ಬ್ಯಾಡಗಿ: ಇತ್ತೀಚಿನ ಜಾಗತಿಕ ವಿದ್ಯಾಮಾನಗಳನ್ನು ಅವಲೋಕಿಸಿದಾಗ ರಾಷ್ಟ್ರ ರಕ್ಷಣೆ ಮಾಡಿಕೊಳ್ಳದಿದ್ದರೆ ನಮಗೂ ರಕ್ಷಣೆ ಇಲ್ಲವೆನ್ನುವಂತಾಗಿದೆ. ಹೀಗಾಗಿ ನಮ್ಮನ್ನು ರಕ್ಷಿಸುವ ಹೊಣೆ ಹೊತ್ತಿರುವ ದೇಶದ ಸೈನಿಕರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಹಿನ್ನೆಲೆ ಮೇ 17ರಂದು ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ವೇದಿಕೆಯಡಿ ಪಟ್ಟಣದಲ್ಲಿ ಬೃಹತ್ ತಿರಂಗಾ ಯಾತ್ರೆಯನ್ನು ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವಿರೂಪಾಕ್ಷ ಬಳ್ಳಾರಿ ತಿಳಿಸಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನದ ಪ್ರಚೋದನೆಯಿಂದ ಕಾಶ್ಮೀ ರದಲ್ಲಿ ಪ್ರವಾಸಕ್ಕೆ ತೆರಳಿದ್ದ 26 ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವ ಭಯೋತ್ಪಾದಕರ ಹುಟ್ಟಡಗಿಸಬೇಕಾಗಿದೆ. ಇದಕ್ಕಾಗಿ ನಮ್ಮ ಸೈನಿಕರನ್ನು ಸಜ್ಜುಗೊಳಿಸಲಾಗಿದೆ. ಆದರೆ ಜವಾಬ್ದಾರಿಯುತ ನಾಗರಿಕರಾದ ನಾವು ನಮ್ಮ ರಕ್ಷಣೆಗೆ ಹೋರಾಡುತ್ತಿರುವ ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ ಎಂದರು.ಧರ್ಮ ಕೇಳಿ ಹತ್ಯೆ: ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ ಮಾತನಾಡಿ, ಧರ್ಮ ಕೇಳಿ ಹತ್ಯೆ ಮಾಡಿದ್ದು ಮುಸ್ಲಿಂ ಎಂದ ಮಹಿಳೆಗೆ ಕಲ್ಮಾ ಓದುವಂತೆ ಒತ್ತಡ ಹೇರಿದ್ದು ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿದ್ದು ನಾವಿನ್ನೂ ಯಾವ ಕಾಲದಲ್ಲಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಇದೆಲ್ಲವೂ ಅನಾಗರಿಕ ಹಾಗೂ ಅಮಾನವೀಯ ತಪ್ಪನ್ನು ಖಂಡಿಸದಿದ್ದರೆ ನಾವು ಮಾಡಿದ್ದೇ ಸರಿ ಎನ್ನುವಂತಾಗಲಿದೆ. ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ವೇದಿಕೆಯ ತಿರಂಗಾ ಯಾತ್ರೆ ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರಸಲಿದೆ ಎಂದರು.ರೈತ ಸಂಘದ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಭಯೋತ್ಪಾದಕರ ಮನಸ್ಥಿತಿ ಏನು? ಉಗ್ರರ ಉದ್ದೇಶಗಳೇನು? ಹಣಕ್ಕಾಗಿ ನಡೆಯುತ್ತಿರುವ ಹತ್ಯೆಗಳೇ? ಅಥವಾ ಹಣಕ್ಕಾಗಿ ಪ್ರಜಾಪ್ರಭುತ್ವ ಸಿದ್ಧಾಂತವನ್ನೇ ಉಗ್ರರಿಗೆ ಒತ್ತೆಯಿಟ್ಟಿರುವ ಪಾಕಿಸ್ತಾನದ ಕುತಂತ್ರವೇ? ಇಂತಹ ನೂರಾರು ಪ್ರಶ್ನೆಗಳು ಇಂದು ಭಾರತೀಯರ ಮನದಲ್ಲಿ ಮೂಡಿದೆ ಎಂದರು.ಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ ಮಾತನಾಡಿದರು. ಶಂಕರಗೌಡ ಪಾಟೀಲ, ಸಂಜೀವ ಮಡಿವಾಳರ, ರೋಟರಿ ಸಂಸ್ಥೆಯ ಅಧ್ಯಕ್ಷ ಬೂದಿಹಾಳಮಠ, ಮಂಜುನಾಥ ಉಪ್ಪಾರ, ಪಾಂಡು ಸುತಾರ, ಪ್ರದೀಪ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಎಪಿಎಂಸಿ ಯಾರ್ಡ್ನಿಂದ ಯಾತ್ರೆ
ತಿರಂಗಾ ಯಾತ್ರೆ ಮೇ 17ರಂದು ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿರುವ ಸಿದ್ಧೇಶ್ವರ ದೇವಸ್ಥಾನದಿಂದ ಬೆಳಗ್ಗೆ 10 ಗಂಟೆಗೆ ಆರಂಭವಾಗಿ, ಮುಖ್ಯರಸ್ತೆ, ಸುಭಾಸ್ ಸರ್ಕಲ್ ಸೇರಿದಂತೆ ಹಲವು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ತಹಸೀಲ್ದಾರ್ ಕಚೇರಿ ತಲುಪಲಿದೆ.