ಧಾರವಾಡ:
ಹಿಂದೂಗಳು ಹಿಂಸಕರು ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಈ ರೀತಿ ಹೇಳಿಕೆ ಕೊಡುವ ಮುಖಾಂತರ ಕೋಟ್ಯಂತರ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಹಿಂದೂ ಧರ್ಮ ಎಂದಿಗೂ ಹಿಂಸೆ ಬೋಧಿಸಿಲ್ಲ. ಮುಂದೆ ಬೋಧಿಸುವುದೂ ಇಲ್ಲ. ಹಿಂದೂ ಎಂದರೆ ಸರ್ವೇ ಜನ ಸುಖಿನೋ ಭವಂತು. ಎಲ್ಲರೂ ಸುಖವಾಗಿರಲಿ ಎಂದು ಹೇಳುವ ಏಕೈಕ ಧರ್ಮವಿದು ಎಂದು ಹೇಳಿದ್ದಾರೆ.
ಹಿಂದೂಗಳು ಸಹಿಷ್ಣುತೆ, ಸಮಾನತೆ ಬೋಧಿಸುತ್ತಾರೆ. ಹಿಂದೂ ಅತ್ಯಂತ ಶ್ರೇಷ್ಠವಾದ ವಿಚಾರವನ್ನು ಜಗತ್ತಿಗೆ ಪ್ರಸಾರ ಮಾಡುತ್ತದೆ. ಇವರು ರಾಜಕಾರಣ ಸಾವಿರ ಮಾತನಾಡಲಿ. ಹಿಂದೂ ಧರ್ಮ, ದೇವತೆಗಳ ಬಗ್ಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ. ಮೊಘಲರು, ಮುಸ್ಲಿಂರು, ಪೋರ್ಚುಗೀಸರು ಈ ದೇಶದ ಮೇಲೆ ದಾಳಿ ಮಾಡಿದರು. ಹಿಂಸೆ ಬೋಧಿಸುವವರು ಯಾರು ಎಂಬುದನ್ನು ಯೋಚನೆ ಮಾಡಬೇಕು. ಹಿಂದೂ ಧರ್ಮ, ಹಿಂದುತ್ವದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕು. ಅದರ ಬಗ್ಗೆ ಅನುಭವ ಪಡೆಯಬೇಕು ಎಂದು ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದರು.