ವಿದ್ಯಾರ್ಥಿನಿ ಮೀನಾ ಕುಟುಂಬಕ್ಕೆ ಶಾಸಕ ಮನೆ ಕೊಡುಗೆ

KannadaprabhaNewsNetwork |  
Published : Jun 09, 2025, 04:05 AM IST
ಫಲಿತಾಂಶ ದಿನವೇ ಪ್ರಿಯಕರನಿಂದ ಭೀಕರವಾಗಿ ಹತ್ಯೆಗೊಳಗಾದ ಸೂರ್ಲಬ್ಬಿ ಯ  ವಿದ್ಯಾರ್ಥಿನಿ ಕುಟುಂಬಕ್ಕೆ ಮನೆ ಕಟ್ಟಿಸಿಕೊಟ್ಟ ಶಾಸಕ ಡಾ.ಮಂಥರ್ ಗೌಡ | Kannada Prabha

ಸಾರಾಂಶ

ಕಳೆದ ವರ್ಷ ಹತ್ತನೇ ತರಗತಿ ಫಲಿತಾಂಶ ಬಂದ ಕೆಲವೇ ಹೊತ್ತಿನಲ್ಲಿ ಪ್ರಿಯಕರನಿಂದ ಭೀಕರ ಹತ್ಯೆಗೊಳಗಾದ ವಿದ್ಯಾರ್ಥಿನಿ ಮೀನಾ ಕುಟುಂಬಕ್ಕೆ ಅಂದು ನೀಡಿದ ವಾಗ್ಧಾನದಂತೆ ಅಂದಾಜು 8. 5 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟ ಮಡಿಕೇರಿ ಶಾಸಕ ನುಡಿದಂತೆ ನಡೆದಿದ್ದಾರೆ.

ಮುರಳೀಧರ್ ಶಾಂತಳ್ಳಿ

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕಳೆದ ವರ್ಷ ಹತ್ತನೇ ತರಗತಿ ಫಲಿತಾಂಶ ಬಂದ ಕೆಲವೇ ಹೊತ್ತಿನಲ್ಲಿ ಪ್ರಿಯಕರನಿಂದ ಭೀಕರ ಹತ್ಯೆಗೊಳಗಾದ ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ವಿದ್ಯಾರ್ಥಿನಿ ಮೀನಾ (೧೬) ಕುಟುಂಬಕ್ಕೆ ಅಂದು ನೀಡಿದ ವಾಗ್ದಾನದಂತೆ ಅಂದಾಜು 8.5 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನುಡಿದಂತೆ ನಡೆದಿದ್ದಾರೆ.

ಸೋಮವಾರಪೇಟೆ ತಾಲೂಕಿನ ಕುಗ್ರಾಮವಾದ ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಮತ್ತು ಜಾನಕಿ ದಂಪತಿ ಪುತ್ರಿ ಮೀನಾ, ಕಳೆದ ವರ್ಷ ಮೇ ೧೦ರಂದು ಹತ್ತನೇ ತರಗತಿಯಲ್ಲಿ ಉತ್ತೀರ್ಣಳಾಗಿ ಭವಿಷ್ಯ ರೂಪಿಸುವ ಕನಸನ್ನು ಹೊಂದಿದ್ದ ವಿದ್ಯಾರ್ಥಿನಿ. ಆದರೆ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಎಂಬಾತನೊಂದಿಗೆ ಅದೇ ದಿನ ಮೀನಾಳೊಂದಿಗೆ ನಿಶ್ಚಿತಾರ್ಥ ಆಗಿತ್ತು. ಆದರೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಓದುವ ಹಂಬಲವಿದ್ದ ಮೀನಾ, ಈಗಲೇ ಮದುವೆ ಬೇಡ ಎಂದು ಕುಟುಂದವರೊಂದಿಗೆ ಹೇಳಿದ್ದರಿಂದ ಅದೇ ದಿನ ಸಂಜೆ ಅಂದರೆ ಮೇ ೧೦ರಂದು ಮಚ್ಚಿನಿಂದ ರುಂಡವನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ. ನಂತರ ಪೊಲೀಸರ ಬಲೆಗೆ ಬಿದ್ದಿದ್ದ.

ಆ ಸಂದರ್ಭ ಶಾಸಕ ಡಾ.ಮಂತರ್ ಗೌಡ, ಮೃತೆ ಮೀನಾಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸಂದರ್ಭ, ತಮಗೆ ವಾಸಿಸಸಲು ಸ್ವಂತ ಮನೆಯಿಲ್ಲ, ಸಹಾಯ ಮಾಡಿ ಎಂದು ಮನೆಯವರು ಮನವಿ ಮಾಡಿದ್ದರು. ಮಾನವೀಯತೆ ಮೆರೆದ ಶಾಸಕರು ಮನೆ ಜಾಗಕ್ಕೆ ಯಾವುದೇ ದಾಖಲೆಯಿಲ್ಲದಿರುವುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು, ತಮ್ಮ ಹಾಗೂ ಹಿತೈಷಿಗಳ ನೆರವಿನೊಂದಿಗೆ ಅಂದಾಜು 8.5 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೆ ಒಂದು ವರ್ಷದೊಳಗೆ ನಿರ್ಮಿಸಿ ಜೂ.೯ರಂದು ಮನೆಯನ್ನು ಹಸ್ತಾಂತರಿಸುತ್ತಿದ್ದಾರೆ.

ಶಾಸಕರ ಮಾನವೀಯತೆಗೆ ನಾವುಗಳು ಚಿರಋಣಿಯಾಗಿದ್ದೇವೆ. ಆದರೆ ಮಗಳಿಲ್ಲದ ನೋವು ನಿತ್ಯ ನಿರಂತರವಾಗಿ ಕಾಡುತ್ತಿದೆ. ಅವಳ ಭವಿಷ್ಯ ಫಲಿತಾಂಶ ದಿನದಂದೇ ಕೊನೆಗೊಳ್ಳುತ್ತದೆ ಎಂದು ನಾವು ಭಾವಿಸಿರಲಿಲ್ಲ. ವಿಧಿಯಾಟಕ್ಕೆ ಮಗಳು ಬಲಿಯಾದಳು ಎಂದು ಕುಟುಂಬಸ್ಥರು ರೋಧಿಸುತ್ತಾರೆ.

ಮೃತೆ ಮೀನಾಳ ಮನೆಗೆ ಭೇಟಿ ನೀಡಿದ ಸಂದರ್ಭ ತಮಗೆ ವಾಸಿಸಲು ಉತ್ತಮವಾದ ಮನೆಯಿಲ್ಲ. ಮಳೆಗಾಲ ಬಂತೆಂದರೆ ಹೆದರಿಕೆಯಾಗುತ್ತೆ. ಈ ಮೊದಲು ಭೂಕುಸಿತ ಸಂಭವಿಸಿದಾಗ ಅನುಭವಿಸಿಯಾಗಿದೆ. ಆದ್ದರಿಂದ ಮನೆ ನಿರ್ಮಿಸಿಕೊಡಿ ಎಂದು ಮನವಿ ಮಾಡಿದ್ದರು. ಆ ಸಂದರ್ಭ ನೀಡಿದ ಭರವಸೆಯಂತೆ ನಾನು ಹಾಗೂ ಹಿತೈಷಿಗಳೂ ಸೇರಿ ಮನೆ ನಿರ್ಮಿಸಿಕೊಟ್ಟಿದ್ದೇವೆ.

। ಡಾ.ಮಂತರ್‌ ಗೌಡ, ಮಡಿಕೇರಿ ಶಾಸಕ.

ಸುಮಾರು ೮ ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗಿದೆ. ಇದೇ ರೀತಿಯ ಸಮಾಜ ಸೇವೆಯನ್ನು ಮುಂದುವರಿಸಲು ದೇವರು ಶಾಸಕ ಮಂತರ್ ಗೌಡ ಅವರಿಗೆ ಆಶೀರ್ವಾದ ನೀಡಲಿ. ಮೃತೆ ಮೀನಾಳ ಕುಟುಂಬಕ್ಕೆ ಒಳ್ಳೆಯದಾಗಲಿ.

। ಬಿ.ಬಿ.ಸತೀಶ್ ಕುಮಾರ್, ಅಧ್ಯಕ್ಷರು, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್

ಇಂದು ಮೀನಾ ಪೋಷಕರಿಗೆ ಮನೆ ಹಸ್ತಾಂತರ

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನ ಭೀಕರವಾಗಿ ಹತ್ಯೆಯಾಗಿದ್ದ ವಿದ್ಯಾರ್ಥಿನಿ ಮೀನಾ ಅವರ ಪೋಷಕರಿಗೆ ಸಾಂತ್ವನದ ಭಾಗವಾಗಿ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಶಾಸಕ ಮಂತರ್‌ ಗೌಡ ನೀಡಿದ್ದು, ಇದೀಗ ಮನೆ ನಿರ್ಮಾಣಗೊಂಡಿದೆ. ಮನೆಯನ್ನು ಸೋಮವಾರ ಬೆಳಗ್ಗೆ 11.30ಕ್ಕೆ ಮುಟ್ಲು ಗ್ರಾಮದಲ್ಲಿ ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ.

ಈ ಸಮಾರಂಭದಲ್ಲಿ ವಿವಿಧ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್, ಕೆಪಿಸಿಸಿ ಪದಾಧಿಕಾರಿಗಳು, ಡಿಸಿಸಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಲಯ ಕಾಂಗ್ರೆಸ್ ಅಧ್ಯಕ್ಷರು ಪದಾಧಿಕಾರಿಗಳು, ಬೂತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಘಟಕ, ವಿವಿಧ ಘಟಕ ಸೆಲ್‌ಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸರ್ಕಾರಿ ನಾಮನಿರ್ದೇಷಿತ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಬೆಂಬಲಿತ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ತಪ್ಪದೇ ಹಾಜರಿರಬೇಕಾಗಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌