ಕನ್ನಡಪ್ರಭ ವಾರ್ತೆ ಹಾಸನ
ಕರ್ನಾಟಕದಲ್ಲಿ ಅತ್ಯಾಚಾರ, ಅನಾಚಾರ, ಗೂಂಡಾಗಳ ಕೈಲಿ ಕಾನೂನು ಸುವ್ಯವಸ್ಥೆ ಅಡವಿಟ್ಟು ನೀವು ಮಂಡಿಯೂರಿದ್ದೀರಾ. ಇದೇ ಎರಡು ವರ್ಷದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದ್ದು, ಈ ಅನಾಚಾರದ ವಿರುದ್ಧ ಹಾಸನದಿಂದಲೇ ನಾರಿ ಶಕ್ತಿಗಳು ಹೋರಾಟ ಪ್ರಾರಂಭಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ ಕರೆ ಕೊಟ್ಟರು.ನಗರದ ಗಂಧದ ಕೋಠಿ ಬಳಿ ಇರುವ ಖಾಸಗಿ ಹೊಟೇಲೊಂದರಲ್ಲಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪೂಜ್ಯನೀಯ ಅಹಲ್ಯಬಾಯಿ ಹೋಳ್ಕರ್ ರವರ ೩೦೦ನೇ ವರ್ಷದ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಆಪರೇಷನ್ ಸಿಂದೂರ ಜಗತ್ತಿನಲ್ಲಿ ಎಲ್ಲೂ ಕೂಡ ನಡೆದಿರಲಿಲ್ಲ. ನಮ್ಮ ಹೆಣ್ಣು ಮಕ್ಕಳ ಸಿಂದೂರವನ್ನು ಅಳಿಸಿದವರ ರುಂಡವನ್ನು ಚೆಂಡಾಡುವ ಕೆಲಸ ನರೇಂದ್ರ ಮೋದಿ ಮಾಡಿ ತೋರಿಸಿದ್ದಾರೆ. ನಾವು ಇವತ್ತು ಎಲ್ಲರೂ ನಾಗರಿಕ ಯೋಧರಾಗಿ ಶ್ರಮವಹಿಸಿ ಮೋದಿ ಅವರಿಗೆ ಅಧಿಕಾರ ಕೊಡಿಸಿದ್ದಕ್ಕೆ ಪಾಕಿಸ್ತಾನವನ್ನು ಬಗ್ಗು ಬಡಿದು ಭಾರತ ಏನೆಂಬುದನ್ನು ಜಗತ್ತಿಗೆ ತೋರಿಸಲಾಗಿದೆ. ನಾವು ಕೂಡ ನಾಗರಿಕ ಯೋಧರು. ವಿಶೇಷವಾಗಿ ನಾರಿಶಕ್ತಿಯೊಂದಿಗೆ ಕಾಲಿಡಬೇಕೆಂಬುದನ್ನು ಅಹಲ್ಯಬಾಯಿ ಹೋಳ್ಕರ್ ಅಂದೇ ತೋರಿಸಿಕೊಟ್ಟಿದ್ದಾರೆ ಎಂದರು.ಧಾರವಾಡದ ಹುಬ್ಬಳಿ ಭಾಗದ ಕಾಲೇಜು ಕ್ಯಾಂಪಸ್ ನಲ್ಲಿ ಯುವಕನೊಬ್ಬ ಯುವತಿಗೆ ಚಾಕು ಹಾಕಿ ಸಾಯಿಸುತ್ತಾನೆ. ಈ ರೀತಿ ಭಾರತೀಯ ಹೆಣ್ಣು ಮಕ್ಕಳನ್ನು ಅಡ್ಡದಾರಿಯಿಂದ ಮೋಹಿಸಿ ಅವರನ್ನು ಸಾಯಿಸುವ ಹುನ್ನಾರ ನಡೆಯುತ್ತಿದೆ. ಈ ಅನಾಚಾರದ ವಿರುದ್ಧ ಹಾಸನದಿಂದಲೇ ನಾರಿ ಶಕ್ತಿಗಳು ಹೋರಾಟ ಪ್ರಾರಂಭಿಸಬೇಕು ಎಂದು ಕರೆ ಕೊಟ್ಟರು.
ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಮಾತನಾಡಿ, ಸಮಾಜದಲ್ಲಿ ಎಲ್ಲಾ ಕೆಲಸಗಳು ಸುಗಮವಾಗಿ ಎಲ್ಲಾ ವರ್ಗದವರಿಗೂ ಆಗಬೇಕು, ನನಗೆ ಬಂದಂತಹ ಕಷ್ಟಗಳು ಯಾರಿಗೂ ಬರಬಾರದು. ಅಹಲ್ಯಬಾಯಿ ಹೊಳ್ಕರ್ ನಂತಹ ಅನೇಕ ತಾಯಂದಿರು ಈ ಮಣ್ಣಿನಲ್ಲಿ ಹುಟ್ಟಿ ನಮಗೆ ಪ್ರೇರಣೆ ಆಗಿದ್ದಾರೆ. ಆ ವಿಚಾರವನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ನಮ್ಮ ಸಮಾಜದಲ್ಲಿ ಹೆಚ್ಚು ಶಕ್ತಿ ಕೊಡುವ ಕೆಲಸವನ್ನು ಮಾಡಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯನ್ನು ಕಾರ್ಯಗತ ಮಾಡಲಾಯಿತು. ಯಾರು ಯಶಸ್ವಿ ಆಡಳಿತ ನಡೆಸುತ್ತಾರೋ ಅವರು ಹೆಚ್ಚು ಅಧ್ಯಯನ ಮಾಡುತ್ತಾರೆ. ಅಹಲ್ಯಬಾಯಿ ಹೊಳ್ಕರ್ ಮತ್ತು ವಿವೇಕಾನಂದ ಸೇರಿದಂತೆ ಇಂತಹ ಮಹನೀಯರ ಪ್ರೇರಣೆಯನ್ನು ನರೇಂದ್ರ ಮೋದಿಯವರು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅಹಲ್ಯಬಾಯಿ ಹೊಳ್ಕರ್ ಅವರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆಯನ್ನು ಇದೇ ವೇಳೆ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಸುಧಾ ಪಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ವಿಜಯಲಕ್ಷ್ಮೀ ಅಂಜನಪ್ಪ, ರತ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಿಕಾ ಮತ್ತು ಇಂದಿರ ನಾಗರಾಜು, ಯೋಗೇಶ್, ಮಂಜು ಇತರರು ಉಪಸ್ಥಿತರಿದ್ದರು.