ಮಂತ್ರಿ ಸ್ಥಾನಕ್ಕಾಗಿ ಯಾರ ಬಳಿಯೂ ಹೋಗೋಲ್ಲ : ಶಾಸಕ ಸುಬ್ಬಾರೆಡ್ಡಿ

KannadaprabhaNewsNetwork | Updated : Jun 16 2025, 11:35 AM IST

ಜೂ. 19 ರಂದು ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗುಡಿಬಂಡೆ ತಾಲೂಕಿಗೆ ಪ್ರವಾಸೋದ್ಯಮ ಅಭಿವೃದ್ದಿಗೆ ಸುಮಾರು 200 ಕೋಟಿ ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿದೆ. ಅದನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿಸಲು ಶ್ರಮಿಸುತ್ತೇನೆ. 

 ಗುಡಿಬಂಡೆ :  ಸಚಿವ ಸ್ಥಾನಕ್ಕಾಗಿ ತಾವು ಬೇರೆಯವರ ಮನೆಯ ಬಳಿ ಹೋಗೊಲ್ಲ. ತಮಗೆ ಸಚಿವನಾಗುವ ಅರ್ಹತೆಯಿದೆ. ಜನರ ಬೆಂಬಲವಿದೆ. ಈ ಎಲ್ಲಾ ಅರ್ಹತೆಗಳಿಂದ ನನಗೆ ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ವಿಶ್ಚಾಸವಿದೆ ಎಂದು ಸತತವಾಗಿ ಮೂರು ಬಾರಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಹ್ಯಾಟ್ರಿಕ್ ಜಯ ಗಳಿಸಿದ ಶಾಸಕ ಸುಬ್ಬಾರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಶಾಸಕರು, ಸದ್ಯಕ್ಕೆ ಸಚಿವ ಸಂಪುಟದ ವಿಸ್ತರಣೆ ಸಾಧ್ಯತೆ ಕಾಣುತ್ತಿಲ್ಲ. ಒಂದು ವೇಳೆ ವಿಸ್ತರಣೆಯಾದಲ್ಲಿ ತಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.

ಕ್ಷೇತ್ರದಲ್ಲಿ ಪ್ರವಾಸೋದ್ಯಮ

ಜೂ. 19 ರಂದು ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗುಡಿಬಂಡೆ ತಾಲೂಕಿಗೆ ಪ್ರವಾಸೋದ್ಯಮ ಅಭಿವೃದ್ದಿಗೆ ಸುಮಾರು 200 ಕೋಟಿ ವೆಚ್ಚದಲ್ಲಿ ಡಿಪಿಆರ್ ತಯಾರಿಸಲಾಗಿದೆ. ಅದನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿಸಲು ಶ್ರಮಿಸುತ್ತೇನೆ. ಜೊತೆಗೆ ಬಾಗೇಪಲ್ಲಿಯಲ್ಲಿ ಹಲವು ಕಾಮಗಾರಿಗಳಿಗಾಗಿ ಅನುದಾನ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ವಿಶೇಷ ಅನುದಾನ ಸಿಗುವ ಭರವಸೆ ಇದೆ. ಅದನ್ನು ಸಿಎಂ ಸಿದ್ದರಾಮಯ್ಯನವರು ಈಡೇರಿಸುತ್ತಾರೆ ಎಂದರು.

ಅನುದಾನ ದೊರೆಯುವುದೇ?

ಗುಡಿಬಂಡೆ ತಾಲೂಕಿನ ಜನತೆಯ ಹಲವು ವರ್ಷಗಳ ಕನಸಾದ ಪ್ರವಾಸೋದ್ಯಮ ಅಭಿವೃದ್ದಿ ಈ ಭಾರಿ ನಡೆಯಲಿರುವ ಸಚಿವ ಸಂಪುಟದಲ್ಲಿ ಈಡೇರುತ್ತದೆ ಎಂಬ ಆಶಯವನ್ನು ಸ್ಥಳೀಯರು ಹೊಂದಿದ್ದಾರೆ. ಈಗಾಗಲೇ ಹಲವು ಬಾರಿ ಗುಡಿಬಂಡೆ ಅಮಾನಿ ಬೈರಸಾಗರ ಕೆರೆಯಲ್ಲಿ ಬೋಟಿಂಗ್, ಸುರಸದ್ಮಗಿರಿ ಬೆಟ್ಟದಲ್ಲಿ ಹಲವು ಕಾಮಗಾರಿಗಳಿಗೆ ಅನುದಾನ ಸಹ ನೀಡಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅನುದಾನ ವಾಪಸ್ ಹೋಗಿತ್ತು ಎಂಬ ಮಾಹಿತಿಯಿದೆ. ಈ ಬಾರಿಯಾದರೂ ಗುಡಿಬಂಡೆ ಪ್ರವಾಸೋದ್ಯಮ ಅಭಿವೃದ್ದಿಗೆ ವಿಶೇಷ ಅನುದಾನ ಮೀಸಲಿಡಲಿ ಎಂಬುದು ಗುಡಿಬಂಡೆ ಜನತೆಯ ಬಯಕೆಯಾಗಿದೆ.

Read more Articles on