ಐಎಸ್‌ಪಿಆರ್‌ಎಲ್‌ ಉದ್ಯೋಗಿಗಳಿಗೆ ಎಚ್‌ಆರ್‌ ಪಾಲಿಸಿ: ಕ್ಯಾ. ಚೌಟ ಮನವಿ

KannadaprabhaNewsNetwork | Published : Mar 11, 2025 12:49 AM

ಮಂಗಳೂರಿನಲ್ಲಿರುವ ಇಂಡಿಯನ್‌ ಸ್ಟ್ರಾಟೆಜಿಕ್‌ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್‌ (ಐಎಸ್‌ಪಿಆರ್‌ಎಲ್‌)ನ ಕಚ್ಚಾ ತೈಲ ಸಂಗ್ರಹಾಗಾರ ಘಟಕದಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ವೇತನ ತಾರತಮ್ಯ, ಭತ್ಯೆ- ಭಡ್ತಿ ಸಮಸ್ಯೆಗೆ ವ್ಯವಸ್ಥಿತ ಎಚ್‌ಆರ್‌ ನೀತಿ ಅನುಷ್ಠಾನಗೊಳಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್‌ ಜೈನ್‌ ಅವರಲ್ಲಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿರುವ ಇಂಡಿಯನ್‌ ಸ್ಟ್ರಾಟೆಜಿಕ್‌ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್‌ (ಐಎಸ್‌ಪಿಆರ್‌ಎಲ್‌)ನ ಕಚ್ಚಾ ತೈಲ ಸಂಗ್ರಹಾಗಾರ ಘಟಕದಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ವೇತನ ತಾರತಮ್ಯ, ಭತ್ಯೆ- ಭಡ್ತಿ ಸಮಸ್ಯೆಗೆ ವ್ಯವಸ್ಥಿತ ಎಚ್‌ಆರ್‌ ನೀತಿ ಅನುಷ್ಠಾನಗೊಳಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್‌ ಜೈನ್‌ ಅವರಲ್ಲಿ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಸೋಮವಾರ ಪಂಕಜ್‌ ಅವರನ್ನು ಭೇಟಿ ಮಾಡಿದ ಸಂಸದರು, ಸುಮಾರು 8 ವರ್ಷಗಳಿಂದ ಬಗೆಹರಿಯದೆ ತೊಂದರೆ ಅನುಭವಿಸುತ್ತಿರುವ ಮಂಗಳೂರಿನ ಐಎಸ್‌ಪಿಆರ್‌ಎಲ್‌ ಘಟಕದ ಉದ್ಯೋಗಿಗಳ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವಂತೆ ಕೋರಿದರು. ಜತೆಗೆ, ಈ ಕಚ್ಚಾ ತೈಲ ಸಂಗ್ರಹಾಗಾರ ಘಟಕದಲ್ಲಿ ದುಡಿಯುವ ಉದ್ಯೋಗಿಗಳಿಗೆ ವ್ಯವಸ್ಥಿತ ಮಾನವ ಸಂಪನ್ಮೂಲ ನೀತಿಯಿಲ್ಲದೆ ಏನೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದರ ಬಗ್ಗೆ ಮನವರಿಕೆ ಮಾಡಿದ್ದಾರೆ.

ಸಾರ್ವಜನಿಕ ವಲಯದ ತೈಲ ಸಂಸ್ಥೆಗಳಿಂದ ನಿಯೋಜನೆಗೊಳ್ಳುವ ಅಧಿಕಾರಿಗಳಿಗೆ ಹೋಲಿಸಿದರೆ ಈ ಐಎಸ್‌ಪಿಆರ್‌ಎಲ್‌ ಘಟಕಕ್ಕೆ ನೇರ ನೇಮಕವಾಗುವ ಉದ್ಯೋಗಿಗಳ ವೇತನ ಪಾವತಿ ಹಾಗೂ ಭತ್ಯೆ ನೀಡುವಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ಐಎಸ್‌ಪಿಆರ್‌ಎಲ್‌ನಲ್ಲಿ ಹಲವರು ಸುಮಾರು 5 ವರ್ಷಗಳಿಂದ ಯಾವುದೇ ಭಡ್ತಿ ದೊರೆಯದೆ ಒಂದೇ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಅವಧಿಯಲ್ಲಿಯೂ ತಾರತಮ್ಯವಿದೆ ಎಂದು ಕ್ಯಾ. ಚೌಟ ಅವರು ಕಾರ್ಯದರ್ಶಿಗಳ ಗಮನ ಸೆಳೆದಿದರು.

ಸಂಸದರ ಮನವಿ ಆಲಿಸಿದ ಪಂಕಜ್‌ ಜೈನ್‌ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಆದಷ್ಟು ಬೇಗ ಮಂಗಳೂರಿನ ಐಎಸ್‌ಪಿಆರ್‌ಎಲ್‌ ಕಚ್ಚಾ ತೈಲ ಸಂಗ್ರಹಾಗಾರ ಘಟಕದ ಉದ್ಯೋಗಿಗಳ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

8 ವರ್ಷಗಳಿಂದ ಬಗೆಹರಿಯದೆ ಬಾಕಿಯಾಗಿರುವ ಐಎಸ್‌ಪಿಆರ್‌ಎಲ್‌ನ ಉದ್ಯೋಗಿಗಳ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯುವ ಪೂರ್ಣ ವಿಶ್ವಾಸವಿದೆ ಎಂದು ಸಂಸದರು ಹೇಳಿದ್ದಾರೆ.