ಹಸಿವು ಹಾಗೂ ಆಹಾರ ಇವೆರಡೇ ಜೀವಿಯ ಎಲ್ಲವನ್ನೂ ನಿರ್ಧರಿಸುತ್ತದೆ. ಹಾಗಾಗಿ ವೇದ ಪರಂಪರೆಯಲ್ಲಿ ಅಗ್ನಿಸೋಮಾತ್ಮಕಂ ಜಗತ್ ಎಂದಿದ್ದು, ಅಗ್ನಿ ಎಂದರೆ ಹಸಿವಾಗಿದ್ದು, ಸೋಮ ಎಂದರೆ ಆಹಾರವಾಗಿದೆ.
ಸೃಷ್ಟಿಯ ವೈವಿಧ್ಯತೆಯೇ ಅದ್ಭುತ, ಎಲ್ಲೆಡೆ ಸಮಾನತೆ ಹುಡುಕುವುದು ಮೂರ್ಖತನ
ಪಟ್ಟೇಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಕನ್ನಡಪ್ರಭ ವಾರ್ತೆ ಗೋಕರ್ಣ
ಹಸಿವು ಹಾಗೂ ಆಹಾರ ಇವೆರಡೇ ಜೀವಿಯ ಎಲ್ಲವನ್ನೂ ನಿರ್ಧರಿಸುತ್ತದೆ. ಹಾಗಾಗಿ ವೇದ ಪರಂಪರೆಯಲ್ಲಿ ಅಗ್ನಿಸೋಮಾತ್ಮಕಂ ಜಗತ್ ಎಂದಿದ್ದು, ಅಗ್ನಿ ಎಂದರೆ ಹಸಿವಾಗಿದ್ದು, ಸೋಮ ಎಂದರೆ ಆಹಾರವಾಗಿದೆ. ಆಹಾರವನ್ನು ತಿಳಿದುಕೊಳ್ಳಲು ಹಸಿವನ್ನು ಹಾಗೂ ಹಸಿವಿನ ಮೂಲವನ್ನು ಮೊದಲು ಅರಿತುಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಅಶೋಕೆಯ ಮೂಲಮಠದ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಮಮಗಳವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಜಠರಾಗ್ನಿಯ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಆಧುನಿಕ ವಿಜ್ಞಾನದಲ್ಲಿ ದೇಹವೆಂದರೆ ಆಮ್ಲಜನಕ, ಇಂಗಾಲ, ಪರಮಾಣು ಎಂಬುದಾಗಿ ವಿಶ್ಲೇಷಿಸುತ್ತಾರೆ. ಇವುಗಳನ್ನು ಅನ್ವೇಷಿಸಲು ಆಧುನಿಕರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಅದನ್ನು ಅಲ್ಲಗಳೆಯುವಂತಿಲ್ಲ. ಆದರೆ ನಾವು ಎಂದರೆ ಏನು? ಎಂದಾಗ ಕೇವಲ ಆಮ್ಲಜನಕ, ಇಂಗಾಲ, ಪರಮಾಣುಗಳು ಎನ್ನಲಾಗದು. ಭಾರತೀಯ ದೃಷ್ಟಿಯಲ್ಲಿ ದೇಹವೆಂದರೆ ಪಂಚಭೂತಗಳ ಸಂಯೋಜನೆಯಾಗಿದ್ದು, ಗಟ್ಟಿಯಾದ ಭಾಗಗಳು ಪೃಥ್ವಿ, ದ್ರವಾಂಶ ನೀರು, ಉಷ್ಣಾಂಶ ಅಗ್ನಿ, ಗಾಳಿಯು ವಾಯು, ದೇಹದಲ್ಲಿರುವ ಸ್ಥಳಾವಕಾಶವೇ ಆಕಾಶವಾಗಿದೆ. ಪಂಚಭೂತಗಳು ದೇಹದೊಳಗೆ ಸಪ್ತ ಧಾತುಗಳಾಗಿ ಪರಿವರ್ತಿತವಾಗುವುದಕ್ಕೆ ಅಗ್ನಿಯು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಹದಲ್ಲಿ ಪ್ರಮುಖವಾಗಿ ೧೮ ಅಗ್ನಿಗಳಿದ್ದು, ದೇಹದ ಎಲ್ಲಾ ಕಡೆಗಳಲ್ಲಿ ಅಗ್ನಿ ವ್ಯಾಪಿಸಿದೆ. ರಸ-ರಕ್ತ -ಮಾಂಸ-ಮೇದಸ್ಸು-ಅಸ್ತಿ-ಮಜ್ಜೆ-ಶುಕ್ರ ಎಂಬ ಸಪ್ತಧಾತುಗಳಲ್ಲಿಯೂ ಧಾತ್ತ್ವಗ್ನಿಗಳಿದ್ದು ಈ ಅಗ್ನಿಯಿಂದಲೇ ಮುಂದಿನ ಧಾತುಗಳು ಉಂಟಾಗುತ್ತಾ ಸಾಗುತ್ತದೆ. ಇವೆಲ್ಲವೂ ಅಗ್ನಿಯ ಕಾರ್ಯವಾಗಿದೆ. ಧಾತು ರೂಪಾಂತರದ ವಿಚಾರದಲ್ಲಿ ಪ್ರಾಚೀನ ಭಾರತೀಯರ ಅಭಿಪ್ರಾಯಕ್ಕೂ ಆಧುನಿಕ ವಿಜ್ಞಾನಕ್ಕೂ ಅಲ್ಪ ಅಭಿಪ್ರಾಯ ಬೇಧವಿದ್ದು, ಮುಂದೊಂದು ದಿನ ಆಧುನಿಕ ವಿಜ್ಞಾನವು ಪಾರಂಪರಿಕ ಅಭಿಪ್ರಾಯವನ್ನು ಒಪ್ಪುವ ದಿನ ಬರಬಹುದು ಎಂದರು.
ಎಲ್ಲಾ ಕಡೆಯಲ್ಲೂ ಸಮಾನತೆ ಎಂಬುದನ್ನು ಹುಡುಕುವುದು ಮೂರ್ಖತನವಾಗುತ್ತದೆ. ಸೃಷ್ಟಿಯೆಂಬುದು ವೈವಿಧ್ಯತೆಯಾಗಿದ್ದು. ಮುಕ್ತಿಯಲ್ಲಿ ಮಾತ್ರ ಏಕತೆಯನ್ನು ಕಾಣಬಹುದು. ಕೈಯಿಗಳು ಇರುವಷ್ಟು ಉದ್ದ ಮೂಗಿಲ್ಲ. ಹಾಗಾಗಿ ಎಲ್ಲೆಡೆ ಸಮಾನತೆಯನ್ನು ಹುಡುಕಲಾಗದು, ದೇಹದಲ್ಲೂ ಎಲ್ಲವೂ ಸಮಾನವಾಗಿರಲು ಸಾಧ್ಯವಿಲ್ಲ. ಆಯಾಯ ಧಾತುಗಳು ಎಷ್ಟಿರಬೇಕೋ ಅಷ್ಟಿರಬೇಕು. ಇದು ಸೃಷ್ಟಿಯ ಅದ್ಭುತ ಎಂದು ಅಭಿಪ್ರಾಯಪಟ್ಟರು.
ಕೊಲ್ಲೂರು ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಶ್ರೀಧರ ಅಡಿಗ, ಶಿಕ್ಷಣ ತಜ್ಞ ಎಂ.ಆರ್. ಹೆಗಡೆ ಉಡುಪಿ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ಹರ್ಷ ಮಾಂಕನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಜಿ.ವಿ. ಹೆಗಡೆ ಗೋಕರ್ಣ ದಂಪತಿ ದಿನಪ್ರಧಾನರಾಗಿ ಉಪಸ್ಥಿತರಿದ್ದರು.
ಪಟ್ಟೇಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಉತ್ತರ ಕನ್ನಡದ ಪಟ್ಟೇಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪಾದುಕಾ ಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಪಟ್ಟೇಗಾರ ಸಮಾಜವು ಪಾರಂಪರಿಕವಾಗಿ ಶ್ರೀಮಠದ ಗುರುಪರಂಪರೆಯನ್ನು ಅಶ್ರಯಿಸಿ ಬಂದಿದೆ. ತಲೆತಲಾಂತರದಿಂದ ನೀವು ಈ ಗುರುಪೀಠಕ್ಕೆ ನಿಮ್ಮ ಭಕ್ತಿಯನ್ನು ಸಮರ್ಪಿಸುತ್ತಾ ಬಂದಿದ್ದು, ಶ್ರೀಮಠವು ಸಮಾಜದ ನೋವುನಲಿವುಗಳ ಜೊತೆಗೆ ಇರಲಿದೆ ಎಂದು ಆಶೀರ್ವದಿಸಿದರು. ಸಮಾಜದ ರಮಾನಂದ ದೇವರಾಜ ಶೆಟ್ಟಿ, ಲಂಬೋಧ ಜಯರಾಮ ಶೆಟ್ಟಿ, ದತ್ತಾತ್ರೇಯ ಶ್ರೀಧರ ಶೆಟ್ಟಿ, ಬಂಗಾರೇಶ್ವರ ಮಹಾಬಲೇಶ್ವರ ಶೆಟ್ಟಿ, ಶಂಕರ ಜನಾರ್ಧನ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಆಶೀರ್ವಾದ ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.