ರಾಣಿಬೆನ್ನೂರು: ಅಂಧ ಹಾಗೂ ಕಿವುಡ ಮಕ್ಕಳಿಗೆ ದೇವರು ವಿಶೇಷ ಕೌಶಲ್ಯ ನೀಡಿರುತ್ತಾನೆ. ಮಕ್ಕಳಲ್ಲಿ ಅದನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕಾರ್ಯ ಸಾಮಾನ್ಯ ಜನರಿಂದ ಆಗಬೇಕಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಬಿ. ಸಿದ್ದರಾಜು ಹೇಳಿದರು.
ಕಿವುಡ ಹಾಗೂ ಮೂಗ ಮಕ್ಕಳಿಗೆ ಸರಿಯಾದ ಜ್ಞಾನ ನೀಡಬೇಕು. ಅಂದಾಗ ಅವರು ಸಮಾಜದಲ್ಲಿ ಇತರರಂತೆ ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ. ಅವರಿಗೆ ಅನುಕಂಪದ ಬದಲು ಸೂಕ್ತ ಶಿಕ್ಷಣ ಒದಗಿಸಿದರೆ ಜೀವನದಲ್ಲಿ ದಾರಿದೀಪವಾಗಲಿದೆ. ಇದನ್ನು ಸಂಘ-ಸಂಸ್ಥೆಗಳು ಹಾಗೂ ಪ್ರಜ್ಞಾವಂತ ಜನತೆ ಮಾಡಬೇಕು ಎಂದರು.
ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಕೋರ್ಟ್ ವೃತ್ತ, ಪೋಸ್ಟ್ ವೃತ್ತ ಹಾಗೂ ಎಂ.ಜಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಎಚ್.ಆರ್. ಶಿವಕುಮಾರ, ವಸಂತಕುಮಾರ ಶೆಟ್ಟಿ, ರಮೇಶ ಮಡಿವಾಳರ, ನಿತ್ಯಾನಂದ ಕುಂದಾಪುರ, ಶೇಖಣ್ಣ ಹೊಸಗೌಡ್ರ, ಮಲ್ಲಣ್ಣ ಅಂಗಡಿ, ಚೋಳಪ್ಪ ಕಸವಾಳ, ಮೌನೇಶ ಬಡಗೇರ, ಆನಂದ ಹುಲ್ಮನಿ ಮತ್ತಿತರರು ಉಪಸ್ಥಿತರಿದ್ದರು.