ಗದಗ: ಹುಬ್ಬಳ್ಳಿಯಲ್ಲಿ ನಡೆದ ವೀರಶೈವ -ಲಿಂಗಾಯತ ಏಕತಾ ಸಮಾವೇಶ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಹೇಳಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಾವೇಶ ಕೇವಲ ಬೇಡಜಂಗಮರ ಸಮಾವೇಶವಾಗಿದ್ದು, ಪಂಚಮಸಾಲಿ ಸಮುದಾಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ಯಾವ ಕಾರಣಕ್ಕಾಗಿ ಮಾಡುತ್ತಿದ್ದೇವೆ ಎನ್ನುವ ಸ್ಪಷ್ಟತೆಯೇ ಅವರಿಗೆ ಇರಲಿಲ್ಲ ಎಂದು ವ್ಯಂಗ್ಯವಾಡಿದರು.ಸಮಾವೇಶಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡಿ ಪ್ರಚಾರ ಮಾಡಿದ್ದರೂ, ಏಳರಿಂದ ಎಂಟು ಸಾವಿರ ಜನರು ಮಾತ್ರ ಭಾಗವಹಿಸಿದ್ದರು. ಸಾರ್ವಜನಿಕರ ಸ್ಪಂದನೆ ಇರಲಿಲ್ಲ. ವೇದಿಕೆಯ ಮೇಲಿದ್ದವರು ಕೆಲವು ಸ್ವಾಮೀಜಿಗಳನ್ನು ಹೊರತುಪಡಿಸಿದರೆ ಯಾರೂ ಪ್ರಮುಖರು ಇರಲಿಲ್ಲ ಎಂದರು.
ಯಾವುದೇ ಸ್ಪಷ್ಟ ಸಂದೇಶವಿಲ್ಲ: ಹುಬ್ಬಳ್ಳಿ ಸಮಾವೇಶದಲ್ಲಿ ಯಾವುದೇ ಸ್ಪಷ್ಟ ಸಂದೇಶ ಅಥವಾ ಗುರಿ ಇರಲಿಲ್ಲ. ಯಾವ ಉದ್ದೇಶಕ್ಕಾಗಿ ಈ ಸಮಾವೇಶ ನಡೆಸಲಾಯಿತು ಎಂಬುದು ಜನರಿಗೆ ಅರ್ಥವಾಗಲಿಲ್ಲ. ಈ ಕಾರಣದಿಂದಲೇ ಇದು ಸಂಪೂರ್ಣವಾಗಿ ವಿಫಲವಾಗಿದೆ. ಇದು ಕೇವಲ ಪ್ರಾಥಮಿಕ ಹಂತ, ಮುಂದೆ ಇದಕ್ಕಿಂತ ದೊಡ್ಡದಾಗಿ ನಡೆಸುವುದಾಗಿ ಹೇಳುತ್ತಿದ್ದಾರೆ. ಅದು ಯಾವ ಉದ್ದೇಶಕ್ಕಾಗಿ ಎನ್ನುವುದು ಸ್ಪಷ್ಟತೆ ಇಲ್ಲ ಎಂದು ಶ್ರೀಗಳು ವಿಶ್ಲೇಷಿಸಿದರು.ಭಕ್ತರಿಗೆ ಧನ್ಯವಾದ: ನಾನು ಮತ್ತು ಕೂಡಲಸಂಗಮ ಸ್ವಾಮೀಜಿ ಹುಬ್ಬಳ್ಳಿ ಸಮಾವೇಶಕ್ಕೆ ಹೋಗದಂತೆ ಭಕ್ತರಿಗೆ ಸೂಚನೆ ನೀಡಿದ್ದೆವು. ನಮ್ಮ ಸೂಚನೆಯನ್ನು ಪಾಲಿಸಿದ ನಮ್ಮ ಭಕ್ತರಿಗೆ ಧನ್ಯವಾದಗಳು. ಈ ಮೂಲಕ, ಸಮಾವೇಶದ ವೈಫಲ್ಯಕ್ಕೆ ಜನಸ್ಪಂದನೆಯ ಕೊರತೆಯೇ ಮುಖ್ಯ ಕಾರಣ ಎಂದು ಶ್ರೀಗಳು ಪುನರುಚ್ಚರಿಸಿದರು.
ಹುಬ್ಬಳ್ಳಿ ಸಮಾವೇಶಕ್ಕೆ ಹೋಲಿಕೆ ಮಾಡಿದಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಈ ಅಭಿಯಾನವು ರಾಜ್ಯದ 20 ಜಿಲ್ಲೆಗಳಲ್ಲಿ ಉತ್ತಮವಾಗಿಯೇ ನಡೆಯುತ್ತಿದೆ. ಸಾವಿರಾರು ಜನರು ಭಾಗವಹಿಸುತ್ತಿದ್ದಾರೆ. ಯಾತ್ರೆಯು ಯಶಸ್ವಿಯಾಗಲು ಜನರ ಸಹಕಾರವೇ ಕಾರಣ ಎಂದು ವಚನಾನಂದ ಶ್ರೀಗಳು ಹೇಳಿದರು.