ನೋವಿನ ಬದುಕಿಗೆ ನೆಮ್ಮದಿಯ ತಾಣ ಹುಬ್ಬಳ್ಳಿಯ ಹಾಸ್ಪೈಸ್‌!

KannadaprabhaNewsNetwork |  
Published : Oct 11, 2025, 12:02 AM IST
ಮಜೇಥಿಯಾ ಫೌಂಡೇಶನ್‌ ಸ್ಥಾಪಿಸಿರುವ (ರಮೀಲಾ ಪ್ರಶಾಂತಿ ಮಂದಿರ) ಹಾಸ್ಪೈಸ್‌  | Kannada Prabha

ಸಾರಾಂಶ

ಕ್ಯಾನ್ಸರ್‌ ರೋಗದಿಂದ ಅಂತಿಮ ಘಟ್ಟದ ಬಳಲುತ್ತಿರುವ ರೋಗಿಗಳಿಗೆ ಮಗುವಿನಂತೆ ಆರೈಕೆ ಮಾಡುವ ಸಿಬ್ಬಂದಿ, ಪಂಚತಾರಾ ಹೊಟೇಲ್‌ನಂತಿರುವ ಕೊಠಡಿಗಳು, ಸುಂದರವಾದ ಪರಿಸರದ ನಡುವೆ ತಲೆಎತ್ತಿ ನಿಂತಿರುವ ಮಜೇಥಿಯಾ ಫೌಂಡೇಶನ್‌ನ ಹಾಸ್ಪೈಸ್‌ - ರಮೀಲಾ ಪ್ರಶಾಂತಿ ಮಂದಿರ ಸಂಕಷ್ಟ ಅನುಭವಿಸುತ್ತಿರುವ ರೋಗಿಗಳ ಮನಸ್ಸಿಗೆ ಒಂದಿಷ್ಟು ನೆಮ್ಮದಿ ಒದಗಿಸುವಲ್ಲಿ ಸಫಲವಾಗಿದೆ.

ಹುಬ್ಬಳ್ಳಿ: ಇಲ್ಲಿನ ನವನಗರದಲ್ಲಿ ಮಜೇಥಿಯಾ ಫೌಂಡೇಶನ್‌ ಸ್ಥಾಪಿಸಿರುವ (ರಮೀಲಾ ಪ್ರಶಾಂತಿ ಮಂದಿರ) ಹಾಸ್ಪೈಸ್‌ ನೋವಿನ ಬದುಕಿಗೆ ನೆಮ್ಮದಿಯ ತಾಣವಾಗಿ ಪರಿಣಮಿಸಿದೆ.

ಕ್ಯಾನ್ಸರ್‌ ಬಾಧೆಯಿಂದ ಅಂತಿಮ ಘಟ್ಟದಲ್ಲಿ ಬಳಲುತ್ತಿರುವ ರೋಗಿಗಳಿಗೆ ಮಗುವಿನಂತೆ ಆರೈಕೆ ಮಾಡುವ ಸಿಬ್ಬಂದಿ, ಪಂಚತಾರಾ ಹೊಟೇಲ್‌ನಂತಿರುವ ಕೊಠಡಿಗಳು, ಸುಂದರವಾದ ಪರಿಸರದ ನಡುವೆ ತಲೆಎತ್ತಿ ನಿಂತಿರುವ ಹಾಸ್ಪೈಸ್‌ ಇದೀಗ ದೇಶ- ವಿದೇಶದ ಗಮನ ಸೆಳೆಯುತ್ತಿದೆ.

ರೋಗಿಗಳಿಗೆ ಉಚಿತ ಉಪಶಮನ ಆರೈಕೆ ಸೌಲಭ್ಯವಿರುವ ಕೇಂದ್ರವೇ ಹಾಸ್ಪೈಸ್‌. ಯುರೋಪ್‌, ಅಮೆರಿಕ ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಇಂತಹ ಸೌಲಭ್ಯ ಇದೆ. ಉತ್ತರ ಕರ್ನಾಟಕದ ರೋಗಿಗಳಿಗೂ ಈ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಮಜೇಥಿಯಾ ಫೌಂಡೇಶನ್‌ ಇಲ್ಲಿನ ನವನಗರದ ದಿ ಕರ್ನಾಟಕ ಕ್ಯಾನ್ಸರ್ ಥೆರಪಿ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆವರಣದಲ್ಲಿ ಸ್ಥಾಪಿಸಿದೆ.

ಕ್ಯಾನ್ಸರ್‌ನ ಅಂತಿಮ ಘಟ್ಟದಲ್ಲಿ ದೇಹವು ಹಿಂಡಿ ಹಿಪ್ಪೆಯಾಗಿರುತ್ತದೆ. ಯಾವ ಚಿಕಿತ್ಸೆಗೂ ದೇಹ ಸ್ಪಂದಿಸುವುದಿಲ್ಲ. ದೈಹಿಕ ನೋವು ತಾಳಲಾಗದೇ ಮನಸ್ಸಿಗೂ ಆಘಾತವಾಗಿರುತ್ತದೆ. ಜೀವನದ ಬಗ್ಗೆ ತೀವ್ರ ರೋಸಿ ಹೋಗಿರುತ್ತಾರೆ. ಅವರಲ್ಲಿ ಅನಾಥ ಭಾವ ಕಾಡುತ್ತಿರುತ್ತದೆ. ಇಂತಹ ವೇಳೆ ಅವರಿಗೆ ಕಾಳಜಿ, ಸಹಾನುಭೂತಿ ಅವಶ್ಯ. ಅಂಥವರು ಜೀವನದ ಕೊನೆಯ ಕ್ಷಣಗಳನ್ನೂ ಆನಂದದಿಂದ ಕಳೆಯಬೇಕು, ಸಾವಲ್ಲೂ ಘನತೆ ಕಾಣಬೇಕು ಎನ್ನುವುದೇ ಈ ಹಾಸ್ಪೈಸ್‌ನ ಆಶಯ.

ಕಳೆದ 2023ರ ಏಪ್ರಿಲ್‌ 6ರಂದು ಆರಂಭಗೊಂಡ ಈ ಹಾಸ್ಪೈಸ್‌ ಕೇಂದ್ರದಲ್ಲಿ ಧಾರವಾಡ, ಕೊಪ್ಪಳ, ರಾಯಚೂರು, ವಿಜಯಪುರ, ಹಾವೇರಿ, ಉತ್ತರ ಕನ್ನಡ, ಚಿತ್ರದುರ್ಗ ಸೇರಿ ಸುತ್ತಮುತ್ತಲಿನ 15ಕ್ಕೂ ಅಧಿಕ ಜಿಲ್ಲೆಗಳ ಕ್ಯಾನ್ಸರ್‌ ರೋಗಿಗಳು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅಗತ್ಯವಿರುವ ರೋಗಿಗಳಿಗೆ ಇಲ್ಲಿ ಉಚಿತವಾಗಿ ಸೇವೆ ನೀಡಲಾಗುತ್ತಿದೆ.

ಪಂಚತಾರಾ ಹೋಟೆಲ್‌ನಂತಿರುವ ಈ ಕೇಂದ್ರದಲ್ಲಿ ಶುಚಿಯಾದ ಪ್ರಾಂಗಣ, ಸಮುದಾಯ ಭವನ, ಸುವ್ಯವಸ್ಥಿತ ಕೋಣೆಗಳು, ರುಚಿಯಾದ ಅಡುಗೆ, ಕಾಳಜಿಯ ಪ್ರೀತಿಯ ಆರೈಕೆ, ಮನರಂಜನೆಗಾಗಿ ಟಿವಿ ವ್ಯವಸ್ಥೆ ಮಾಡಲಾಗಿದೆ.

30 ಬೆಡ್‌ಗಳು: ಈ ಕೇಂದ್ರದಲ್ಲಿ ಒಟ್ಟು 30 ಬೆಡ್‌ಗಳ ವ್ಯವಸ್ಥೆಯಿದ್ದು, 10 ಬೆಡ್‌ ಮಹಿಳೆಯರಿಗೆ, 10 ಬೆಡ್‌ ಪುರುಷರಿಗಿದೆ. ಇನ್ನೂ 10 ವಿಶೇಷ ಬೆಡ್‌ಗಳಿದ್ದು, ಅವಶ್ಯಕತೆಯಿರುವವರಿಗೆ ಅತ್ಯಲ್ಪ ದರದಲ್ಲಿ ನೀಡಲಾಗುತ್ತಿದೆ. ಒಟ್ಟು 11 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ಜತೆಗೆ ಇರುವವರಿಗೂ ತಂಗಲು ಉತ್ತಮ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯ ರೋಗಿಗಳಿಗೆ ದಿನದ 24 ಗಂಟೆಗಳ ಕಾಲವೂ ಉಚಿತ ಸೇವೆ ನೀಡಲಾಗುತ್ತದೆ.

ರೆಸ್ಪೇಟ್‌ ಕೇರ್‌: ಮಕ್ಕಳ ಪರೀಕ್ಷಾ ಸಮಯ, ಮನೆಯಲ್ಲಿ ಮದುವೆ, ವಿದೇಶ ಪ್ರವಾಸ ಇದ್ದ ವೇಳೆ ಮನೆಯಲ್ಲಿ ಇದ್ದ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ, ಆರೈಕೆ ಮಾಡಲು ಇಲ್ಲಿ ರೆಸ್ಟೇಟ್‌ ಕೇರ್‌ ಪ್ರಾರಂಭಿಸಲಾಗಿದೆ. ಅವಶ್ಯಕತೆಯಿರುವವರು ಒಂದು ವಾರಗಳ ಕಾಲ ಇದರ ಸೌಲಭ್ಯವನ್ನು ಇಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಇಂದು ವಿಶ್ವ ಹಾಸ್ಪೈಸ್ ಪ್ಯಾಲಿಯೇಟರ್ ಕೇರ್ ದಿನಾಚರಣೆ: ಮಜೇಥಿಯಾ ಫೌಂಡೇಶನ್ ವತಿಯಿಂದ ಅ. 11ರಂದು ಬೆಳಗ್ಗೆ 11ಕ್ಕೆ ನವನಗರ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿರುವ ರಮಿಲಾ ಪ್ರಶಾಂತಿ ಮಂದಿರದಲ್ಲಿ ವಿಶ್ವ ಹಾಸ್ಪೈಸ್ ಪ್ಯಾಲಿಯೇಟರ್ ಕೇರ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ವಿಜಯಲಕ್ಷ್ಮೀ ದೇಶಮಾನೆ, ಕ್ಯಾನ್ಸರ್ ರೋಗ ತಜ್ಞ ಡಾ. ಬಿ.ಆರ್. ಪಾಟೀಲ ಪಾಲ್ಗೊಳ್ಳುವರು. ಫೌಂಡೇಶನ್ ಚೇರ್‌ಮನ್ ಜಿತೇಂದ್ರ ಮಜೇಥಿಯಾ ಅಧ್ಯಕ್ಷತೆ ವಹಿಸುವರು.

ಮುಂಬೈ ಮೂಲದವನಾಗಿದ್ದರೂ ನನ್ನ ಕರ್ಮಭೂಮಿ ಹುಬ್ಬಳ್ಳಿ. ಇಲ್ಲಿನ ದುರ್ಬಲ, ಅಸಹಾಯಕ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ 2008ರಲ್ಲಿ ಮಜೇಥಿಯಾ ಫೌಂಡೇಶನ್‌ ಹೆಸರಿನ ಸಂಸ್ಥೆ ಆರಂಭಿಸಿದ್ದೇವೆ. ಈ ವರೆಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸಿದ ತೃಪ್ತಿ ನನಗಿದೆ ಎಂದು ಮಜೇಥಿಯಾ ಫೌಂಡೇಶನ್‌ನ ಸ್ಥಾಪಕ ಜಿತೇಂದ್ರ ಮಜೇಥಿಯಾ ಹೇಳಿದರು. ಕ್ಯಾನ್ಸರ್‌ನಿಂದ ಬಳಲುತ್ತಿರುವ ನನಗೆ ಬಂಧು-ಬಳಗ ದೂರ ಮಾಡಿತು. ಇಂತಹ ವೇಳೆ ಈ ಪ್ರಶಾಂತಿ ಮಂದಿರದಲ್ಲಿ ದಾಖಲಿಸಿಕೊಂಡು ಮನೆಯವರಿಗಿಂತಲೂ ಪ್ರೀತಿ, ಕಾಳಜಿಯಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಎಷ್ಟು ಹೊಗಳಿದರೂ ಕಡಿಮೆಯೇ ಎಂದು ಹಾಸ್ಪೈಸ್‌ ಕೇಂದ್ರದಲ್ಲಿ ದಾಖಲಾಗಿರುವ ರೋಗಿ ಉಮೇಶ ಶಿರಹಟ್ಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು