ್ರಿಯಾಶೀಲವಾಗಿಟ್ಟಿದೆ. ಹರಿಹಳ್ಳಿಯಲ್ಲಿ ನಡೆದ ಆಲೂರು ತಾಲೂಕು ಮೂರನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಸತ್ಯನಾರಾಯಣ ಹರಿಹಳ್ಳಿ, ಎಚ್.ಡಿ.ಸೋಮೇಶ್ ಮುಂತಾದ ಸ್ನೇಹಿತರ ಕೊಡುಗೆ ಅಪಾರವಿದೆ ಎಂದು ಹೇಳಿದರು.

ಸಾಹಿತ್ಯ ವೇದಿಕೆಯ ಪೋಷಕರಾದ ಡಾ. ಎಂ. ಇ. ಜಯರಾಜ್ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಬಂದಿದೆ. ಹೊರರಾಜ್ಯದಲ್ಲಿಯೂ ತನ್ನ ಛಾಪನ್ನು ಮೂಡಿಸಿರುವ ವೇದಿಕೆಯ ಎಲ್ಲಾ ಕಾರ್ಯಗಳಿಗೂ ನಾವೆಲ್ಲಾ ಒತ್ತಾಸೆಯಾಗಿ ನಿಲ್ಲುತ್ತೇವೆ ಎಂದರು.

ವೇದಿಕೆಯ ತಾಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ ಮಾತನಾಡಿ, ಸಾಹಿತ್ಯ ವೇದಿಕೆ ಮೊದಲಿನಿಂದಲೂ ಸಾಧಕರನ್ನು ಗುರುತಿಸುತ್ತಾ, ಪ್ರೋತ್ಸಾಹಿಸುತ್ತಾ, ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಗಳನ್ನು ಒದಗಿಸುತ್ತಾ ಬಂದಿದೆ. ಇದರ ಒಟ್ಟೊಟ್ಟಿಗೆ ನಾವು ನಮ್ಮ ಕೈಲಾದಮಟ್ಟಿಗೆ ಸಹಕಾರವನ್ನು ನೀಡುತ್ತಾ ವೇದಿಕೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇವೆ. ಮುಂದೆಯೂ ನಮ್ಮ ಸ್ಪಂದನೆ ನಿರಂತರವಾಗಿರುತ್ತದೆ ಎಂದರು.

ತಾಲೂಕು ಕಾರ್ಯದರ್ಶಿ ಧರ್ಮ ಕೆರಲೂರು ವಾರ್ಷಿಕ ವರದಿ ಮಂಡನೆ ಮಾಡಿ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹುಟ್ಟಿರುವುದೇ ಪ್ರತಿಭೆಗಳನ್ನು ಗುರುತಿಸಿ, ಸಮಾಜದ ಮುಖ್ಯ ವಾಹಿನಿಗೆ ತರಲು. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರ ಬೆಳೆಸುವುದಕ್ಕಾಗಿ. ತಾಲೂಕು ಘಟಕ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಇಲ್ಲಿಯವರೆಗೂ ಪಾರದರ್ಶಕ ಲೆಕ್ಕಪತ್ರಗಳನ್ನು ವೇದಿಕೆ ನೀಡುತ್ತಾ ಬಂದಿದ್ದು, ಇತ್ತೀಚೆಗೆ ತಾಲೂಕಿನ ಹರಿಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಆಲೂರು ತಾಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಫಾದರ್ ಬಸವರಾಜ್ ೧೦೦೦ ರು., ಟಿ. ಕೆ. ನಾಗರಾಜ್ ೧೦೦೦ ರು., ಧರ್ಮ ಕೆರಲೂರು ೧೦೦೦ ರು., ವಾಸು ಸಮುದ್ರವಳ್ಳಿ ೧೦೦೦ ರು., ರೈತ ಸಂಘದ ಜಯಣ್ಣ ೫೦೦೦ ರು., ಮಣಿಪುರ ಕೃಷ್ಣೇಗೌಡ ೨೦೦೦ ರು., ರವಿ ನಾಕಲಗೂಡು ೧೫೦೦೦ ರು., ಎಂ. ಪಿ. ಹರೀಶ್ ೨೦೦೦ ರು., ಎಂ. ಚಂದ್ರಕಲಾ ೫೦೦೦ ರು., ಡಾ. ಎಂ. ಇ. ಜಯರಾಜ್ ೪೦೦೦ ರು., ಎಂ. ಬಾಲಕೃಷ್ಣ ೩೦೦೦ ರು., ಕಟ್ಟೆಗದ್ದೆ ನಾಗರಾಜ್ ೮೫೦೦ ರು., ಮಂಗಳ ಕಲಾ ಸಾಹಿತ್ಯ ವೇದಿಕೆ ೭೫೦೦ ರು., ಎಚ್.ಡಿ.ಸೋಮೇಶ್ ೫೦೦ ರು, ಮಾಣಿಕ್ಯ ಪ್ರಕಾಶನ ಹಾಸನ ೧೦,೦೦೦ ರು. ಇವರೆಲ್ಲರಿಂದ ಒಟ್ಟು ೬೬, ೫೦೦ ರು. ದೇಣಿಗೆ ಸಂಗ್ರಹವಾಗಿ ಅದರಲ್ಲಿ ೬೭, ೮೪೦ ರು. ಖರ್ಚಾಗಿದ್ದು ೧೩೪೦ ರು. ಹೆಚ್ಚಿನ ವ್ಯಯವಾಗಿದೆ. ಸಮ್ಮೇಳನಕ್ಕೆ ಸಹಕಾರ ನೀಡಿದ ಎಲ್ಲರನ್ನೂ ವೇದಿಕೆ ಗೌರವಿಸುತ್ತದೆ ಎಂದರು.

ವೇದಿಕೆಯ ವತಿಯಿಂದ ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಉಪಾಧ್ಯಕ್ಷ ಟಿ.ಕೆ.ನಾಗರಾಜ್ ಹಾಗೂ ಸಂಘಟನಾ ಕಾರ್ಯದರ್ಶಿ ಡಿ.ಸಿ.ಬಸವರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಟ್ರಸ್ಟಿ ವಾಸು ಸಮುದ್ರವಳ್ಳಿ, ಪತ್ರಿಕಾ ಕಾರ್ಯದರ್ಶಿ ಎಚ್.ಡಿ.ಪ್ರದೀಪ್, ದಲಿತ ಮುಖಂಡ ಅರಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.