ನಗರ ಆಶ್ರಯ ಸಮಿತಿ ಸಭೆ
ಪುರಸಭೆ ವ್ಯಾಪ್ತಿಯಲ್ಲಿ ಮುಂದಿನ ೨ ವರ್ಷಗಳ ಅವಧಿಯಲ್ಲಿ ನಿವೇಶನ ಮತ್ತು ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಒದಗಿಸುವ ಉದ್ದೇಶ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಳಕಳಿಯಿಂದ ಕೆಲಸ ಮಾಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಸೂಚನೆ ನೀಡಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ನಗರ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಕಷ್ಟು ನಿವೇಶನಗಳು ಅತಿಕ್ರಮಣಗೊಂಡಿವೆ. ಅವೆಲ್ಲವನ್ನೂ ತೆರವುಗೊಳಿಸಿ. ನಿವೇಶನ ಹಂಚಿಕೆ ಮಾಡಿದ್ದರೂ ಹಲವರು ಮನೆ ನಿರ್ಮಿಸಿಕೊಳ್ಳದೇ ಹಾಗೆಯೇ ಬಿಟ್ಟಿದ್ದಾರೆ. ಅವೆಲ್ಲವನ್ನೂ ಸೇರಿಸಿ ಲಭ್ಯವಿರುವ ಒಟ್ಟು ನಿವೇಶನಗಳನ್ನು ಪಟ್ಟಿ ಮಾಡಿ. ಮಾರ್ಚ್ ಮೊದಲ ವಾರ ಮತ್ತೆ ಸೇರೋಣ. ಆ ಸಭೆಯಲ್ಲಿ ಲಭ್ಯ ನಿವೇಶನಗಳ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು.ಈಗಾಗಲೇ ಸ್ಲಂ ಬೋರ್ಡ್ನಿಂದ ಸಾವಿರ, ವಸತಿ ಯೋಜನೆಯಡಿ ಸಾವಿರ ಮನೆಗಳು ಮಂಜೂರಾಗಿವೆ. ವಸತಿ ಯೋಜನೆಯಡಿ ಇದುವರೆಗೂ ಕೇವಲ ೪೦೫ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಉಳಿದಿರುವ ಅರ್ಹರನ್ನೂ ಗುರುತಿಸಿ ಮನೆ ನಿರ್ಮಿಸಿಕೊಡುವ ಅಗತ್ಯವಿದೆ ಎಂದು ಶಾಸಕ ಮಾನೆ ಹೇಳಿದರು.
ತಹಸೀಲ್ದಾರ್ ರೇಣುಕಾ ಎಸ್., ಮುಖ್ಯಾಧಿಕಾರಿ ಜಗದೀಶ ವೈ.ಕೆ., ನಗರ ಆಶ್ರಯ ಸಮಿತಿ ಸದಸ್ಯರಾದ ವಿನಾಯಕ ಬಂಕನಾಳ, ನಿಯಾಜ್ಅಹ್ಮದ್ ಸರ್ವಿಕೇರಿ, ಮೇಘಾ ಸುಲಾಖೆ ಭಾಗವಹಿಸಿದ್ದರು.