ಪ್ರತ್ಯೇಕ ಪಾಲಿಕೆಯ ಪ್ರಸ್ತಾವನೆ ಮರು ಪರಿಶೀಲಿಸಲು ಹು-ಧಾ ಅಭಿವೃದ್ಧಿ ವೇದಿಕೆ ಆಗ್ರಹ

KannadaprabhaNewsNetwork |  
Published : Jul 13, 2026, 01:00 AM IST
ಹು-ಧಾ ಅಭಿವೃದ್ಧಿ ವೇದಿಕೆಯಿಂದ ಈಚೆಗೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಮತ್ತು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ವಿಭಜನೆ ಪ್ರಸ್ತಾವನೆ ಮರುಪರಿಶೀಲಿಸುವಂತೆ ಒತ್ತಾಯಿಸಲಾಯಿತು. | Kannada Prabha

ಸಾರಾಂಶ

ಇನ್ನೇನು ಪ್ರತ್ಯೇಕ ಪಾಲಿಕೆ ಆದೀತು ಎನ್ನುವಷ್ಟರಲ್ಲಿ ಪ್ರತ್ಯೇಕ ಪಾಲಿಕೆಯಿಂದ ಬರೀ ಧಾರವಾಡ ಮಾತ್ರವಲ್ಲದೇ ಹು-ಧಾ ಅವಳಿ ನಗರಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಹಾನಿ ಆಗಲಿದೆ ಎಂದು ಹು-ಧಾ ಅಭಿವೃದ್ಧಿ ಪೋರಂ ಪ್ರತ್ಯೇಕ ಪಾಲಿಕೆಗೆ ವಿರೋಧ ವ್ಯಕ್ತಪಡಿಸಿದೆ.

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕೆಂಬ ಕೂಗು ಜೋರಾಗಿದ್ದು, ತೀವ್ರ ಹೋರಾಟದ ಬಳಿಕ ಇನ್ನೇನು ಪ್ರತ್ಯೇಕ ಪಾಲಿಕೆ ಆದೀತು ಎನ್ನುವಷ್ಟರಲ್ಲಿ ಪ್ರತ್ಯೇಕ ಪಾಲಿಕೆಯಿಂದ ಬರೀ ಧಾರವಾಡ ಮಾತ್ರವಲ್ಲದೇ ಹು-ಧಾ ಅವಳಿ ನಗರಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಹಾನಿ ಆಗಲಿದೆ ಎಂದು ಹು-ಧಾ ಅಭಿವೃದ್ಧಿ ಪೋರಂ ಪ್ರತ್ಯೇಕ ಪಾಲಿಕೆಗೆ ವಿರೋಧ ವ್ಯಕ್ತಪಡಿಸಿದೆ.

ನ್ಯಾಯವಾದಿಗಳು, ಉದ್ಯಮಿಗಳು, ಬುದ್ಧಿಜೀವಿಗಳು, ಮಾಜಿ ಮೇಯರ್‌ ಹಾಗೂ ಮಾಜಿ ಕಾರ್ಪೊರೇಟರ್‌ಗಳನ್ನು ಒಳಗೊಂಡು ಹೊಸದಾಗಿ ರಚಿಸಲಾದ ಈ ವೇದಿಕೆ ವತಿಯಿಂದ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ಅರುಣ ಚರಂತಿಮಠ ಮಾತನಾಡಿ, ಪಾಲಿಕೆಯ ವಿಭಜನೆಗೆ ಈಗಲೂ ಪಾಲಿಕೆ ಸದಸ್ಯರು ಒಮ್ಮತದ ಮನಸ್ಸು ತೋರಿಲ್ಲ. ಬೇಕು ಅಥವಾ ಬೇಡ ಎಂಬ ಅಭಿಪ್ರಾಯಗಳಿವೆ. ಧಾರವಾಡಕ್ಕೆ ಅನ್ಯಾಯವಾಗಿದ್ದು, ಪ್ರತ್ಯೇಕ ನಿಗಮ ಅಗತ್ಯವಿದೆ ಎಂದು ಪ್ರತಿಪಾದಿಸಿ ಕೆಲವರು ಪ್ರತಿಭಟನೆ ನಡೆಸಿದರು. ಆದರೆ, ಇದು ಇಡೀ ಧಾರವಾಡ ಜನರ ಸಾಮೂಹಿಕ ದೃಷ್ಟಿಕೋನವಲ್ಲ ಎಂದು ಚರಂತಿಮಠ ಪ್ರತಿಪಾದಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಗರದಲ್ಲಿ ಹೆಚ್ಚಿನ ಪ್ರದೇಶಗಳನ್ನು ಸೇರಿಸುವ ಮೂಲಕ ಗ್ರೇಟರ್ ಬೆಂಗಳೂರು ರಚನೆಗೆ ಒತ್ತಾಯಿಸುತ್ತಿರುವ ಸಮಯದಲ್ಲಿ, ಎಚ್‌ಡಿಎಂಸಿಯನ್ನು ವಿಭಜಿಸಿ ಹುಬ್ಬಳ್ಳಿ ಮತ್ತು ಧಾರವಾಡವನ್ನು ಸಣ್ಣ ಪುರಸಭೆಯ ನಿಗಮಗಳ ಮಟ್ಟಕ್ಕೆ ಇಳಿಸಲು ಪ್ರತಿಪಾದಿಸುವುದು ತರ್ಕಹೀನ. ನಗರವು ದೊಡ್ಡದಾದಷ್ಟೂ, ಹೆಚ್ಚಿನ ಅವಕಾಶಗಳು ಮತ್ತು ಹೂಡಿಕೆಗಳು ಮತ್ತು ಸರ್ಕಾರಿ ನಿಧಿಗಳನ್ನು ಆಕರ್ಷಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ್ದರಿಂದ ಅವಳಿ ನಗರಗಳ ದೀರ್ಘಕಾಲೀನ ಲಾಭದ ಮೇಲೆ ಕೇಂದ್ರೀಕರಿಸಬೇಕು ಎಂದು ಆಗ್ರಹಿಸಿದರು.

ಸಿಎಂಗೆ ಭೇಟಿ, ಪರಿಶೀಲಿಸಲು ಆಗ್ರಹ..

ಹುಬ್ಬಳ್ಳಿ-ಧಾರವಾಡ ಬೆಂಗಳೂರಿನ ನಂತರ ಕರ್ನಾಟಕದ ಎರಡನೇ ಅತಿದೊಡ್ಡ ನಗರ ಕೇಂದ್ರ. ಪಾಲಿಕೆಯು ವಿಭಜನೆಯಾದರೆ, ಮೈಸೂರು ಮತ್ತು ಮಂಗಳೂರಿನಂತಹ ನಗರಗಳು ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಕೇಂದ್ರ ಯೋಜನೆಗಳನ್ನು ಪಡೆಯುತ್ತವೆ. ಆದ್ದರಿಂದ ನಮ್ಮ ವೇದಿಕೆಯು ಎರಡು ದಿನಗಳ ಹಿಂದೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ವಿಭಜನೆ ಪ್ರಸ್ತಾವನೆ ಮರುಪರಿಶೀಲಿಸುವಂತೆ ಒತ್ತಾಯಿಸಿತು ಎಂದು ಚರಂತಿಮಠ ಹೇಳಿದರು.

ಪಾಲಿಕೆ ವಿಭಜನೆಯಾದರೆ ಧಾರವಾಡಕ್ಕೆ ಹೆಚ್ಚು ನಷ್ಟವಿದೆ ಎಂದ ಮಾಜಿ ಮೇಯರ್ ಹನುಮಂತ್ ಡಂಬಳ್, ನಗರದಿಂದ ಬರುವ ಆದಾಯ ಸಿಬ್ಬಂದಿ ವೇತನಕ್ಕೆ ಸರಿದೂಗಿಸುತ್ತದೆ. ಪ್ರಸ್ತುತ ಪಾಲಿಕೆ ವಾರ್ಷಿಕವಾಗಿ ₹88 ಕೋಟಿ ವೇತನ ನೀಡುತ್ತಿದೆ. ರಾಜ್ಯ ಸರ್ಕಾರ ₹70 ಕೋಟಿ ಕೊಡುಗೆ ನೀಡಿದರೆ, ಉಳಿದ ₹18 ಕೋಟಿ ಆಂತರಿಕ ಸಂಪನ್ಮೂಲಗಳಿಂದ ನೀಡುತ್ತಿದೆ. ಧಾರವಾಡ ಸುಮಾರು ₹45 ಕೋಟಿ ಆದಾಯ ಗಳಿಸುತ್ತದೆ ಮತ್ತು ವಿಭಜನೆ ಆದರೆ, ₹35 ಕೋಟಿ ಸಂಬಳಕ್ಕಾಗಿಯೇ ವೆಚ್ಚವಾಗಲಿದೆ. ಇದರ ಪರಿಣಾಮವಾಗಿ ಪ್ರತಿ ವಾರ್ಡ್‌ಗೆ ಅಭಿವೃದ್ಧಿಗಾಗಿ ₹10 ಲಕ್ಷಕ್ಕಿಂತ ಕಡಿಮೆ ಹಣ ಸಿಗಲಿದೆ ಎಂದು ಅಂಕಿ-ಅಂಶ ಸಮೇತ ಪ್ರತಿಪಾದಿಸಿದರು.

ಜತೆಗೆ ವಿಭಜನೆಯು ಹುಬ್ಬಳ್ಳಿ ಮತ್ತು ಧಾರವಾಡ ಎರಡನ್ನೂ ''''''''ಸಿ'''''''' ವರ್ಗದ ನಗರಗಳಿಗೆ ಇಳಿಸುತ್ತದೆ. ಆದ್ದರಿಂದ ಧಾರವಾಡಕ್ಕೆ ಪ್ರತ್ಯೇಕ ನಿಗಮವನ್ನು ಪ್ರಸ್ತಾಪಿಸುವ ಅಧಿಸೂಚನೆಯು ಅಸಂವಿಧಾನಿಕ ಎಂದು ಡಂಬಳ ವಾದಿಸಿದರು,

ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆಯ ಪ್ರತಿನಿಧಿ ಜಗದೀಶ್ ಹಿರೇಮಠ ಮಾತನಾಡಿ, ವಿಭಜನೆಯು ಆಡಳಿತಾತ್ಮಕ ವೆಚ್ಚ ಹೆಚ್ಚಿಸುತ್ತದೆ ಮತ್ತು ಸಮಗ್ರ ನಗರ ಯೋಜನೆಗೆ ಅದು ಅಡ್ಡಿ. ನಿರಂತರ ಕುಡಿಯುವ ನೀರು ಸರಬರಾಜು, ತ್ಯಾಜ್ಯ ನಿರ್ವಹಣೆ, ಬಿಆರ್‌ಟಿಎಸ್ ಮತ್ತು ಫ್ಲೈಓವರ್‌ಗಳಂತಹ ಯೋಜನೆಗಳನ್ನು ಅವಳಿ ನಗರ ಎಂದು ಪರಿಗಣಿಸಿ ಮಂಜೂರು ಮಾಡಲಾಗಿದೆ. ನಿಗಮವನ್ನು ವಿಭಜಿಸಿದರೆ, ಪ್ರತಿಯೊಂದು ಪ್ರಮುಖ ಯೋಜನೆ ಮತ್ತು ಸೇವೆಗಾಗಿ ಜನರು ಕಷ್ಟಪಡಬೇಕಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರ್ಯಾಯ ಬೆಳೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಳ
ಗದಗ ಜಿಲ್ಲೆಯ 898 ಮಕ್ಕಳಲ್ಲಿ ಅಪೌಷ್ಟಿಕತೆ!