ಮುಂಡರಗಿ:ಹುಬ್ಬಳ್ಳಿಯಲ್ಲಿ ಜಗದ್ಗುರುಗಳು, ಮಠಾಧೀಶರು ಮತ್ತು ಸಮಾಜದ ತಂದೆ-ತಾಯಿಗಳು ಅಪಾರ ಸಂಖ್ಯೆಯಲ್ಲಿ ಸಮಾವೇಶಗೊಂಡು ಏಕತೆಯ ಭಾವ ಪ್ರದರ್ಶಿಸಿರುವುದು ಸ್ವಾಗತಾರ್ಹ. ಆದರೆ, ಜಾತಿಗಣತಿ ಕುರಿತಂತೆ ಜನತೆಗೆ ಸೂಕ್ತ ಸಂದೇಶ ರವಾನಿಸುವಲ್ಲಿ ವಿಫಲವಾಯಿತು ಎಂದು ಮುಂಡರಗಿ ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ವಿಷಾಧಿಸಿದರು.
ಭಾರತೀಯ ಜನಗಣತಿಯಲ್ಲಿ ಜೈನ, ಬೌದ್ಧ, ಕ್ರೈಸ್ತ ಮುಂತಾದ ಆರು ಜಾತಿಗಳನ್ನು ಬರೆದು ಉಳಿದವುಗಳಿಗೆ ಇತರರು ಎಂದು ಉಲ್ಲೇಖಿಸಿದ್ದು ಕಂಡುಬರುತ್ತದೆ. ಹಿಂದೂ ಸಮೂಹದಲ್ಲಿಯೇ ವೀರಶೈವರು ಹೆಚ್ಚು ಅವಗಣನೆಗೆ ಒಳಗಾಗಿ ಗಣತಿ ಕಡಿಮೆಯಾಗುತ್ತಾ ಬಂದಿದೆ. ಧರ್ಮ ತತ್ವದ ಯಥಾರ್ಥತೆಯನ್ನು ಅರಿಯದೇ ಸರಿಯಾಗಿ ಪ್ರತಿಪಾದನೆ ಮಾಡುವವರು ಇಲ್ಲವಾಗಿ ಹಿಂದೂಗಳೆಂದು ಹೇಳುತ್ತಿರುವುದು ಯೋಗ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೀರಶೈವ ಸಮಾಜದವರ ಮತ್ತು ಮಠಾಧೀಶರ ಕೊಡುಗೆ ಅಪಾರವಾಗಿದೆ. ತತ್ತ್ವೇತ್ತರ ಕೊರತೆಯಿಂದಾಗಿ ಯಾವುದನ್ನು ಗಮನಿಸದೆ ಸಮಾಜದ ಗಣನೆಗಾಗಿ ವೀರಶೈವ-ಲಿಂಗಾಯತ ಧರ್ಮವೆಂದೇ ಬರೆಸುವುದು ಸೂಕ್ತ ಮತ್ತು ಉಪಕಾಲಂನಲ್ಲಿ ಉಪಜಾತಿಗಳನ್ನು ಬರೆಸಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.