)
- ಬೀದರ್ ಕಾರ್ಮಿಕರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಟ್ಯಾಂಕರ್ ಡಿಕ್ಕಿ
ನೆರೆಯ ತೆಲಂಗಾಣಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ಏಳು ಕಾರ್ಮಿಕರು ಮೃತಪಟ್ಟು, ಐವರು ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಮಂಗಳವಾರ ರಾತ್ರಿ ತೆಲಂಗಾಣಾದ ಜಹೀರಾಬಾದ್ ಬಳಿ ನಡೆದಿದೆ.ಬೀದರ್ ತಾಲೂಕಿನ ಸಿಂಧೋಲ್ ಗ್ರಾಪಂ ವ್ಯಾಪ್ತಿಯ ರಾಜಗೀರಾ ಗ್ರಾಮಕ್ಕೆ ಸೇರಿದ ಸುಮಾರು 15ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಸೋಯಾಬೀನ್ ಜಮೀನಿ ನಲ್ಲಿ ಕೂಲಿ ಕೆಲಸಕ್ಕಾಗಿ ಆಟೋ (ಟಂಟಂ) ವಾಹನದಲ್ಲಿ ತೆಲಂಗಾಣದ ಕೋಹಿರ್ ಗ್ರಾಮಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ವಾಪಸ್ ರಾಜಗೀರಾ ಗ್ರಾಮಕ್ಕೆ ಮರಳುತ್ತಿದ್ದಾಗ, ಹೈದ್ರಾಬಾದ್ ಮುಂಬೈ ರಾಷ್ಟ್ರೀಯ ಹೆದ್ದಾರಿಯ ಜಹೀರಾಬಾದ್ ತಾಲೂಕಿನ ಸತ್ವರ ಗ್ರಾಮದ ಬಳಿ ವೇಗವಾಗಿ ಬಂದ ಟ್ಯಾಂಕರ್ ಹಾಗೂ ಆಟೋ ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿ ಸಾವು-ನೋವು ಸಂಭವಿಸಿದೆ. ಅಪಘಾತದ ತೀವ್ರತೆಗೆ ಆಟೋದಲ್ಲಿದ್ದ ಏಳು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ರೇಖಾ ಸಂಜು, ನಿಖಿತಾ, ತುಳಜಮ್ಮಾ, ಶ್ರೀದೇವಿ ಮೊಗಲಪ್ಪ, ದೇವದಾಸ, ಮಾರುತಿ, ಕವಿತಾ ಗುಂಡಪ್ಪ ಹಾಗೂ ರೇಷ್ಮಾ ಶೈಲೇಶ ಎಂದು ಗುರುತಿಸಲಾಗಿದೆ.ಗಾಯಾಳುಗಳಿಗೆ ಚಿಕಿತ್ಸೆ:
ಘಟನೆಯಲ್ಲಿ ಏಳು ಜನ ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎನ್ನಲಾಗಿದೆ. ಗಾಯಗೊಂಡವರಿಗೆ ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ನೆರವಿಗೆ ಧಾವಿಸಿ, ಗಾಯಾಳುಗಳನ್ನು ಜಹೀರಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕಲ್ಪಿಸಿದ್ದಾರೆ.ರಾಜಗೀರಾ ಗ್ರಾಮದಿಂದ ನಿತ್ಯವೂ ನೂರಾರು ಕಾರ್ಮಿಕರು ನೆರೆಯ ತೆಲಂಗಾಣದ ಜಮೀನುಗಳಿಗೆ ಕೆಲಸಕ್ಕೆ ತೆರಳುತ್ತಿದ್ದರು. ಇಂದು ಸಂಭವಿಸಿದ ಈ ಭೀಕರ ದುರಂತದಿಂದಾಗಿ ರಾಜಗೀರಾ ಗ್ರಾಮಸ್ಥರು ಶೋಕಸಾಗರದಲ್ಲಿ ಮುಳುಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಜಹೀರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.----
ಸಚಿವ ಖಂಡ್ರೆ ತೀವ್ರ ಕಂಬನಿ,
ಸಚಿವ ಈಶ್ವರ ಖಂಡ್ರೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಬೀದರ್ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ, ತೆಲಂಗಾಣ ಸರ್ಕಾರದ ಸ್ಥಳೀಯ ಆಡಳಿತದೊಂದಿಗೆ ಸತತ ಸಂಪರ್ಕದಲ್ಲಿರಿ. ಮೃತದೇಹಗಳ ಮರಣೋತ್ತರ ಪರೀಕ್ಷೆ ಶೀಘ್ರವಾಗಿ ಮುಗಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಿ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬೀದರ್ ಜಿಲ್ಲಾಡಳಿತವೇ ಭರಿಸಲು ಸೂಚನೆ ನೀಡಿದ್ದಾರೆ. ಈ ಕಷ್ಟಕರ ಹಾಗೂ ನೋವಿನ ಸಂದರ್ಭದಲ್ಲಿ ಮೃತರ ಮತ್ತು ಗಾಯಾಳುಗಳ ಕುಟುಂಬದೊಂದಿಗೆ ಕರ್ನಾಟಕ ಸರ್ಕಾರ ಭದ್ರವಾಗಿ ನಿಲ್ಲಲಿದೆ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.