ಕನ್ನಡಪ್ರಭ ವಾರ್ತೆ ಬೀಳಗಿ
ಭಾಗ್ಯಶ್ರೀ ಜಿಗಳೂರ (23) ಕೊಲೆಯಾದ ಮಹಿಳೆ. ಪತಿ ಪ್ರವೀಣ ಜಗಳೂರ (29) ಎಂಬಾತ ಕೊಲೆ ಮಾಡಿದ್ದಾನೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ಸ್ಥಳದಲ್ಲಿದ್ದ ಪ್ರವೀಣ, ಪತ್ನಿ ಭಾಗ್ಯಶ್ರೀಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಆಕೆಗೆ ನೇಣು ಹಾಕಿ, ಸಾಯುವವರೆಗೂ ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ವಿಡಿಯೋ ಮಾಡಿ ವಿಕೃತಿ ಕೂಡ ಮೆರೆದಿದ್ದಾನೆ. ಈ ವಿಡಿಯೋ ಕೂಡ ಈಗ ವೈರಲ್ ಆಗಿದೆ. ಆದರೆ, ಆತ್ಮಹತ್ಯೆ ಎಂದು ಬಿಂಬಿಸುವ ಉದ್ದೇಶದಿಂದ ಮೊಬೈಲ್ನಲ್ಲಿ ವಿಡಿಯೋ ಚಿತ್ರಿಕರಿಸಿ ಪತ್ನಿಯ ಸಂಬಂಧಿಕರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಇವರಿಬ್ಬರು ಮದುವೆಯಾಗಿ ಆರು ವರ್ಷ ಕಳೆದಿದ್ದು, ಇವರಿಗೆ ಒಂದು ಗಂಡು ಮಗುವಿದೆ. ಈ ಹಿಂದೆ ಪತಿ, ಪತ್ನಿಯ ಮಧ್ಯೆ ಜಗಳ ನಡೆದಿದೆ. ಕೆಲ ದಿನಗಳ ಹಿಂದೆ ಭಾಗ್ಯಶ್ರೀ ತವರು ಮನೆಗೆ ತೆರಳಿದ್ದರು. ತವರು ಮನೆಯಿಂದ ಹೆಂಡತಿ ಕರೆ ತಂದಿದ್ದ ಪತಿ ಪ್ರವೀಣ ಹಾಗೂ ಭಾಗ್ಯಶ್ರೀ ಮಧ್ಯೆ ಮತ್ತೆ ಜಗಳವಾಗಿತ್ತು ಎಂದು ತಿಳಿದುಬಂದಿದೆ.
ಭಾಗ್ಯಶ್ರೀ ಕುಟುಂಬದವರು ಕೊಲೆ ಆರೋಪ ಮಾಡಿ ಪ್ರವೀಣ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿ ಪ್ರವೀಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಎಸ್.ಪಿ.ಸಿದ್ಧಾರ್ಥ ಗೋಯಲ್, ಹೆಚ್ಚುವರಿ ಎಸ್ಪಿ ಜಗದೀಶ.ಎಂ. ಹಾಗೂ ಡಿವೈಎಸ್ಪಿ ಗಜಾನನ ಸುತಾರ, ಸಿಪಿಐ ಹಣಮಂತ ಸನಮನಿ ಭೇಟಿ ನೀಡಿದ್ದಾರೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.