ಸಂಡೂರು: ಇತಿಹಾಸದ ವಿದ್ಯಾರ್ಥಿಗಳು ಹಾಗೂ ಯುವ ಸಂಶೋಧಕರು ಹೊಸ ಆಲೋಚನಾ ಕ್ರಮಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಕೊಟ್ಟೂರಿನ ಪ್ರೊ.ಬಿ.ಸಿ. ಮಹಾಬಲೇಶ್ವರಪ್ಪ ಹೇಳಿದರು.
ಇಡೀ ಜಗತ್ತನ್ನು ಮುನ್ನಡೆಸುವುದು ಕೇವಲ ಭೌತಿಕ ಸಾಮರ್ಥ್ಯವಲ್ಲ. ಬದಲಿಗೆ ಪ್ರಭಾವಶಾಲಿ ಆಲೋಚನೆಗಳು, ಉದಾತ್ತ ವಿಚಾರಗಳು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ತಮ್ಮ ತ್ಯಾಗ ಬಲಿದಾನ ಮಾಡಿದ್ದಾರೆ. ಆದರೆ, ಅವರಲ್ಲಿ ಅನೇಕರನ್ನು ಇತಿಹಾಸದಲ್ಲಿ ಕಡೆಗಣಿಸಲಾಗಿದೆ. ಅವರ ಕೊಡುಗೆಗಳನ್ನು ನಾವು ಸದಾ ಸ್ಮರಿಸಬೇಕು. ಇತಿಹಾಸದ ಇಂದಿನ ಹೊಸ ಸಂಶೋಧಕರು ಅಂತಹ ಅಪ್ರತಿಮ ಹೋರಾಟಗಾರರ ಕೊಡುಗೆಗಳನ್ನು ಮುಂಚೂಣಿಗೆ ತಂದು ದಾಖಲಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಹ ಪ್ರಾಧ್ಯಾಪಕ ಡಾ.ಎಸ್.ಎಂ. ಶಶಿಧರ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಬಾರದು. ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಎಚ್. ಮಾತನಾಡಿ, ಇತಿಹಾಸದ ಪುಟಗಳಲ್ಲಿ ರಾಜ ಮಹಾರಾಜರ, ಸಾಮ್ರಾಜ್ಯಗಳ ಇತಿಹಾಸವನ್ನು ಅನೇಕರು ಬರೆದಿದ್ದಾರೆ. ಆದರೆ, ಸಮಾಜದಲ್ಲಿ ಶತಮಾನಗಳಿಂದ ತುಳಿತಕ್ಕೊಳಗಾದ, ಶೋಷಿತ ಹಾಗೂ ವಂಚಿತ ಸಮುದಾಯಗಳ ನೈಜ ಇತಿಹಾಸ ಇನ್ನು ದಾಖಲಾಗಬೇಕಾಗಿದೆ ಎಂದು ತಿಳಿಸಿದರು.