ಭಟ್ಕಳ: ತಾಲೂಕಿನ ಪ್ರಸಿದ್ಧ ಹಾಗೂ ಪುರಾತನ ಶ್ರೀ ಆದಿಧನ್ವಂತರೀ ಕ್ಷೇತ್ರ ಹೂತ್ಕಳದ ಸರ್ವರೋಗ ನಿವಾರಕ ಮಹಿಮೆ ಹೊಂದಿರುವ ಶ್ರೀ ಧನ್ವಂತರಿ ವಿಷ್ಣುಮೂರ್ತಿ, ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಜ. ೧೦ರಿಂದ ೧೩ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನೂತನ ಶ್ರೀ ಧನ್ವಂತರಿ ಭವನ ಲೋಕಾರ್ಪಣ, ಕೃತಕೋಟಿ ಶ್ರೀ ಧನ್ವಂತರಿ ಜಪ ಸಾಂಗತಾ ಹೋಮ ಹಾಗೂ ವರ್ಧಂತ್ಯುತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕಂಠ ಹೆಬ್ಬಾರ್ ಹೇಳಿದರು.
ಜ. ೧೩ರಂದು ೧೦೮ ಕಾಯಿ ಅಷ್ಟದ್ರವ್ಯ ಗಣಹವನ, ಸಾಮೂಹಿಕ ಶ್ರೀ ಮಹಾಧನ್ವಂತರಿಹವನ ಪೂರ್ಣಾಹುತಿ, ಇತರ ಧಾರ್ಮಿಕ ಕಾರ್ಯಕ್ರಮ, ಪ್ರಸಾದ ಭೋಜನ ನಡೆಯಲಿದೆ. ಜ. 12ರಂದು ರಾತ್ರಿ 8 ಗಂಟೆಯಿಂದ ಶಿವಧೂತ ಗುಳಿಗ ನಾಟಕ ಪ್ರದರ್ಶನ ಕೂಡ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ವೇ.ಮೂ. ಶಂಕರ ಭಟ್ಟ ತಿಳಿಸಿದರು.
ಜ. ೧೨ರಂದು ಬೆಳಗ್ಗೆ ೯ ಗಂಟೆಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಸಂಶೋಧನಾ ಕೇಂದ್ರ ಉದ್ಯಾವನ ಹಾಗೂ ಮಾರುಕೇರಿಯ ಶ್ರೀ ಧನ್ವಂತರಿ ಆಯುರ್ವೇದ ಅಭಿವೃದ್ಧಿ ಸೇವಾ ಪ್ರತಿಷ್ಠಾನದ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ, ಔಷಧಿ ವಿತರಣೆ ನಡೆಯಲಿದೆ. ಧನ್ವಂತರಿ ಕ್ಷೇತ್ರ ಸರ್ವರೋಗ ನಿವಾರಕ ಮಹಿಮೆ ಹೊಂದಿದೆ ಎಂದು ಕಿತ್ರೆ ದೇವಿಮನೆ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಬಾಲಚಂದ್ರ ಭಟ್ಟ ತಿಳಿಸಿದರು.ಕಿತ್ರೆ ದೇವಿಮನೆ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಮಾತನಾಡಿದರು.