ಮುನಿರಾಬಾದ್: ಚಂದ್ರ ಗ್ರಹಣದ ಹಿನ್ನೆಲೆ ಇಲ್ಲಿನ ಪುಣ್ಯಕ್ಷೇತ್ರ ಶ್ರೀಹುಲಿಗೆಮ್ಮದೇವಿ ದೇವಸ್ಥಾನದ ಬಾಗಿಲನ್ನು ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ ರಾವ್, ಅರ್ಚಕರು ಹಾಕಿದ್ದರೂ ಸಹ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಗ್ರಹಣದ ಹಿನ್ನೆಲೆ ದೇವಸ್ಥಾನದ ಬಾಗಿಲು ಹಾಕಿದ್ದರೂ ಸಹ ಭಕ್ತರು ದೇವಸ್ಥಾನದ ಮುಂದೆ ನಿಂತು ಅಮ್ಮನವರಿಗೆ ಕೈ ಮುಗಿದು ಸಾಷ್ಟಾಂಗ ನಮಸ್ಕಾರ ಮಾಡಿದರು. ಇನ್ನು ಕೆಲವು ಭಕ್ತರು ದೇವಸ್ಥಾನದ ಮುಂದೆ ತೆಂಗಿನಕಾಯಿ ಒಡೆದು, ಹಣ್ಣು ನೈವೇದ್ಯ ಮಾಡುವ ಮೂಲಕ ಸುಮಾರು 20,000ಕ್ಕೂ ಅಧಿಕ ಜನ ಭಕ್ತರು ಗ್ರಹಣ ಕಾಲದಲ್ಲೂ ಅಮ್ಮನವರ ದರ್ಶನ ಪಡೆದರು.
ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ಭಕ್ತರು ದೇವಸ್ಥಾನಕ್ಕೆ ಹೋಗುವುದಿಲ್ಲ. ಗ್ರಹಣದ ನಂತರ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡುವ ವಾಡಿಕೆ. ಆದರೆ ಶ್ರೀಹುಲಿಗೆಮ್ಮ ದೇವಿ ವಿಚಾರದಲ್ಲಿ ಗ್ರಹಣ ಇದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಭಕ್ತರು, ಹೋಳಿ ಹುಣ್ಣಿಮೆ ಆಗಿರುವುದರಿಂದ ಗ್ರಹಣದ ಸಮಯದಲ್ಲಿ ಬಂದು ಅಮ್ಮನವರಿಗೆ ಪೂಜೆ ಸಲ್ಲಿಸಿರುವುದು ವಿಶೇಷ.