ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಜನಸ್ಪಂದನ ಕಾಟಾಚಾರಕ್ಕೆ ಸಿಬ್ಬಂದಿ ಕಳಿಸಿದ್ರೆ ಹೇಗೆ ? : ಸಿದ್ದು ಸವದಿ

KannadaprabhaNewsNetwork | Published : Jun 10, 2025 2:45 AM

ಸಾರ್ವಜನಿಕ ಸಮಸ್ಯೆಗೆ ತಕ್ಷಣದಿಂದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿದ ಪ್ರಮುಖ ಯೋಜನೆಗಳಲ್ಲೊಂದಾದ ಜನಸ್ಪಂದನ ಸಭೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಬಾರದೇ ಕಾಟಾಚಾರಕ್ಕೆಂಬಂತೆ ಸಿಬ್ಬಂದಿ ಕಳಿಸಿದರೆ ಜನರ ಸಮಸ್ಯೆಗಳು ಹೇಗೆ ಪರಿಹಾರ ಕಾಣಲು ಸಾಧ್ಯ? ಎಂದು ತೇರದಾಳ ಶಾಸಕ ಸಿದ್ದು ಸವದಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಾರ್ವಜನಿಕ ಸಮಸ್ಯೆಗೆ ತಕ್ಷಣದಿಂದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿದ ಪ್ರಮುಖ ಯೋಜನೆಗಳಲ್ಲೊಂದಾದ ಜನಸ್ಪಂದನ ಸಭೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಬಾರದೇ ಕಾಟಾಚಾರಕ್ಕೆಂಬಂತೆ ಸಿಬ್ಬಂದಿ ಕಳಿಸಿದರೆ ಜನರ ಸಮಸ್ಯೆಗಳು ಹೇಗೆ ಪರಿಹಾರ ಕಾಣಲು ಸಾಧ್ಯ? ಎಂದು ತೇರದಾಳ ಶಾಸಕ ಸಿದ್ದು ಸವದಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಬಕವಿ ಬನಹಟ್ಟಿ ತಹಸೀಲ್ದಾರ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅರಣ್ಯ ಇಲಾಖೆಯ ಜಾಗೆ ಡೀಫಾರೆಸ್ಟ್‌ ಆಗಿವೆ. ಆ ಸ್ಥಳಗಳಲ್ಲಿ ಕೆಎಚ್‌ಡಿಸಿ ನೇಕಾರ ಮನೆಗಳು ಸೇರಿದಂತೆ ಅನೇಕ ಮನೆಗಳಿದ್ದು, ಅವುಗಳಿಗೆ ಹಕ್ಕುಪತ್ರ ಕೊಡಬೇಕು, ಇನ್ನೂ ಯಾಕೆ ಕೊಟ್ಟಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ ಅಧಿಕಾರಿಗಳು ಬಾರದೆ ಸಿಬ್ಬಂದಿಯೋರ್ವರನ್ನು ಕಳಿಸಿದ್ದರಿಂದ ಹೀಗಾದರೆ ಸಮಸ್ಯೆ ಹೇಗೆ ಪರಿಹಾರವಾಗುತ್ತವೆ ಉತ್ತರ ಭೂಪರೆಲ್ಲಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

ಕಳೆದ ತಿಂಗಳು ಜರುಗಿದ ಜನಸ್ಪಂದನ ಸಭೆಯಲ್ಲಿ ಒಟ್ಟು ೧೬೨ ಅರ್ಜಿಗಳಲ್ಲಿ ಎಷ್ಟು ಅರ್ಜಿ ಇತ್ಯರ್ಥ ಮಾಡಿದ್ದೀರಿ ಎಂದು ತಹಸೀಲ್ದಾರಗೆ ಶಾಸಕರು ಪ್ರಶ್ನಿಸಿದರು. ಎಲ್ಲ ೧೬೨ ಅರ್ಜಿದಾರರ ಸಮಸ್ಯೆಗಳು ಇತ್ಯರ್ಥವಾಗಿವೆ ಎಂದು ತಹಸೀಲ್ದಾರ ಗಿರೀಶ ಸ್ವಾದಿ ಉತ್ತರಿಸಿದರು.ಮಹಾಲಿಂಗಪುರ ನಗರದ ಕೆಂಗೇರಿಮಡ್ಡಿಯಲ್ಲಿ ವಾಸಿಸುವ ೨೨೦ ಕುಟುಂಬಗಳಿಗೆ ಎರಡು ವರ್ಷಗಳಿಂದ ಹಕ್ಕುಪತ್ರಗಳನ್ನೇ ನೀಡಿಲ್ಲ, ಪ್ರತಿ ಜನಸ್ಪಂದನ ಸಭೆಯಲ್ಲಿ ನಮ್ಮ ಸಮಸ್ಯೆ ಹೇಳುತ್ತೇವೆ, ಆದರೆ ಪರಿಹಾರ ಸಿಗೋದಿಲ್ಲ ಎಂದು ವಾರ್ಡ್ ಸದಸ್ಯರು ಪ್ರಶ್ನಿಸಿದರು. ಅದಕ್ಕೆ ಶಾಸಕರು ಎಲ್ಲ ಅರ್ಜಿಗಳ ಸಮಸ್ಯೆಗಳು ಪರಿಹಾರವಾಗಿವೆ ಎನ್ನುತ್ತೀರಿ ಹೀಗೆನಾ ಕೆಲಸ ಮಾಡೋದು ಎಂದಾಗ ತಹಸೀಲ್ದಾರರು ಕೇವಲ ೧೫ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಮದನಮಟ್ಟಿ ಪುನರ್ವಸತಿ ಕೇಂದ್ರ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯ ೮ ಎಕರೆಯಷ್ಟು ಜಾಗ ಖಾಲಿಯಿದೆ. ಅದನ್ನು ನಗರಸಭೆಯವರು ಸುಪವರ್ದಿಗೆ ಪಡೆದುಕೊಂಡು ಅನೇಕ ಕುಟುಂಬಗಳಿಗೆ ೧+೨ ಯೋಜನೆಯಡಿ ಆಶ್ರಯ ಮನೆಗಳನ್ನು ಕಟ್ಟಿಸಿಕೊಡಬೇಕು. ಜಗದಾಳ ರಸ್ತೆಯಲ್ಲಿ ೧೦೦*೧೦೦ ಸರ್ಕಾರಿ ಜಾಗೆ ಖಾಲಿ ಬಿದ್ದಿದ್ದು, ಅದನ್ನು ಮತ್ಯಾರೋ ಅಕ್ರಮ ಮಾಡಿಕೊಳ್ಳುವುದರೊಳಗೆ ಪಶು ಆಸ್ಪತ್ರೆಗೆ ಬಳಸಿದರೆ ಸೂಕ್ತವಾಗುತ್ತದೆ ಇಂತಹ ಹತ್ತು ಹಲವು ಸಮಸ್ಯೆಗಳು ತಾಲೂಕು ವಾಪ್ತಿಯಲ್ಲಿವೆ. ಅಧಿಕಾರಿಗಳು ಸಮರ್ಪಣಾ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಕಡುಬಡವರು ನಿಮ್ಮನ್ನು ನೆನೆಯುತ್ತಾರೆ. ವೃತ್ತಿ ಜೀವನ ಸಾರ್ಥಕವಾಗಲು ಕಾನೂನಿನಡಿಯಲ್ಲಿ ಸಾರ್ವಜನಿಕರ ಸೇವೆ ಮಾಡಿ ನಿಮ್ಮ ಸೇವಾ ವೃತ್ತಿಯಲ್ಲಿ ಗೌರವ ಸಂಪಾದಿಸಿಕೊಳ್ಳಿ ಎಂದು ಶಾಸಕ ಸವದಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಪತಿಯು ನಿಧನವಾಗಿ ೨ ವರ್ಷದಿಂದ ಪರಿಹಾರ ಹಣ ಬಂದಿಲ್ಲ, ಜಮೀನು ಖರೀದಿಸಿದ ಬಳಿಕ ಖರೀದಿದಾರರ ಪರ ಪಹಣಿ ಬರುತ್ತಿಲ್ಲ, ನಮ್ಮ ಸಮುದಾಯಕ್ಕೆ ಸಮುದಾಯ ಭವನ ನಿರ್ಮಿಸಿಕೊಡಬೇಕು ಸೇರಿದಂತೆ ಅನೇಕ ಸಮಸ್ಯೆಗಳ ಕುರಿತಾದ ಅರ್ಜಿಗಳು ಸಲ್ಲಿಕೆಯಾದವು. ರಬಕವಿ ನಗರದ ಅನೇಕ ಹೊಸ ಬಡಾವಣೆಗಳಲ್ಲಿ ಸಾರ್ವಜನಿಕ ಜಾಗೆ ಬಳಕೆಗೆ ಇದ್ದು, ಅದರಲ್ಲಿ ಸುಂದರವಾದ ಸಮುದಾಯ ಭವನ ನಿರ್ಮಿಸಬೇಕು ಎಂದು ರಬಕವಿ ಮಲ್ಲಿಕಾರ್ಜುನ ಸಮಸ್ತ ದೈವ ಮಂಡಳಿಯವರು ಅರ್ಜಿ ಸಲ್ಲಿಸಿದರು, ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಶೀಘ್ರದಲ್ಲಿ ಸ್ಥಳ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ್‌ ಗಿರೀಶ ಸ್ವಾದಿ, ತೇರದಾಳ ತಹಸೀಲ್ದಾರ್‌, ವಿಜಯಕುಮಾರ ಕಡಕೋಳ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿದ್ದಪ್ಪ ಪಟ್ಟುಹಾಳ, ಪೌರಾಯುಕ್ತ ಜಗದೀಶ ಈಟಿ, ಗ್ರಾಮಲೆಕ್ಕಾಧಿಕಾರಿ ಸದಾಶಿವ ಕುಂಬಾರ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು, ವೈದ್ಯರು, ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು. ಮಲ್ಲು ಕವಟಗೊಪ್ಪ ವಂದಿಸಿದರು.

ಮೂರು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ:

ಜನಸ್ಪಂದನ ಸಭೆಯಲ್ಲಿ 16 ಅರ್ಜಿಗಳನ್ನು ಸಲ್ಲಿಕೆಯಾದವು. ಸ್ಥಳದಲ್ಲಿಯೇ ಮೂರು ಅರ್ಜಿಗಳಿಗೆ ಪರಿಹಾರ ದೊರಕಿಸಿಕೊಟ್ಟರು, ಉಳಿದ ಎಲ್ಲ ಸಮಸ್ಯೆಗಳಿಗೆ ವಾರದೊಳಗೆ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಪೋರ್ಟಲ್‌ನಲ್ಲಿ ಕಳಿಸಲಾಗುವುದು. ೩೦ ದಿನಗಳಲ್ಲಿ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಶಾಸಕರು ಭರವಸೆ ನೀಡಿದರು.