ಹುಬ್ಬಳ್ಳಿ: ವಸತಿ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ.ಆರ್. ಪಾಟೀಲ ಅವರು ಸತ್ಯವಾದ ಮಾತನ್ನೇ ಹೇಳಿದ್ದಾರೆ. ಕಾಂಗ್ರೆಸ್ನಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ವಸತಿ ಸಚಿವ ಜಮೀರ್ ಅಹ್ಮದ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದರು
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ಆರ್. ಪಾಟೀಲ ಹೇಳಿಕೆಯನ್ನು ಶಾಸಕ ರಾಜು ಕಾಗೆ ಸಹ ಬೆಂಬಲಿಸಿದ್ದಾರೆ. ಹಲವು ಸಚಿವರ ಮೇಲೆ ಕಾಂಗ್ರೆಸ್ನ ನಾಯಕರೇ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಬಗೆ ತಿಳಿಯುತ್ತಿದೆ ಎಂದರು.ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಇರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎನ್ನುವುದು ಈ ಮೂಲಕ ಸಾಬೀತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸಚಿವ ಜಮೀರ್ಅಹ್ಮದ್ ಖಾನ್ ಅವರ ಮೇಲೆ ಆರೋಪ ಬಂದಿದೆ. ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದರು.
ಅನುದಾನದ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟೆಂಗಿನಕಾಯಿ, 2 ವರ್ಷದಲ್ಲಿ ಅನುದಾನದ ಬಗ್ಗೆ ಸಾಕಷ್ಟು ಬಾರೀ ನಾವು ಧ್ವನಿ ಎತ್ತಿದ್ದೇವೆ. ಆದರೂ ಅನುದಾನದ ಇದೆ ಅಂತ ಹೇಳುತ್ತಿದ್ದರು. ಈಗ ಅವರಿಂದಲೇ ಸತ್ಯ ಹೊರಬರುತ್ತಿದೆ. ಸತ್ಯ ಯಾವತ್ತಿದ್ದರೂ ಹೊರಗಡೆ ಬರಲೇಬೇಕು. ಹಿರಿಯ ಕಿರಿಯ ಶಾಸಕರು ಸಹ ಈ ಬಗ್ಗೆ ಧ್ವನಿ ಎತ್ತುತ್ತಾ ಇದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅನುದಾನದ ಕೊರತೆ ಆಗುತ್ತಿದೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ನಾವು ಇದೇ ಮಾತನ್ನು ಹೇಳಿದಾಗ ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಅಂತ ಹೇಳಿದ್ದರು. ಈಗ ಸತ್ಯವನ್ನು ಕಾಂಗ್ರೆಸ್ ನ ಹಿರಿಯ ನಾಯಕರೇ ಬಾಯಿ ಬಿಡುತ್ತಿದ್ದಾರೆ ಎಂದರು.ಕೇಂದ್ರದ ಅನುದಾನ ತರುವಂಥದ್ದಲ್ಲ ಕೇಂದ್ರ ಯಾವಾಗ ಎಷ್ಟು ಕೊಡಬೇಕು. ಆಗ ಅಷ್ಟು ಕೊಟ್ಟೆ ಕೊಡುತ್ತದೆ ಎಂದರು.
ಹೈಕಮಾಂಡ್ ತೀರ್ಮಾನಿಸುತ್ತೆ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಂತೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಅಧ್ಯಕ್ಷರ ಬದಲಾವಣೆ ರಾಷ್ಟ್ರೀಯ ನಾಯಕರೇ ಮಾಡುತ್ತಾರೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ನಂತರ ತೀರ್ಮಾನ ಕೈಗೊಳ್ಳುತ್ತಾರೆ. ಬಿಜೆಪಿ ಕಾರ್ಯಕರ್ತರಾಗಿ ಯಾರೇ ಅಧ್ಯಕ್ಷರಾದರೂ ನಾವು ಸ್ವಾಗತ ಮಾಡುತ್ತೇವೆ ಎಂದರು.