ಸಿದ್ದು ಇಳಿಸಿ ಡಿಕೆ ಸಿಎಂ ಆಗ್ಲಿ ಅಂದಿಲ್ಲ: ಮೊಯ್ಲಿ

KannadaprabhaNewsNetwork | Published : Mar 5, 2025 12:31 AM

ನಾನು ಡಿ.ಕೆ.ಶಿವಕುಮಾರ್‌ ಅವರು ಮುಂದೆ ಒಂದು ದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೇನೆಯೇ ಹೊರತು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್‌ ಅವರನ್ನು ಮಾಡಬೇಕು ಎಂದು ಹೇಳಿಲ್ಲ. ಅದು ನನ್ನ ಹೇಳಿಕೆಯ ಉದ್ದೇಶವೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಸ್ಪಷ್ಟನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

ನಾನು ಡಿ.ಕೆ.ಶಿವಕುಮಾರ್‌ ಅವರು ಮುಂದೆ ಒಂದು ದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದೇನೆಯೇ ಹೊರತು ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್‌ ಅವರನ್ನು ಮಾಡಬೇಕು ಎಂದು ಹೇಳಿಲ್ಲ. ಅದು ನನ್ನ ಹೇಳಿಕೆಯ ಉದ್ದೇಶವೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿ ಸ್ಥಾನದ ಕುರಿತು ಯಾರೂ ಸಹ ಬಹಿರಂಗ ಹೇಳಿಕೆ ನೀಡಬಾರದು. ಅದರಿಂದ ಪಕ್ಷಕ್ಕೆ ತೊಂದರೆ ಆಗುತ್ತದೆ. ಮುಖ್ಯಮಂತ್ರಿ ಆಯ್ಕೆ ಆಗಬೇಕು ಎಂದರೆ ಪ್ರಜಾಪ್ರಭುತ್ವದ ಪ್ರಕ್ರಿಯೆಯಂತೆ ಶಾಸಕರ ಅಭಿಪ್ರಾಯ ಹಾಗೂ ಕಾರ್ಯಕರ್ತರ ಆಶಯ ಪಡೆದೇ ಮಾಡಬೇಕು. ಶಾಸಕರ ಜತೆ ಸಮಾಲೋಚನೆ ಮಾಡದೆ ತಕ್ಷಣ ಮಾಡಿದರೆ ತಪ್ಪಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾರ್ಕಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದ ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಡಿ.ಕೆ.ಶಿವಕುಮಾರ್‌ ಅವರಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಪಕ್ಷವನ್ನು ಬಲವಾಗಿ ಸಂಘಟಿಸುತ್ತಿದ್ದೀರಿ. ನಿಮಗೆ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದೆ. ಮುಂದೊಂದು ದಿನ ಆಗುತ್ತೀರಿ. ಈಗ ಮುಖ್ಯಮಂತ್ರಿ ಕುರಿತ ಚರ್ಚೆಗಳು ಅಗತ್ಯವಿಲ್ಲ ಎಂಬ ಅರ್ಥದಲ್ಲಿ ಸಲಹೆ ನೀಡಿದ್ದೇನೆ.

ಶಾಸಕರ ಅಭಿಪ್ರಾಯವನ್ನು ಪಡೆದೇ ಎಐಸಿಸಿ ಮುಖ್ಯಮಂತ್ರಿ ಕುರಿತು ನಿರ್ಧಾರ ಮಾಡಬೇಕು. ಹಿಂದೆ ಕೆಲವೊಮ್ಮೆ ಶಾಸಕರ ಅಭಿಪ್ರಾಯ ಏನಿದ್ದರೂ ಹೈಕಮಾಂಡ್‌ ತನ್ನ ನಿರ್ಧಾರದಂತೆ ಮಾಡಿದ್ದೂ ಇದೆ. ಆದರೆ ಆ ರೀತಿ ಆಗಬಾರದು ಎಂಬುದು ನನ್ನ ವಾದ ಎಂದು ಸ್ಪಷ್ಟಪಡಿಸಿದರು.ನನ್ನಷ್ಟು ಅನುಭವಿ ಯಾರೂ ಇಲ್ಲ: ನಾನು ಪಕ್ಷ ನಿಷ್ಠೆಯಲ್ಲಿ ದೇಶಕ್ಕೆ ನಂಬರ್ ಒನ್‌ ಎಂದು ಹೇಳಬಹುದು. 55 ವರ್ಷದಿಂದ ಪಕ್ಷದಲ್ಲೇ ಇದ್ದೇನೆ. ನನ್ನಷ್ಟು ಸುದೀರ್ಘ ಅನುಭವ ಉಳ್ಳವರು ರಾಜ್ಯದಲ್ಲಿ ಯಾರೂ ಇಲ್ಲ. ಹೈಕಮಾಂಡ್‌ ಹಂತದಲ್ಲೂ ಯಾರೂ ಇರಲಾರರು. ನನಗೆ ಪಕ್ಷದ ಬಗ್ಗೆ ಬದ್ಧತೆ ಇದೆ. ಹೀಗಾಗಿಯೇ ಈ ಸಲಹೆ ನೀಡಿದ್ದೇನೆ. ಸಾರ್ವಜನಿಕವಾಗಿ ಈ ಬಗ್ಗೆ ಯಾರೂ ಚರ್ಚೆ ಮಾಡಬಾರದು. ಮಾಡಿದರೆ ನಾನೇ ಹೈಕಮಾಂಡ್‌ಗೆ ದೂರು ನೀಡುತ್ತೇನೆ ಎಂದರು.

ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ನನ್ನ ಮಾತಿನ ಅರ್ಥವಲ್ಲ. ಮುಖ್ಯಮಂತ್ರಿ ಆಯ್ಕೆಗೆ ಯಾವ ರೀತಿ ಪ್ರಕ್ರಿಯೆ ಇರುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.

-ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ