- ಹೊನ್ನಕಿರಣ ವಾರ್ಷಿಕ ಸಂಚಿಕೆ ಬಿಡುಗಡೆ, ವೇದಿಕೆಗಳ ಸಮಾರೋಪದಲ್ಲಿ ಶಾಂತನಗೌಡ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲೇ ಹೊನ್ನಾಳಿ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಮಧ್ಯ ಕರ್ನಾಟಕದ ಕೇಂದ್ರ ಬಿಂದು ಎಂದೂ ಹೇಳುತ್ತಾರೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕವನ್ನು ಸಂಪರ್ಕಿಸುವ ಹಾಗೂ 100 ವರ್ಷ ತುಂಬಿರುವ ತುಂಗಭದ್ರಾ ಹಳೆಯ ಸೇತುವೆ ಸಹ ಇಲ್ಲಿದೆ. ಈ ಸೇತುವೆಯ ನಿರ್ಮಾಣ ಪರಿಯನ್ನು ನೋಡಿಕೊಂಡು ಹೋಗಲು ಬ್ರಿಟಿಷರು ಹೊನ್ನಾಳಿಗೆ ಆಗಮಿಸಿದ ಬಗ್ಗೆಯೂ ಇತಿಹಾಸದಲ್ಲಿ ಉಲ್ಲೇಖವಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2ರ ಯೋಜನೆ, ರೆಡ್ ಕ್ರಾಸ್ ಘಟಕ, ರೋವರ್ಸ್, ರೇಂಜರ್ಸ, ಹೊನ್ನಕಿರಣ ವಾರ್ಷಿಕ ಸಂಚಿಕೆ ಬಿಡುಗಡೆ ಮತ್ತು ವಿವಿಧ ವೇದಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ವಿಶೇಷಗಳ ಹೊನ್ನಾಳಿ ಪಟ್ಟಣದಲ್ಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದೀರಿ. ನೀವುಗಳೇ ಭಾಗ್ಯವಂತರು ಎಂದು ಶ್ಲಾಘಿಸಿದರು.
ಕಾಲೇಜಿನ ಜೀವನ ಮತ್ತೆ ಸಿಗುವುದಿಲ್ಲ: ಕಾಲೇಜ್ ಲೈಫ್ ಗೋಲ್ಡನ್ ಲೈಫ್ ಎನ್ನುತ್ತಾರೆ. ಅಂತಹ ಜೀವನವನ್ನು ನೀವುಗಳು ಮಿಸ್ ಮಾಡಿಕೊಳ್ಳದೇ, ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಉತ್ತಮ ಅಂಕಗಳನ್ನು ಗಳಿಸಿ, ಪಾಲಕರಿಗೂ, ಕಾಲೇಜಿಗೂ, ಹೊನ್ನಾಳಿ ತಾಲೂಕಿಗೂ ಕೀರ್ತಿ ತರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಅಶೋಕ್ಕುಮಾರ್ ಪಾಳೇದ್ ಮಾತನಾಡಿ, ದಾವಣಗೆರೆ ವಿ.ವಿ.ಯಲ್ಲೇ ಅತಿ ಹೆಚ್ಚು ಶಿಸ್ತಿನ ಕಾಲೇಜು ಎಂದು ಹೊನ್ನಾಳಿ ಕಾಲೇಜು ಖ್ಯಾತಿ ಪಡೆದಿದೆ. ಇದಕ್ಕೆ ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾರಣ ಎಂದರು.ಪ್ರಾಚಾರ್ಯ ಡಾ. ಬಿ.ಜಿ. ಧನಂಜೆಯ ಮಾತನಾಡಿ, ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಶಾಸಕರು ಹೆಚ್ಚು ಸಹಕಾರ ನೀಡುತ್ತಿದ್ದಾರೆ. ಖುದ್ದಾಗಿ ಅವರೇ ಕಾಲೇಜಿನ ಸ್ಥಿತಿಗತಿಗಳ ಬಗ್ಗೆ ವಿಚಾರಿಸುತ್ತಾರೆ. ಶಾಸಕರು ಇಂಥ ಕಾಳಜಿ ಇಡೀ ರಾಜ್ಯಕ್ಕೇ ಮಾದರಿಯಾಗಿದೆ ಎಂದರು.
ಪಿಎಸ್ಐ ಕುಮಾರ್ ಮಾತನಾಡಿದರು. ಪ್ರಾಧ್ಯಾಪಕರಾದ ಹರಾಳು ಮಹಾಬಲೇಶ್ವರ್, ರಾಘವೇಂದ್ರ ರಾವ್, ಅಶೋಕ್, ಡಾ.ಬೀನಾ, ಪಿ.ಗೀತಾ ಇತರರು ಇದ್ದರು.- - -
-10ಎಚ್.ಎಲ್.ಐ2.ಜೆಪಿಜಿ:ಸಮಾರಂಭವನ್ನು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.