ಚಾಮರಾಜನಗರ: ಕಬಿನಿ ಕಚೇರಿಯ ಮುಂಭಾಗ ನಾಲೆ ಹೂಳೆತ್ತಬೇಕು, ಅನಧಿಕೃತವಾಗಿ ಕೆರೆ ಅತಿಕ್ರಮಣ ಮಾಡಿರುವವರನ್ನು ತೆರವುಮಾಡಿಸಬೇಕು, ಗುಂಡಾಲ್ನಿಂದ ರೈತರಿಗೆ ಸಮರ್ಪಕವಾಗಿ ನೀರು ಬಿಡುಗಡೆ ಮಾಡಬೇಕು ಎಂಬಿತ್ಯಾಧಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುಂಡಾಲ್ ಅಚ್ಚುಕಟ್ಟು ಹಿತರಕ್ಷಣಾ ಸಮಿತಿಯ ರೈತರು ನಡೆಸುತ್ತಿದ್ದ 42ನೇ ದಿನದ ಅನಿರ್ದಿಷ್ಟ ಮುಷ್ಕರಕ್ಕೆ ಅಂತ್ಯ ಹಾಡುವಲ್ಲಿ ಹನೂರು ಶಾಸಕ ಮಂಜುನಾಥ್ ಯಶಸ್ವಿಯಾಗಿದ್ದಾರೆ. 42 ದಿನಗಳಿಂದಲೂ ನಿರಂತರ ಧರಣಿ ನಡೆಸಲಾಗುತ್ತಿದ್ದರೂ ಸಚಿವರು, ಶಾಸಕರಾರೂ ಸ್ಥಳಕ್ಕೆ ಬಾರದ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದರು. ಕಬಿನಿ ಕಚೇರಿಯ ಸ್ಥಳೀಯ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಕುರಿತು ರೈತರು ಧಿಕ್ಕಾರದ ಘೋಷಣೆ ಕೂಗಿ ಭಾನುವಾರ ಸಹಾ ಧರಣಿ ನಡೆಸಿದರು. ಈ ವೇಳೆ ಮಧ್ಯಾಹ್ನ ಹನೂರು ಶಾಸಕ ಎಂ.ಆರ್. ಮಂಜುನಾಥ್ ಸ್ಥಳಕ್ಕೆ ಆಗಮಿಸಿ ರೈತರ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಗುಂಡಾಲ್ ಅಚ್ಚುಕಟ್ಟು ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಣಗಳ್ಳಿ ದಶರಥ್ ಮಾತನಾಡಿ, ಇಲ್ಲಿತನಕ ನಾವು 42ದಿನ ಪ್ರತಿಭಟನೆ ನಡೆಸಿದರೂ ಸಂಸದರಾಗಲಿ, ಸ್ಥಳೀಯ ಶಾಸಕರಾಗಲಿ ಆಗಮಿಸಿಲ್ಲ, ಜಿಲ್ಲೆಯ ಯಾವುದೇ ಒಬ್ಬ ಜನಪ್ರತಿನಿಧಿಯೂ ನಮ್ಮ ಸಮಸ್ಯೆಯನ್ನು ಕಳೆದ 42 ದಿನದಿಂದ ಕೇಳಿಲ್ಲ, ಆದರೆ ಹನೂರು ಶಾಸಕ ಮಂಜುನಾಥ್ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಅವರ ಮಾತಿಗೆ ಬೆಲೆಕೊಟ್ಟು ಧರಣಿಯಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ತಿಳಿಸಿದರು.