ಹೋಟೆಲ್‌ ಬೋರ್ಡಲ್ಲಿ ಕನ್ನಡಿಗರಿಗೆ ಅ‍ವಮಾನ

KannadaprabhaNewsNetwork |  
Published : May 18, 2025, 01:10 AM ISTUpdated : May 18, 2025, 05:50 AM IST
Madivala PS | Kannada Prabha

ಸಾರಾಂಶ

ರಾಜಧಾನಿಯಲ್ಲಿ ಮತ್ತೆ ಕನ್ನಡಿಗರನ್ನು ಅಪಮಾನಿಸುವ ಘಟನೆ ನಡೆದಿದೆ. ಖಾಸಗಿ ಹೋಟೆಲ್‌ವೊಂದರ ಎಲ್‌ಇಡಿ ಡಿಜಿಟಲ್‌ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತ ಅಶ್ಲೀಲ ಪದ ಪ್ರದರ್ಶನವಾಗಿರುವುದು ಬೆಳಕಿಗೆ ಬಂದಿದೆ. 

  ಬೆಂಗಳೂರು : ರಾಜಧಾನಿಯಲ್ಲಿ ಮತ್ತೆ ಕನ್ನಡಿಗರನ್ನು ಅಪಮಾನಿಸುವ ಘಟನೆ ನಡೆದಿದೆ. ಖಾಸಗಿ ಹೋಟೆಲ್‌ವೊಂದರ ಎಲ್‌ಇಡಿ ಡಿಜಿಟಲ್‌ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತ ಅಶ್ಲೀಲ ಪದ ಪ್ರದರ್ಶನವಾಗಿರುವುದು ಬೆಳಕಿಗೆ ಬಂದಿದೆ. ಈ ರೀತಿ ಪದೇ ಪದೆ ಕನ್ನಡಿಗರನ್ನು ಅವಹೇಳನ ಮಾಡುತ್ತಿರುವುದಕ್ಕೆ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.

ತಾವರೆಕೆರೆ ಮುಖ್ಯರಸ್ತೆಯ ಭುವನಪ್ಪ ಲೇಔಟ್‌ನ ‘ಹೋಟೆಲ್‌ ಜಿಎಸ್‌ ಸೂಟ್ಸ್‌’ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಮಡಿವಾಳ ಪೊಲೀಸ್‌ ಠಾಣೆ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್‌ಐ ರಮೇಶ್‌ ಹೂಗಾರ್‌ ಅವರು ಹೋಟೆಲ್‌ ಮಾಲೀಕ ಜಮ್‌ಶದ್‌ ಮತ್ತು ಸರ್ಫರಾಜ್‌ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಹೋಟೆಲ್‌ ಸಿಬ್ಬಂದಿ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಎಲ್‌ಇಡಿ ಡಿಜಿಟೆಲ್‌ ಬೋರ್ಡ್‌ ಮಾಡಿಕೊಟ್ಟ ವ್ಯಕ್ತಿಗೂ ನೋಟಿಸ್‌ ಜಾರಿಗೊಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಕೋರಮಂಗಲದ ಕಂಪನಿಯೊಂದಕ್ಕೆ ಮೂರು ವರ್ಷದ ಹಿಂದೆ ಈ ಎಲ್‌ಇಡಿ ಡಿಜಿಟೆಲ್‌ ಬೋರ್ಡ್‌ ಮಾಡಿಕೊಡಲು ಗುತ್ತಿಗೆ ನೀಡಲಾಗಿತ್ತು. ಇದರ ನಿರ್ವಹಣೆ ಹೊಣೆಯನ್ನೂ ಆ ಕಂಪನಿಗೆ ವಹಿಸಲಾಗಿತ್ತು. ಮೇ 8ರ ಬಳಿಕ ಈ ಬೋರ್ಡ್‌ನಲ್ಲಿ ಬೇರೆ ಬೇರೆ ಪದಗಳು ಸ್ಕ್ರಾಲ್‌ ಆಗುತ್ತಿದ್ದು, ಈ ಸಂಬಂಧ ಹೋಟೆಲ್‌ನವರು ಕಂಪನಿಗೆ ದೂರು ನೀಡಿದ್ದರು ಎಂಬುದು ತಿಳಿದು ಬಂದಿದೆ. ಸದ್ಯ ಹೋಟೆಲ್‌ ಮಾಲೀಕರು ವಿದೇಶದಲ್ಲಿದ್ದಾರೆ. ಮಾಲೀಕರು ಸೇರಿ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳಿಗೂ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮಾಡುವುದಾಗಿ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.

ದೂರಿನಲ್ಲಿ ಏನಿದೆ?:

ಮದ್ದೇರಿ ಚೇತನ್ ಗೌಡ ಎಂಬವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮೇ 16ರಂದು ರಾತ್ರಿ ಜಿಎಸ್ ಸೂಟ್ಸ್‌ ಎಂಬ ಹೋಟೆಲ್ ಎದುರು ಅಳವಡಿಸಿರುವ ಡಿಜಿಟಲ್ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತು ತೀರಾ ಅವಹೇಳನಕಾರಿ ಇಂಗ್ಲಿಷ್‌ ಬರಹ ಹಾಕಲಾಗಿದೆ ಎಂದು ಪೋಸ್ಟ್ ಮಾಡಿದ್ದರು. ಶನಿವಾರ ಬೆಳಗ್ಗೆ ಈ ಪೋಸ್ಟ್‌ ಗಮನಿಸಿರುವ ಮಡಿವಾಳ ಪೊಲೀಸ್‌ ಠಾಣೆಯ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್‌ಐ ರಮೇಶ್‌ ಹೂಗಾರ್‌, ತಕ್ಷಣ ಹೋಟೆಲ್‌ ಬಳಿ ತೆರಳಿ ಪರಿಶೀಲಿಸಿದ್ದಾರೆ. ಬಳಿಕ ಆ ಡಿಜಿಟಲ್‌ ಬೋರ್ಡ್‌ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿ ಈ ಡಿಜಿಟಲ್‌ ಡಿಸ್‌ ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರ ಕುರಿತ ಅಶ್ಲೀಲ ಬರಹ ಸ್ಕ್ರಾಲ್‌ ಆಗುತ್ತಿದ್ದುದನ್ನು ಖಚಿತಪಡಿಸಿಕೊಂಡಿದ್ದಾರೆ.

ನಂತರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಸಂಬಂಧ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹ್ಯಾಕ್‌ ಆಗಿದೆ ಎಂದ ಸಿಬ್ಬಂದಿ

ಪೊಲೀಸರ ವಿಚಾರಣೆ ವೇಳೆ ಈ ಎಲ್‌ಇಡಿ ಡಿಜಿಟೆಲ್‌ ಡಿಸ್‌ ಪ್ಲೇ ಬೋರ್ಡ್‌ ಹ್ಯಾಕ್‌ ಆಗಿರುವ ಸಾಧ್ಯತೆಯಿದೆ ಎಂದು ಹೋಟೆಲ್‌ ಸಿಬ್ಬಂದಿ ಹೇಳಿದ್ದಾರೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಬೋರ್ಡ್‌ ಬದಲಿಸಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಮೂಲ್ ಸೌಲಭ್ಯ ಸದುಪಯೋಗಪಡೆಯಿರಿ: ರೈತರಿಗೆ ಸತೀಶ್ ಸಲಹೆ
ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ