ಕನ್ನಡಪ್ರಭ ವಾರ್ತೆ ಹನೂರು
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಆಡಳಿತ ಮಂಡಳಿಯ ಚಾಮರಾಜನಗರ ಜಿಲ್ಲೆಯ ನಾಲ್ಕು ನಿರ್ದೇಶಕರ ಸ್ಥಾನಗಳ ಪೈಕಿ ಕೊಳ್ಳೇಗಾಲ ಕ್ಷೇತ್ರದಿಂದ ಹಾಲಿ ನಿರ್ದೇಶಕ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ನಾಲ್ಕನೇ ಬಾರಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.ಕೊಳ್ಳೇಗಾಲ ಹಾಗೂ ಹನೂರು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗುವ ಪ್ರತಿನಿಧಿ ಕ್ಷೇತ್ರದಿಂದ ನಾಲ್ಕನೇ ಬಾರಿ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಾಮಪತ್ರ ಸಲ್ಲಿಸಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಾಲ್ಕನೇ ಬಾರಿಗೆ ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಆರ್.ನರೇಂದ್ರ ಮೂರು ಬಾರಿಯೂ ಅವಿರೋಧ ಆಯ್ಕೆಯಾಗಿರುವುದು ವಿಶೇಷ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕಿಗೆ ಮೂರು ಬಾರಿ ನಿರ್ದೇಶಕರಾಗಿ, 30 ತಿಂಗಳು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, 5 ವರ್ಷಗಳ ಕಾಲ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಆರ್.ನರೇಂದ್ರ ಅವರ ತಂದೆಯವರಾದ ಮಾಜಿ ಸಚಿವ ದಿ.ರಾಜುಗೌಡ ಅವರು ಸಹ ಈ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಹನೂರು, ಬಂಡಳ್ಳಿ ಅಜ್ಜೀಪುರ, ಸೊಳೇರಿಪಾಳ್ಯ, ರಾಮಾಪುರ, ಹುತ್ತೂರು ಭದ್ರಯ್ಯನ ಹಳ್ಳಿ ಗೋಪಿನಾಥಂ, ಮಾರ್ಟಳ್ಳಿ ಹೂಗ್ಯಂ, ಲೊಕ್ಕನಹಳ್ಳಿ, ಪಿ ಜಿ ಪಾಳ್ಯ, ಕೌದಳ್ಳಿ ಚೆನ್ನಾಲಿಂಗನಹಳ್ಳಿ, ಟಿಬೆಟಿಯನ್ ಕ್ಯಾಂಪ್ ನ ದೊಂಡಲಿಂಗ್ ಕೊಳ್ಳೇಗಾಲ, ತಾಲೂಕಿನ ತೆಳ್ಳನೂರು, ಕುಂತೂರು ಸೇರಿದಂತೆ 17 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ಡೆಲಿಗೇಟ್ಸ್ ಮತ ಚಲಾಯಿಸಲಿದ್ದಾರೆ.ಕೊಳ್ಳೇಗಾಲ ಹಾಗೂ ಹನೂರು ತಾಲೂಕು ವ್ಯಾಪ್ತಿಯಲ್ಲಿ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಗಳು ಸಂಘಗಳು ಸೇರಿದಂತೆ 33 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹೊಸದಾಗಿ ಹಣ ಪಾವತಿ ಮಾಡಿ ಸದಸ್ಯತ್ವ ಪಡೆಯದೆ ಇರುವುದು, ಚುನಾವಣಾ ಪ್ರಕ್ರಿಯೆ ಮುಗಿದು ಹೊಸ ನಿರ್ದೇಶಕರು ಆಯ್ಕೆಯಾಗದೇ ಇರುವುದು ಹಾಗೂ ಇನ್ನೂ ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಸೂಪರ್ ಸೀಡ್ ಆಗಿರುವುದರಿಂದ 17 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಾತ್ರ ಮತ ಚಲಾವಣೆ ಮಾಡಲು ಅರ್ಹತೆ ಪಡೆದುಕೊಂಡಿದೆ.
ಭಾನುವಾರ ಮೈಸೂರಿನಲ್ಲಿ ನಾಲ್ಕನೇ ಬಾರಿಗೆ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಹಾಲಿ ನಿರ್ದೇಶಕ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ನಾಲ್ಕನೇ ಬಾರಿಯೂ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಾಮಪತ್ರ ಸಲ್ಲಿಕೆ ವೇಳೆ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಡೆಲಿಗೇಟ್ಗಳಾದ ಭದ್ರಯ್ಯನಹಳ್ಳಿ ಶ್ರೀರಂಗ, ಕಣ್ಣೂರು ಮಹಾದೇವಸ್ವಾಮಿ, ಹಾಜರಿದ್ದರು.