ಹೊಸಕೋಟೆ: ನನ್ನ ಸಾರ್ವಜನಿಕ ಜೀವನದಲ್ಲಿ ಇದುವರೆಗೂ ಯಾವುದೇ ಮೋಸ, ಸುಳ್ಳು ಅಥವಾ ಭ್ರಷ್ಟಾಚಾರದ ಕಳಂಕವಿಲ್ಲ. ವಿದ್ಯಾರ್ಥಿ ನಾಯಕನಾಗಿ ಆರಂಭವಾದ ನನ್ನ ಪಯಣ ಐದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದು, ಶಿಕ್ಷಣ ಕ್ಷೇತ್ರದ ಪ್ರಗತಿಗೆ ಕೆಲಸ ಮಾಡಿದ ತೃಪ್ತಿ ಇದೆ ಎಂದು ಎಂಎಲ್ಸಿ ಪುಟ್ಟಣ್ಣ ತಿಳಿಸಿದರು.
ನಾನು ೫ ಬಾರಿ ಎಂಎಲ್ಸಿಯಾಗಿ ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಮಾಜದ ಪರವಾಗಿ ನಿರಂತರವಾಗಿ ಕೆಲಸ ಮಾಡಿದ್ದೇನೆ. ಯಾವುದೇ ಒಂದು ಧರ್ಮ, ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ಕೆಲಸ ಮಾಡಿಲ್ಲ. ರಾಜ್ಯದ ಪ್ರತಿಯೊಬ್ಬ ಶಿಕ್ಷಕರನ್ನೂ ಕುಟುಂಬದ ಸದಸ್ಯರಂತೆ, ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತಮ್ಮ ಮಕ್ಕಳಂತೆ ಕಂಡು ಸೇವೆ ಸಲ್ಲಿಸಿದ್ದೇನೆ. ಯಾವುದೇ ಕೆಲಸ, ಸೀಟು ಅಥವಾ ವರ್ಗಾವಣೆಗೆ ಹಣ ಪಡೆದಿಲ್ಲ. ತಮ್ಮಿಂದ ಕೆಲಸ ಮಾಡಿಸಿಕೊಂಡವರ ಸಂಖ್ಯೆ ಸಾವಿರಾರು ಇದ್ದರೂ, ಇದುವರೆಗೆ ಒಂದೇ ಒಂದು ಕಳಂಕವೂ ತಮ್ಮ ಮೇಲೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದ ವಿಚಾರದಲ್ಲಿ ಸಾಧ್ಯವಾದಷ್ಟು ನೆರವು ನೀಡಿದ್ದೇನೆ. ಹೊಸಕೋಟೆ ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಭಾಗಗಳ ವಿದ್ಯಾರ್ಥಿಗಳೊಂದಿಗೆ ತಮ್ಮ ಆತ್ಮೀಯ ನಂಟಿದೆ. ಜಿಲ್ಲೆಗಳ ಪುನರ್ ವಿಂಗಡಣೆ ನಡೆದರೂ ನಾವೆಲ್ಲರೂ ಒಂದೇ ಕುಟುಂಬದವರಂತೆ ಇದ್ದೇವೆ. ಮುಂದಿನ ತಿಂಗಳು ಎಂಎಲ್ಸಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈ ತಿಂಗಳ ಅಂತ್ಯದೊಳಗೆ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. 8 ತಾಲೂಕುಗಳ ಶಿಕ್ಷಕರು ಹಾಗೂ ಪದವೀಧರರು ಒಗ್ಗಟ್ಟಾಗಿ ಬೆಂಬಲ ನೀಡುವಂತೆ ಮನವಿ ಮಾಡಿದರು.ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ, ವಿದ್ಯಾರ್ಥಿಗಳ ಹಿತಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಕಚೇರಿಗಳಲ್ಲಿ ಅನಗತ್ಯವಾಗಿ ವಿಧಿಸಲಾಗಿದ್ದ ಕೆಲವು ಶುಲ್ಕ ಹಾಗೂ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ ಪರೀಕ್ಷೆ ಸೇರಿ ವಿವಿಧ ಶಿಕ್ಷಣ ಸಂಬಂಧಿತ ವಿಚಾರಗಳಲ್ಲೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನಷ್ಟು ಯೋಜನೆಗಳನ್ನು ರೂಪಿಸಿದ್ದು, ಸರ್ಕಾರದ ಮಟ್ಟದಲ್ಲಿ ಅವುಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು. ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ತಮ್ಮ ಪ್ರಮುಖ ಗುರಿಯಾಗಿದೆ ಎಂದರು.
ತಮಕೂರು ವಿವಿ ಸಿಂಡಿಕೇಟ್ ಸದಸ್ಯ ದೇವರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ತಾಲೂಕು ಅಧ್ಯಕ್ಷ ರಾಜಣ್ಣ, ನಿವೃತ್ತ ಶಿಕ್ಷಕ ಬಿ.ನಾಗರಾಜ್, ವಿವೇಕಾನಂದ ಶಾಲೆ ಕಾರ್ಯದರ್ಶಿ ನಾಗರಾಜ್ ಗುಪ್ತಾ, ಮಹದೇವ ಕಾಲೇಜು ಪ್ರಾಂಶುಪಾಲ ರಾಮನಾಥ ಸೇರಿ ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.
ಹೊಸಕೋಟೆ ನಗರದ ಎಸ್ಜೆಆರ್ಎಸ್ ಶಾಲೆಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಶಿಕ್ಷಕರು ಪದವೀಧರರನ್ನು ಉದ್ದೇಶಿಸಿ ಮುಂದಿನ ಎಂಎಲ್ಸಿ ಚುನಾವಣೆ ಕುರಿತು ಮಾತನಾಡಿದರು.