ಕನ್ನಡಪ್ರಭ ವಾರ್ತೆ ತಾಳಿಕೋಟೆ
ಬಹುದಿನಗಳ ಕನಸ್ಸಾಗಿ ಉಳಿದುಕೊಂಡಿದ್ದ ಆಲಮಟ್ಟಿ-ಯಾದಗಿರಿ ರೈಲ್ವೇ ಮಾರ್ಗ ಅನುಷ್ಠಾನಕ್ಕೆ ಸಂಬಂದಪಟ್ಟಂತೆ ಕೊನೆಯ ಹಂತದ ಸರ್ವೆ ಕಾರ್ಯ ನಡೆಸಲು ಕೇಂದ್ರ ರೈಲ್ವೆ ಸಚಿವ ವೈಷ್ಣವ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದ ಸಂಸದ ರಮೇಶ ಜಿಗಜಿಣಗಿ ಅವರನ್ನು ಆಲಮಟ್ಟಿ-ಯಾದಗಿರಿ ಹೋರಾಟ ಸಮಿತಿ ಪದಾಧಿಕಾರಿಗಳು ಪಟ್ಟಣದಲ್ಲಿ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು, ಹೋರಾಟ ಸಮಿತಿಯ ಸದಸ್ಯರು ಯಾವುದೇ ಆತಂಕ ಪಡಬೇಡಿ. ಈ ಕಾರ್ಯ ಯಶಸ್ವಿಗೊಳ್ಳಲಿದೆ ಎಂದು ಹೇಳಿದರು.ಈ ವೇಳೆ ಮಾತನಾಡಿದ ರೈಲ್ವೆ ಹೋರಾಟ ಸಮಿತಿ ಮುಖಂಡ ಆರ್.ಎಸ್.ಪಾಟೀಲ(ಕೂಚಬಾಳ), ಬ್ರಿಟಿಷರ ಕಾಲದಲ್ಲಿಯೇ ಆಗಬೇಕಿದ್ದ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗವು ಹಾಗೆಯೇ ಉಳಿದಿತ್ತು. ಹೋರಾಟ ಸಮಿತಿಯವರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಸದ್ಯ ಕೇಂದ್ರ ರೈಲ್ವೆ ಸಚಿವರಾದ ವೈಷ್ಣವ ಅವರಿಗೆ ಸಂಸದ ರಮೇಶ ಜಿಗಜಿಣಗಿ ಮನವರಿಕೆ ಮಾಡಿದ್ದರ ಪರಿಣಾಮ ಸರ್ವೆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಣ ಮಿಸಲಿಡಲು ಮುಂದಾಗಿದೆ. ಈ ಕಾರ್ಯ ಸರ್ವೆ ಹಂತದಲ್ಲಿ ನಿಲ್ಲದೇ ಸಂಸದರು ಕಾಳಜಿ ವಹಿಸಬೇಕಿರುವುದು ಅವಶ್ಯವಾಗಿದೆ. ಈ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಸಂಪೂರ್ಣ ಅನುಷ್ಠಾನಗೊಳ್ಳುವವರೆಗೂ ಸಂಸದರು ಪ್ರಯತ್ನಿಸಲಿ. ಮಾರ್ಗ ಪ್ರಾರಂಭಗೊಳ್ಳುವದರಿಂದ ಈ ಭಾಗದಲ್ಲಿ ಅತಿ ಹೆಚ್ಚು ಬೆಳೆಯುವ ಪ್ರಮುಖ ಬೆಳೆಗಳಾದ ಭತ್ತ, ತೊಗರಿ, ಬೆಳೆಗಳ ಇನ್ನಿತರ ಸಾಗಾಣಿಕೆಗೆ ಅನುಕೂಲವಾಗಲಿದೆ. ಅದರ ಜೊತೆಗೆ ಕೂಡಗಿ ಎನ್ಟಿಪಿಸಿ ಇರುವದರಿಂದ ಇನ್ನಷ್ಟು ಆದಾಯದ ಮಾರ್ಗ ಇದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಮಯದಲ್ಲಿ ಆಲಮಟ್ಟಿ-ಯಾದಗಿರಿ ರೈಲ್ವೆ ಹೋರಾಟ ಸಮಿತಿಯ ಹುಣಸಗಿ, ತಾಳಿಕೋಟೆ, ಮುದ್ದೇಬಿಹಾಳ ತಾಲೂಕಿನ ಸದಸ್ಯರು ಉಪಸ್ಥಿತರಿದ್ದರು.