ದಿನಾಲು ಸಾಹುಕಾರರ ಫೋಟೋ ನೋಡ್ತಿದ್ದೆ, ಈಗ ಪೂಜೆ ಮಾಡ್ಬೇಕಿದೆ

KannadaprabhaNewsNetwork |  
Published : May 12, 2026, 01:15 AM IST
ಚಿತ್ರದುರ್ಗ ಎರಡನೇ ಪುಟಕ್ಕೆ | Kannada Prabha

ಸಾರಾಂಶ

ಸಚಿವ ಡಿ.ಸುಧಾಕರ್ ಮನೆ ಸಮೀಪದ ಅಬ್ಬಾಸ್‌ನ ಟೀ ಅಂಗಡಿ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ದಿನ ಬೆಳಗಾದರೆ ಸಾಹುಕಾರ್ ಸುಧಾಕರ್ ಸಾಹೇಬರ ಫೋಟೋ ನೋಡಿಯೇ ಬದುಕು ಆರಂಭಿಸುತ್ತಿದ್ದೆ, ಇಷ್ಟು ಬೇಗ ಹೂವಿನ ಹಾರ ಹಾಕುವ ಪರಿಸ್ಥಿತಿ ಬರುತ್ತೆ ಅಂತ ಊಹಿಸಿರಲಿಲ್ಲ.

ಟೀ ಅಂಗಡಿ ಮಾಲೀಕ ಅಬ್ಬಾಸ್‌ನ ಅಂತರಾಳದ ನುಡಿಗಳಿವು. ಸಚಿವ ಡಿ.ಸುಧಾಕರ್ ಅವರ ಚಳ್ಳಕೆರೆಯ ನಿವಾಸ ಗೊಮ್ಮಟ ನಿಲಯದ ಪಕ್ಕದಲ್ಲಿ ಚಿಕ್ಕದೊಂದು ಟೀ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಅಬ್ಬಾಸ ಕಳೆದ 25 ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದ.

ಸುಧಾಕರ್ ಮನೆ ಪಕ್ಕದಲ್ಲಿ ಇರುವ ಸೆವೆನ್ ಹಿಲ್ಸ್ ಡಿಸ್ಟಲರಿ ಕಚೇರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಸಣ್ಣದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಟೀ, ಕಾಫೀ ಸೇರಿದಂತೆ ಬೇಸಿಗೆ ಬಂತೆಂದರೆ ಕಲ್ಲಂಗಡಿ, ಪಪ್ಪಾಯಿ ಮಾರಾಟ ಮಾಡುತ್ತಿದ್ದರು. ಇಂತಹ ಬಡ ವ್ಯಾಪಾರಿಗೆ ಸುಧಾಕರ್ ಆಶ್ರಯ ಕೊಟ್ಟಿದ್ದರ ಕುರಿತು ಅಬ್ಬಾಸ್ ಅಭಿಮಾನದಿಂದ ನುಡಿಯುತ್ತಾರೆ.

ನಮ್ಮ ಸಾಹುಕಾರ ಬಡವರಿಗೆ ಭರ್ತಿ ಸಹಾಯ ಮಾಡುತ್ತಿದ್ದರು. ಕಷ್ಟ ಎಂದು ಸಹಾಯ ಬೇಡಿ ಬಂದವರಿಗೆ ಎಂದಿಗೂ ವಾಪಾಸ್ ಕಳಿಸಿದವರಲ್ಲ. ಒಮ್ಮೆ ನನ್ನ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಲು ನಗರಸಭೆಯವರು ಬಂದಾಗ ಕೈ ಮುಗಿದು ಬೇಡಿಕೊಂಡರೂ ಬಿಟ್ಟಿರಲಿಲ್ಲ. ಪೆಟ್ಟಿಗೆ ಎತ್ತಿ ಬೇರೆಡೆ ಇಟ್ಟಿದ್ದರು. ನಮ್ ಸಾಹುಕಾರ್ ಬೆಂಗಳೂರಿನಿಂದ ಬಂದು ಅಬ್ಬಾಸ್ ಎಲ್ಲೋದ ಅಂತ ಕೆಲಸದವರನ್ನ ಕೇಳಿದ್ದಾರೆ. ವಿಷಯ ತಿಳಿದು ನಗರಸಭೆಯವರಿಗೆ ಹೇಳಿ ಪೆಟ್ಟಿಗೆ ಅಂಗಡಿ ಮತ್ತೆ ಇಲ್ಲಿಗೆ ಬರುವಂತೆ ಮಾಡಿದ್ದರು. ಅವರ ಫೋಟೋ ನಮ್ಮ ಅಂಗಡಿಯಲ್ಲಿಟ್ಟುಕೊಂಡು ದಿನಾಲು ಸಾಹುಕಾರನ ಮುಖ ನೋಡಿಯೇ ಆರಂಭಿಸುತ್ತೇನೆ. ಅಲ್ಲಿಂದ ಇಲ್ಲಿಯವರೆಗೂ ಸಾಹುಕಾರ್ ಅವರ ಋಣದಲ್ಲಿಯೇ ಬದುಕುತ್ತಿದ್ದೇನೆ ಎಂದು ಕಣ್ಣೀರಾಗುತ್ತಾರೆ ಅಬ್ಬಾಸ್.

ಇಬ್ಬರು ಮಕ್ಕಳಿರುವ ಅಬ್ಬಾಸ್ ಇದೀಗ ವಯಸ್ಸಿನ ಕಾರಣಕ್ಕೆ ಮಕ್ಕಳು ಟೀ ಅಂಗಡಿಯ ಉಸ್ತುವಾರಿ ನೋಡಿಕೊಳ್ಳುತ್ತಿರುತ್ತಾರೆ. ಇದುವರೆಗೂ ಮಕ್ಕಳ ಜೀವನ ಇದರಲ್ಲಿಯೇ ನಡೆಯುತ್ತಿತ್ತು. ಸಾಹುಕಾರನಿಲ್ಲದ ಈ ಮನೆಯ ಮುಂದೆ ಇನ್ನು ಮುಂದೆ ಹೇಗೆ ಇರಲಿ ಸ್ವಾಮೀ ಎಂದು ಗೋಳಿಡುತ್ತಾರೆ.

ನಮ್ಮ ಪಾಲಿನ ದೇವರೇ ಹೋದ ಮೇಲೆ ನಮಗಿನ್ನಾರು ದಿಕ್ಕು. ನಮ್ಮಂತ ತಬ್ಬಲಿಗಳನ್ನು ಹೊಟ್ಟೆಗಾಕಿಕೊಳ್ಳುವವರು ಯಾರಿದ್ದಾರೆ ಎಂದು ಅಂತರಾಳದ ನೋವನ್ನು ಹರವುತ್ತಾನೆ. ದಿನಾಲು ಫೋಟೋ ನೋಡಿ ಹಸಿ ಬಟ್ಟೆಯಿಂದ ಒರೆಸುತ್ತಿದ್ದೆ. ಈಗ ಹೂವಿನ ಹಾರ ಹಾಕಿ ಪೂಜಿಸಬೇಕಿದೆ. ನಮ್ ಸಾಹುಕಾರ ಇಷ್ಟು ಬೇಗ ಹೋಗ್ತಾನೆ ಅಂತ ಅಂದುಕೊಂಡಿರಲಿಲ್ಲ. ಆಸ್ಪತ್ರೆಯಲ್ಲಿದ್ದಾಗೆ ಬೇಗ ಚಳ್ಳಕೆರೆಗೆ ವಾಪಸ್ಸಾಗಲಿ ಎಂದು ಪ್ರಾರ್ಥನೆ ಮಾಡ್ತಿದ್ದೆ. ಆ ದೇವ್ರಿಗೆ ನನ್ ಮಾತು ಕೇಳಿಸಲಿಲ್ಲವೆಂದು ಅಬ್ಬಾಸ್ ಕಣ್ಣೀರಾದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಮಾನಸದ ನಾಯಕನಿಗೆ ಕಣ್ಣೀರಿನ ಅಶ್ರುತರ್ಪಣ
ಸೂರನಹಳ್ಳಿಯಲ್ಲಿ ಸುಧಾಕರ್ ನೆನೆದು ಕಣ್ಣೀರು