ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಬೊಮ್ಮೇಗಾನ ಹಳ್ಳಿಯಲ್ಲಿ ಅಂಬೇಡ್ಕರ್ ವಸತಿ ಶಾಲೆಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ 80 ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅದರಲ್ಲಿ ಸಂಸದ ಡಾ.ಕೆ.ಸುಧಾಕರ್ ರವರ ತಾಯಿ ಶಾಂತಮ್ಮ ನವರ ಹೆಸರಿನಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಶಾಂತಮ್ಮ ಕಾರ್ಡಿಯಾಕ್ ಕೇರ್ ಸೆಂಟರ್ ನಿರ್ಮಿಸುತ್ತೇನೆ ಎಂದರು.
ಸಂಸದರ ತಾಯಿ ಶಾಂತಮ್ಮನವರು ನನಗೂ ತಾಯಿಯೇ, ಅವರು ನನಗೂ ಊಟ ನೀಡಿದ್ದಾರೆ, ಅವರಿಗೆ ಹೃದಯಾಘಾತವಾದಾಗ ಅವರನ್ನು ಆಸ್ಪತ್ರೆಗೆ ತೆರಳಿಸುವಾಗ ಆರೂರಿನ ಮೆಡಿಕಲ್ ಕಾಲೇಜು ಬಳಿ ಮಾರ್ಗ ಮಧ್ಯೆ ತೀರಿಕೊಂಡರು. ಆದ್ದರಿಂದ ಅಲ್ಲಿಯೇ ಶಾಂತಮ್ಮ ಕಾರ್ಡಿಯಾಕ್ ಕೇರ್ ಸೆಂಟರ್ ನಿರ್ಮಿಸಿ, ಅದರ ಉದ್ಘಾಟನೆಗೆ ಸಂಸದ ಡಾ.ಕೆ.ಸುಧಾಕರ್ ಅವರನ್ನು ನಾನೇ ಖುದ್ದಾಗಿ ಹೋಗಿ ಆಹ್ವಾನಿಸುವೆ. ಅವರು ಒಳ್ಳೆಯ ಕೆಲಸ ಮಾಡಿದರೆ, ನಾನು ಅವರನ್ನು ಗೌರವಿಸುವೆ. ಹಾಗೆಯೇ ನಾನು ಒಳ್ಳೆಯ ಕೆಲಸ ಮಾಡಿದಾಗ ಅವರೂ ನನ್ನನ್ನು ಗೌರವಿಸಲಿ ಎಂದರು.ಸಿದ್ದರಾಮಯ್ಯ ಸರ್ಕಾರಕ್ಕೆ ಗೋಮಾತೆ ಶಾಪ ತಟ್ಟುತ್ತದೆ ಎಂಬ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಉತ್ತರಿಸಿ, ಬಿಜೆಪಿ ನಾಯಕ ಯಡಿಯೂರಪ್ಪರನ್ನು ಹಾದಿ ಬೀದಿಗಳಲ್ಲಿ ಬಯ್ಯುವುದನ್ನು ಮೊದಲು ಬಿಡಲಿ. ನಾಲ್ಕು ಗೋಡೆಗಳ ನಡುವೆ ಮಾತನಾಡಿಕೊಳ್ಳಬೇಕಾದ ಪಕ್ಷದ ಆಂತರಿಕ ಸಮಸ್ಯೆಯನ್ನು ಬೀದಿಗೆ ತಂದು ಈಶ್ವರಪ್ಪನವರು ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ. ಅವರು ಮೊದಲು ಬಿಜೆಪಿ ಸದಸ್ಯತ್ವ ಪಡೆಯಲಿ, ಆಗ ಅವರ ಗೋ ಹತ್ಯಾ ಶಾಪದ ಬಗ್ಗೆ ಮಾತನಾಡುವೆ ಎಂದು ಹೇಳಿದರು.
ಯತ್ನಾಳ್ ನನ್ನ ವಿರುದ್ಧ ಚುನಾವಣೆಗೆ ಸ್ಫರ್ಧಿಸುವುದಲ್ಲಾ, ನಾನೇ ಅವರ ವಿರುದ್ಧ ವಿಜಯಪುರದಲ್ಲಿ ಸ್ಪರ್ಧಿಸುವೆ, ಅವರಿಗೆ ಕನಿಷ್ಠ ಡೆಪಾಸಿಟ್ ಕೂಡ ಸಿಗದಂತೆ ಮಾಡುವೆ. ವಿಜಯಪುರ ನಗರದಲ್ಲಿ ಯಾವುದೇ ರಸ್ತೆಗಳು ಸರಿ ಇಲ್ಲಾ. ಅವರು 40 ವರ್ಷದಿಂದ ಗೆದ್ದು ಬರುತ್ತಿರುವ ಅವರ ಕ್ಷೇತ್ರಕ್ಕೆ ಕೊಟ್ಟಿರುವುದು ಕೇವಲ ಒಂದು ಆ್ಯಂಬುಲೆನ್ಸ್ ಮಾತ್ರ, ನಾನು ನನ್ನ ಕ್ಷೇತ್ರಕ್ಕೆ ನೀಡಿರುವುದು 10 ಆ್ಯಂಬುಲೆನ್ಸ್ ಗಳು. ನಾನು ಗೆದ್ದಾಗಿನಿಂದ 200 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿಯ ಜನತೆಯ ಕಷ್ಟ ಪರಿಹಾರಕ್ಕೆ ಯತ್ನಿಸಿ ಪರಿಹಾರ ನೀಡಿದ್ದೇನೆ. ಯತ್ನಾಳರು ಈ ವರೆಗೂ ಒಂದೇ ಒಂದು ಹಳ್ಳಿಗೂ ಭೇಟಿ ನೀಡಿಲ್ಲ. ನಾನು ಐನೂರಕ್ಕೂ ಹೇಚ್ಚು ಬೋರ್ ವೆಲ್ ಗಳನ್ನು ಪರಿಶಿಷ್ಟ ವರ್ಗ ಮತ್ತು ಜಾತಿಗೆ ನೀಡಿದ್ದೇನೆ. ಅವರು ಎಷ್ಟು ಕೊರೆಸಿದ್ದಾರೆ. ಇವೆಲ್ಲವನ್ನು ನೋಡಿದರೆ ನಾನು ವಿಜಯಪುರದಲ್ಲಿ ನಿಂತರೆ ಗೆಲ್ಲುವುದು ಶತಸಿದ್ಧ. 2028ಕ್ಕೆ ಅವರು ಹಿಂದೂ ಸರ್ಕಾರ ಬರುತ್ತದೆ. ನಾನೇ ಮುಖ್ಯ ಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ರಕ್ಷಿತ್ ರೆಡ್ಡಿ, ಜಿಪಂ ಮಾಜಿ ಸದಸ್ಯ ಕೆ.ಎಂ .ಮುನೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್ ಮತ್ತಿತರರು ಇದ್ದರು.