ನಾಡೋಜ ಬರಗೂರು ಮೇಷ್ಟ್ರು ಬಳಗ, ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಸಾಹಿತಿ ಸಕ್ಕರ ನಾಗರಾಜು ಅವರ ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕರುಣೆ, ಸಮಾನತೆ, ಶಾಂತಿ ಮತ್ತು ಮಾನವೀಯತೆಯ ಬೆಳಕು ಪ್ರತಿಯೊಂದು ಮನದಲ್ಲೂ ಬೆಳಗಲಿ.
ಕನ್ನಡಪ್ರಭ ವಾರ್ತೆ ಶಿರಾ
ಬುದ್ಧ ಮನುಕುಲಕ್ಕೆ ನೀಡಿದ ಅತ್ಯಂತ ದೊಡ್ಡ ಸಂದೇಶ ಕರುಣೆ ಮತ್ತು ಅಹಿಂಸೆ. ಮನುಷ್ಯನ ನೋವನ್ನು ಅರ್ಥಮಾಡಿಕೊಳ್ಳುವುದು, ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ಮತ್ತು ಎಲ್ಲ ಜೀವಿಗಳನ್ನೂ ಸಮಾನವಾಗಿ ಕಾಣುವುದು ಅವರ ಬೋಧನೆ ಪ್ರಮುಖ ಅಂಶಗಳು. ಅಂತಹ ಮಹಾನ್ ವ್ಯಕ್ತಿ ಸಂದೇಶವನ್ನು ಪುಸ್ತಕದ ಶೀರ್ಷಿಕೆಯನ್ನಾಗಿಟ್ಟಿರುವುದು ಸಮಯೋಚಿತವಾದುದು ಎಂದು ಆರ್.ಡಿ.ಪಿ.ಆರ್. ಇಲಾಖೆ ನಿವೃತ್ತ ನಿರ್ದೇಶಕ ಮತ್ತು ಚಿಂತಕರಾದ ಡಾ. ಬೂವನಹಳ್ಳಿ ನಾಗರಾಜ್ ಹೇಳಿದರು.ನಗರದ ನಿವೃತ್ತ ನೌಕರರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ನಾಡೋಜ ಬರಗೂರು ಮೇಷ್ಟ್ರು ಬಳಗ, ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಸಾಹಿತಿ ಸಕ್ಕರ ನಾಗರಾಜು ಅವರ ಬುದ್ಧ ಕರುಣೆಯ ಹೊತ್ತು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕರುಣೆ, ಸಮಾನತೆ, ಶಾಂತಿ ಮತ್ತು ಮಾನವೀಯತೆಯ ಬೆಳಕು ಪ್ರತಿಯೊಂದು ಮನದಲ್ಲೂ ಬೆಳಗಲಿ ಎಂದು ಆಶಿಸಿದರು.
ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ಮಾತನಾಡಿ, ಇಂದು ನಾವು ಸಾಮಾಜಿಕ ಬಿಕ್ಕಟ್ಟಿನಲ್ಲಿದ್ದೇವೆ. ಮನುಷ್ಯ ಅಸ್ತಿತ್ವವೇ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಬುದ್ಧ ಕರುಣೆಯ ಹೊತ್ತು ಪ್ರಸ್ತುತ ಸೂಕ್ತ ಶೀರ್ಷಿಕೆ ಎಂದು ಅಭಿಪ್ರಾಯಪಟ್ಟರು.ಸಾಹಿತಿ ಸಕ್ಕರ ನಾಗರಾಜು ಅವರು ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನಗೆ ನನ್ನ ತಂದೆ ತಾಯಿಗಳೇ ಮಾಗದರ್ಶಕರು. ಅವರು ನನ್ನ ಕಲೆ ಸಾಹಿತ್ಯ, ಸಾಂಸ್ಕೃತಿಕ ವಾತಾವರಣಕ್ಕೆ ಪ್ರೋತ್ಸಾಹ ನೀಡಿದ್ದಕ್ಕೆ ಇಂದು ನಾನು ಬುದ್ಧ ಕರುಣೆಯ ಹೊತ್ತು ಎಂಬ ಚೊಚ್ಚಲ ಕವನ ಸಂಕಲನವನ್ನು ನಿಮ್ಮೆಲ್ಲರ ಕೈಗೆ ಇಡುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಕೃತಿ ಬಿಡುಗಡೆ ಮಾಡಿದ ಡಾ.ಮಮ್ತಾಜ್ ಬೇಗಂ ಮಾತನಾಡಿ, ಬುದ್ಧನ ವ್ಯಕ್ತಿತ್ವದ ಮೂಲಾಧಾರವೇ ಕರುಣೆ. ಮನುಷ್ಯನಲ್ಲಿ ತಾಳ್ಮೆ, ನಿಶ್ಯಬ್ಥತೆಯನ್ನು ಒಳಗೊಳ್ಳುವ ಕಾವ್ಯ ಕಟ್ಟಿಕೊಳ್ಳುವುದು, ಮಾನವನ ಭಾವನೆಗಳ ಆಳವನ್ನು, ಆಲೋಚನೆಯನ್ನು ಕೃತಿ ಅನಾವರಣೆಗೊಳಿಸುತ್ತದೆ ಎಂದು ಹೇಳಿದರು.ಕೃತಿ ಕುರಿತು ಮಾತನಾಡಿದ ಡಾ. ಆಶಾ ಬಗ್ಗನಡು ಅವರು, ಕಾವ್ಯ ಕನ್ನಿಕೆಯನ್ನು ಹಿಡಿದಿಡುವುದು ಕವಿಯ ಆಂತರ್ಯದ ಅಂತರವನ್ನು ಬಿಂಬಿಸುವುದಾಗಿದೆ. ಕಾವ್ಯದ ಅಭಿವ್ಯಕ್ತಿ ಅದರಲ್ಲಿರುವ ಸೌಂದರ್ಯವನ್ನು, ಕಾರುಣ್ಯತೆಯನ್ನು ಹೆಚ್ಚಿಸುವಲ್ಲಿ ಕವಿ ಸಂಪನ್ನರಾಗಿದ್ದಾರೆ ಎಂದು ಹೇಳಿದರು.
ಡಾ. ನಾಡೋಜ ಬರಗೂರು ಮೇಷ್ಟ್ರು ಬಳಗ ಅಧ್ಯಕ್ಷರಾದ ವೈ. ನರೇಶ್ ಭಾಬು, ವೈದ್ಯರಾದ ಡಾ.ಡಿ.ಎಂ. ಗೌಡ, ನವೋದಯ ಯುವ ಬಳಗದ ಜಯರಾಮಕೃಷ್ಣ, ಹೆಂದೊರೆ ಶಿವಣ್ಣ, ಬಟ್ಟಿಗಾನಹಳ್ಳಿ ದೇವರಾಜ್, ದ್ವಾರರನಕುಂಟೆ ಲಕ್ಷ್ಮಣ್, ಚಂಗಾವರ ಕೃಷ್ಣಪ್ಪ, ಡಿ.ಎಸ್. ಕೃಷ್ಣಮೂರ್ತಿ, ರೂಪೇಶ್ ಕೃಷ್ಣಯ್ಯ, ಕಣಜನಹಳ್ಳಿ ಶ್ರೀಧರ್ ಸೇರಿ ಹಲವರು ಹಾಜರಿದ್ದರು.