ಮೇಲ್ವರ್ಗ, ಕೆಳವರ್ಗ ಎಂಬುದಕ್ಕೆ ನನ್ನ ಆಕ್ಷೇಪವಿದೆ: ಕೆ.ಎನ್. ರಾಜಣ್ಣ

KannadaprabhaNewsNetwork |  
Published : Feb 19, 2024, 01:32 AM IST
ದಸಂಸ 50 ಕ್ಕೆ ಚಾಲನೆ | Kannada Prabha

ಸಾರಾಂಶ

ಮೇಲ್ವರ್ಗ, ಕೆಳವರ್ಗ ಎಂಬುದಕ್ಕೆ ನನ್ನ ಆಕ್ಷೇಪವಿದೆ. ಎಲ್ಲಿಯವರೆಗೆ ಶೋಷಣೆಗೆ ಒಳಗಾಗುವವರು ಇರುತ್ತಾರೋ, ಅಲ್ಲಿಯವರೆಗೆ ಶೋಷಣೆ ಮಾಡುವವರು ಇದ್ದೇ ಇರುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವ್ಯಾಖ್ಯಾನಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಮೇಲ್ವರ್ಗ, ಕೆಳವರ್ಗ ಎಂಬುದಕ್ಕೆ ನನ್ನ ಆಕ್ಷೇಪವಿದೆ. ಎಲ್ಲಿಯವರೆಗೆ ಶೋಷಣೆಗೆ ಒಳಗಾಗುವವರು ಇರುತ್ತಾರೋ, ಅಲ್ಲಿಯವರೆಗೆ ಶೋಷಣೆ ಮಾಡುವವರು ಇದ್ದೇ ಇರುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ವ್ಯಾಖ್ಯಾನಿಸಿದರು.

ನಗರದ ಎಂಪ್ರೆಸ್ ಸಭಾಂಗಣದಲ್ಲಿ ದಸಂಸ ವತಿಯಿಂದ ಹಮ್ಮಿಕೊಂಡಿದ್ದ ದಸಂಸ 50 ರ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿಕ್ಕಿರುವ ಅವಕಾಶಗಳನ್ನು ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆದು ಆತ್ಮವಿಶ್ವಾಸ ಬೆಳೆಸಿಕೊಂಡರೆ ಮುನ್ನೆಡೆದರೆ ಮಾತ್ರ ಶೋಷಿತ ಸಮುದಾಯಗಳಿಗೆ ಉಳಿಗಾಲ ಎಂದರು.

ದಲಿತರು, ಹಿಂದುಳಿದವರು ತಮ್ಮನ್ನು ತಾವೇ ಕೆಳಜಾತಿಯವರು ಎಂದು ಕರೆದುಕೊಂಡು, ಉಳಿದವರು ಮೇಲೆಂಬ ಪಟ್ಟ ಕಟ್ಟುವುದು ಸಲ್ಲದು, ಭೌದ್ಧಿಕವಾಗಿ ಯಾರು ಕೀಳಲ್ಲ, ಮೇಲ್ಲಲ್ಲ. ಕೆಲವರು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂದುವರೆದಿರುತ್ತಾರೆ, ಕೆಲವರು ಹಿಂದೆ ಉಳಿದಿರುತ್ತಾರೆ. ಹಾಗಾಗಿ ಶಿಕ್ಷಣದಿಂದ ವಂಚಿತರಾಗದೆ, ಬಡವರಿಗೆ ಮೊದಲ ಶತೃವಾಗಿರುವ ಹಸಿವನ್ನು ಮೆಟ್ಟಿನಿಂತರೆ, ನಾವು ಯಾರಿಗೂ ಕಡಿಮೆಯಿಲ್ಲ. ಇದನ್ನು ಪ್ರತಿಯೊಬ್ಬ ದಲಿತ, ಹಿಂದುಳಿದ ಜಾತಿಗಳ ಯುವಜನರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಯುವಜನರಿಗೆ ಕಿವಿ ಮಾತು ಹೇಳಿದರು.

ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ. ಅದರೆ ನಮ್ಮ ಯುವಕರಿಗೆ ಮಾರ್ಗದರ್ಶನ ಮತ್ತು ಉತ್ತಮ ಪರಿಸರದ ಕೊರತೆ ಇದೆ. ಇವುಗಳನ್ನು ನೀಗಿಸುವ ನಿಟ್ಟಿನಲ್ಲಿ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಶೇ.೨೪ರ ಅನುದಾನಕ್ಕೆ ಕಾಯ್ದೆಯ ರೂಪ ಕೊಡಲಾಗಿದೆ. ಇದನ್ನು ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಿದರೆ ನಿಜವಾಗಿಯೂ ಸಾಧನೆಯ ಮೆಟ್ಟಿಲು ಹತ್ತಬಹುದು. ಸಂಘಟನೆಯಿಂದ ಬಂದವರಿಗೆ ಅಧಿಕಾರ ದೊರೆತರೆ ಅದು ಜನಸಮುದಾಯಕ್ಕೆ ಉಪಯೋಗವಾಗಲಿದೆ. ಹಾಗಾಗಿ ಸಂಘಟನೆಯಲ್ಲಿರುವ ವ್ಯಕ್ತಿಗಳು ರಾಜಕೀಯ ಅಧಿಕಾರ ಪಡೆಯಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಯುವಜನರು ನಡೆಯಬೇಕೆಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ಶೋಷಿತ ಸಮುದಾಯಗಳು ಹಿಂಜರಿಕೆ ಬಿಟ್ಟು ಸ್ವಾಭಿಮಾನ ಬೆಳೆಸಿಕೊಂಡು ರಾಜಕೀಯ ಅಧಿಕಾರ ಹಿಡಿಯುವ ಮೂಲಕ ತಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು.

ಕೋಟಗಾನಹಳ್ಳಿ ರಾಮಯ್ಯ ಮಾತನಾಡಿ, ದಲಿತರ ಹೋರಟಕ್ಕೆ 50 ವರ್ಷವಾದರೂ ಜೀವಂತವಾಗಿದೆ ಎಂದರೆ ಅಧಿಕಾರ ಬದಲಿಸುವ ಶಕ್ತಿ ಈಗಲೂ ದಲಿತ ಹೋರಾಟಕ್ಕಿದೆ, ಬದಲಿಸಬೇಕಾದ ಹೋರಾಟ ಇನ್ನು ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗುತ್ತಿರುವುದು ವಿಪರ್ಯಾಸ. ದಲಿತರ ಹೋರಾಟದ ರೋಧನೆಗಳು ಇಂದಿಗೂ ಹೆಚ್ಚುತ್ತಿದ್ದು, ದಲಿತರು ಬಂದೂಕು ಹಿಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸರಯೂ ನದಿ ತೀರದಲ್ಲಿ 20 ಸಾವಿರ ವರ್ಷಗಳ ಇತಿಹಾಸ, ಸನಾತನದ ಕ್ಯಾನ್ಸರ್‌ ಭಾರತದಲ್ಲಿ ಹುಟ್ಟಿದೆ, ಈ ನೆಲದ ಮೂಲ ನಿವಾಸಿಗಳ ನಿಶಾದದ ಸಮಾನತೆಯನ್ನು ತರುತ್ತೇವೆ. ದಲಿತ ಸಂಘರ್ಷ ಸಮಿತಿ ವಿರಾಮದ ಕಾಲದಲ್ಲಿ, ಕಂಗೆಟ್ಟಿದ್ದ ಕಣ್ಣುಗಳಲ್ಲಿ ಭವಿಷ್ಯದ ಚಿಂತೆಗಳಿಲ್ಲ. ತುಂಬಿದ ಹೊಟ್ಟೆಯಲ್ಲಿ ನಿರಾತಂಕ ಭಾವ ಹೆಚ್ಚಿದ್ದರಿಂದ ಹೋರಾಟ ನವ್ಯೋತ್ತರ ಆಧುನಿಕ ಕಾಲಘಟ್ಟದಲ್ಲಿ ದಲಿತರು ಆರಾಮಾಗಿರುವುದು ಮನುವಾದ ಚಿಗುರಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ಬಸವರಾಜು, ಐದು ವರ್ಷಗಳ ಭಾರತೀಯ ಇತಿಹಾಸದಲ್ಲಿ ಶ್ರೇಣಿಕೃತ ವರ್ಣ ವ್ಯವಸ್ಥೆಯಿಂದ ನಲುಗಿ ಹೋಗಿದ್ದ ಭಾರತದ ದಲಿತರಿಗೆ, ಡಾ. ಅಂಬೇಡ್ಕರ್‌ ಮನುಸೃತಿಯನ್ನು ಸುಟ್ಟು ಹಾಕುವ ಮೂಲಕ ಹೊಸ ದಾರಿಯನ್ನು ತೋರಿಸಿದರು. ಅವರು ಹಚ್ಚಿದ ಹೋರಾಟದ ಹಣತೆ, ಮತ್ತಷ್ಟು ಮನ, ಮನೆಗಳಲ್ಲಿ ಬೆಳೆಗಬೇಕಿದೆ. ದಸಂಸ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್‌, ಲೋಹಿಯಾ ಹಾದಿಯಲ್ಲಿ ನಡೆಯಬೇಕಿದೆ. ಗಾಂಧಿ ಸ್ವಾತಂತ್ರ ಚಳವಳಿಯ ಮೂಲಕ ಭಾರತೀಯರನ್ನು ದಾಸ್ಯದಿಂದ ಬಿಡುಗಡೆ ಮಾಡಿದರೆ, ಅಂಬೇಡ್ಕರ್‌ ದಲಿತ ಚಳವಳಿಯ ಮೂಲಕ ದಲಿತರನ್ನು ಶ್ರೇಣಿಕೃತ ವರ್ಣ ವ್ಯವಸ್ಥೆ ಬಿಡುಗಡೆಗೊಳಿಸಿದರು. ದಲಿತರ ಮೇಲೆ ನಡೆಯುತಿದ್ದ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಕೊಲೆ, ಸುಲಿಗೆಗಳ ವಿರುದ್ಧ ರಕ್ಷಣೆಗಾಗಿ ದಸಂಸ ಕಟ್ಟಲಾಯಿತು. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ತಿಮ್ಮರಾಯಪ್ಪ, ನರಸೀಯಪ್ಪ, ಎನ್.ಜಿ. ರಾಮಚಂದ್ರ, ಸಿಂಗದಹಳ್ಳಿ ರಾಜಕುಮಾರ್‌, ಕೆ. ದೊರೈರಾಜು, ನಾರಾಯಣರಾಜು, ಎಂ.ಸಿ. ಮೂರ್ತಿ, ಮಾರನಹಳ್ಳಿ ಶಿವಣ್ಣ, ಗಿರಿಯಪ್ಪ ಶಿರಾ, ಎಂ.ಸಿ. ಮೂರ್ತಿ ಸೇರಿದಂತೆ ಹಲವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ಸಂಚಾಲಕ ಕುಂದೂರ ತಿಮ್ಮಯ್ಯ ವಹಿಸಿದ್ದರು. ಗಂಗಮ್ಮ, ಗಂಗರಾಜಮ್ಮ, ಸಿ.ಜೆ. ಲಕ್ಷ್ಮಿಪತಿ, ಡಾ. ರವಿಕುಮಾರ್‌ ನೀ.ಹ., ವಿರೂಪಾಕ್ಷ ಡ್ಯಾಗೇರಹಳ್ಳಿ, ಮರುಳಿ ಕುಂದೂರು, ಡಾ. ಶಿವಣ್ಣ ತಿಮ್ಮಲಾಪುರ, ಮನುಚಕ್ರವರ್ತಿ, ಐಡಿಹಳ್ಳಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

QUOTE-1

ಎಲ್ಲಾ ಶೋಷಿತರ, ನೊಂದವರನ್ನು ತಬ್ಬಿ, ಸಂತೈಸುವ ಮಾತೃ ಹೃದಯ ಇರುವುದು ದಸಂಸಕ್ಕೆ ಮಾತ್ರ. ಶೋಷಿತರೆಲ್ಲಾ ಒಂದೇ ಎಂಬ ವಿಶಾಲ ತಳಹದಿಯ ಮೇಲೇಯೇ ದಲಿತ ಸಂಘರ್ಷ ಸಮಿತಿ ರೂಪಗೊಂಡಿದೆ. ಬ್ರಿಟಿಷರಿಂದ ಶಿಕ್ಷಣವನ್ನು ತಮ್ಮದಾಗಿಸಿಕೊಂಡ ದಲಿತ ಸಮುದಾಯ, ಅಂಬೇಡ್ಕರ್‌ ನೀಡಿದ ಸಂವಿಧಾನದಿಂದ ಸವಲತ್ತುಗಳನ್ನು ಪಡೆಯುತ್ತಾ ಒಂದೊಂದೆ ಹೆಜ್ಜೆಗಳನ್ನು ಮುಖ್ಯವಾಹಿನಿಯತ್ತ ಇಡುತ್ತಿದೆ.

ಸುಬ್ಬು ಹೊಲೆಯರ್‌, ಸಾಹಿತಿ

QUOTE-2

ತುಮಕೂರಿನಲ್ಲಿ ಡಿಎಸ್ಎಸ್ ಹುಟ್ಟಿದ್ದು ಒಂದು ಚಪ್ಪಲಿ ಅಂಗಡಿಯಲ್ಲಿ. ಅಂತಹ ಅನೇಕ ಆಶ್ರಯತಾಣಗಳನ್ನು ನೆನಪು ಮಾಡಿಕೊಳ್ಳುವ ಆತ್ಮಾವಲೋಕನ ಸಮಾರಂಭ ಇದಾಗಿದೆ. ಜೊತೆಗೆ ಇಲ್ಲಿಂದ ಮುಂದೆ ಹೇಗೆ ಹೋರಾಟದ ರಥವನ್ನು ಮುನ್ನೆಡೆಸಬೇಕೆಂಬು ಆಲೋಚನೆಯಲ್ಲಿ ನಾವೆಲ್ಲರೂ ತೊಡಗಬೇಕಿದೆ. ವ್ಯಕ್ತಿ, ಜಾತಿ ಕೇಂದ್ರಿತ ಹೋರಾಟಗಳಿಗಿಂತ, ವಿಚಾರ ಕೇಂದ್ರೀತ ಹೋರಾಟಗಳಿಗೆ ನಾವೆಲ್ಲರೂ ಒತ್ತು ನೀಡಬೇಕಿದೆ. ಆಗ ಮಾತ್ರ ನಮ್ಮ ಶಕ್ತಿ ದುಪ್ಪಟ್ಟಾಗಲಿದೆ.

ಕೆ. ದೊರೈರಾಜು ಚಿಂತಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಕ್ಕೆ ಹೆದರಿ ಗುತ್ತಲ ರೈತ ಆತ್ಮಹತ್ಯೆ
ರಂಜಾನ್, ಯುಗಾದಿ ಆಚರಣೆ ಸೌಹಾರ್ದತೆಯ ಸಂಕೇತ-ಬಿ.ಸಿ. ಪಾಟೀಲ್‌