ಶಿವಮೊಗ್ಗ: ಬೀದಿ ಬದಿ ವ್ಯಾಪಾರಿಗಳಿಗೆ ನಗರದ ವಿವಿಧೆಡೆಯಲ್ಲಿ ಇರುವ ಖಾಲಿ ಜಾಗಗಳನ್ನು ಗುರುತಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ವಿನೋಬನಗರದ ಶಿವಾಲಯ ಪಕ್ಕದಲ್ಲಿರುವ ಮಾರುಕಟ್ಟೆಯಲ್ಲಿ 73 ಮಳಿಗೆಳನ್ನು ಈ ಹಿಂದೆ ಮಂಜೂರು ಮಾಡಿದ್ದರೂ, ಅಲ್ಲಿ ಬರಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದು, ಕೂಡಲೇ ಅವರಿಂದ ಆ ಮಳಿಗೆಗಳನ್ನು ವಾಪಾಸು ಪಡೆದು ಅರ್ಹ ಪುಟ್ಪಾತ್ ವ್ಯಾಪಾರಿಗಳು ಮತ್ತು ತಿಂಡಿಗಾಡಿಗಳು, ಹಣ್ಣಿನ ಗಾಡಿಗಳಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಆಲ್ಕೋಳ ಸರ್ಕಲ್ನಲ್ಲಿರುವ ತಿಂಡಿಗಾಡಿಗಳನ್ನು ಆಲ್ಕೋಳ ಸರ್ಕಲ್ ಪಾರ್ಕಿನ ಹತ್ತಿರದ ಸ್ಥಳಗಳಲ್ಲಿ ಅವಕಾಶ ಮಾಡಿಕೊಡಬೇಕು. ಗೋಪಾಳದ ಹೈಟೆನ್ಷನ್ ವೈಯರ್ ಹಾದುಹೋಗಿರುವ ಕೆಳ ಭಾಗದಲ್ಲಿ 100 ಅಡಿ ರಸ್ತೆಯಲ್ಲಿರುವ ಜಾಗದಲ್ಲಿ 100 ರಿಂದ 150 ತಿಂಡಿಗಾಡಿಗಳಿಗೆ ಮತ್ತು ಪುಟ್ಪಾತ್ ವ್ಯಾಪಾರಕ್ಕೆ ಜಾಗ ನೀಡಬೇಕು. ನಗರದ ಗೋಪಾಳ ಸರ್ಕಲ್ ಪಕ್ಕ ಕೊನೆಯ ಬಸ್ ಸ್ಟಾಪ್ ಹತ್ತಿರ ಮಧ್ಯಭಾಗದಲ್ಲಿ 1 ಎಕರೆ ಖಾಲಿ ಜಮೀನು ಇದ್ದು, ಅಲ್ಲಿ ಕೂಡ 75 ತಿಂಡಿಗಾಡಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.ನಗರದ ದುರ್ಗಿಗುಡಿಯ ಎಲ್ಲಾ ಕನ್ಸರ್ವೆನ್ಸಿ ರಸ್ತೆಗಳು ಹಾಗೂ ಐಸಿಐಸಿಯ ಬ್ಯಾಂಕ್ನ ಕನ್ಸರ್ವೆನ್ಸಿ ರಸ್ತೆ, ಕುವೆಂಪು ರಸ್ತೆಯ ಕನ್ಸರ್ವೆನ್ಸಿ, ಸವಳಂಗ ರಸ್ತೆಯ ಕನ್ಸರ್ವೆನ್ಸಿ, ವಿನಾಯಕ ರಸ್ತೆಯ ಮುಂಭಾಗ ಬಿ.ಎಚ್.ರಸ್ತೆಯ ಮುಂಭಾಗದ ಕನ್ಸರ್ವೆನ್ಸಿ, ಸೀಗೆಹಟ್ಟಿ, ಓಟಿ ರಸ್ತೆ, ಕೃಷಿ ಇಲಾಖೆಯ ಕನ್ಸರ್ವೆನ್ಸಿ, ಬಿ.ಎಚ್.ರಸ್ತೆಯ ಚರ್ಚ್ ಎದುರು, ಮೀನಾಕ್ಷಿ ಭವನ ಹೋಟೆಲ್ ಪಕ್ಕದ ಸರ್ಕಾರಿ ಜಾಗ, ವಿದ್ಯಾನಗರ, ಜೈಮಾತಾ ಹೋಟೆಲ್ ಎದುರು, ಚೌಡಮ್ಮ ರಸ್ತೆ ಮತ್ತು ಇತರ ವ್ಯವಹಾರ ಸ್ಥಳಗಳ ಕನ್ಸರ್ವೆನ್ಸಿಗಳಲ್ಲಿ ಹಾಗೂ ನಗರದ ಮೆಗ್ಗಾನ್ ಆಸ್ಪತ್ರೆಯ ಕಾಂಪೌಂಡ್ ಪಕ್ಕದ ಜಾಗದಲ್ಲಿ ಪುಟ್ಪಾತ್ ವ್ಯಾಪಾರಿಗಳಿಗೆ ಅನುವು ಮಾಡಿಕೊಡಬೇಕು ಎಂದು ಕೋರಲಾಗಿದೆ.ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯದಂತೆ ಕ್ರಮ ಕೈಗೊಂಡು ಸಂತೆಗೆ ಮೀಸಲಿಟ್ಟಿರುವ ಕೆಎಸ್ಆರ್ಟಿಸಿ ಡಿಪೋ ಎದುರು ಡೈಲಿ ಮಾರ್ಕೆಟ್ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಬೇಕು. ಬ್ರೈಟ್ ಹೋಟೆಲ್ ಪಕ್ಕದಲ್ಲಿರುವ ಕನ್ಸರ್ವೆನ್ಸಿ ರಸ್ತೆ ವಿನಾಯಕ ಟಾಕೀಸ್ ಮುಂಭಾಗದ ಕನ್ಸರ್ವೆನ್ಸಿ ರಸ್ತೆಯನ್ನು ಅನಧಿಕೃತವಾಗಿ ಕೆಲವು ವ್ಯಕ್ತಿಗಳು ಬಾಡಿಗೆಗೆ ಕೊಟ್ಟು, ಬಾಡಿಗೆ ವಸೂಲಿ ಮಾಡುತ್ತಿದ್ದು, ಇದನ್ನು ನಿಲ್ಲಿಸಬೇಕು. ಸಸ್ಯಹಾರಿ ಪುಡ್ಕೋರ್ಟ್ನಲ್ಲಿ ಅಂಗಡಿಯನ್ನು ಪಡೆದ ಕೆಲವರು ಒಳಬಾಡಿಗೆ 20 ಸಾವಿರ ರು.ಗಳಿಗೆ ನೀಡಿದ್ದು, ಅವರ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ನಗರದ ಕೆಎಸ್ಅರ್ಟಿಸಿ ಬಸ್ ಸ್ಟ್ಯಾಂಡಿನಲ್ಲಿ ಸಿಸಿ ಕ್ಯಾಮೆರಾ ಕೆಟ್ಟುಹೋಗಿದ್ದು, ಕಳ್ಳತನ ಮತ್ತು ಅನೈತಿಕ ಚಟುವಟಿಕೆ ನಡೆಯುತ್ತಿದೆ. ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ. ಅಕ್ರಮ ಎಣ್ಣೆ ವ್ಯಾಪಾರ ಕೂಡ ನಡೆಯುತ್ತಿದೆ. ಖಾಸಗಿ ಬಸ್ಸ್ಟ್ಯಾಂಡ್ ಅಂಗಡಿ ಜಾಗಗಳು ಮತ್ತು ಖಾಲಿ ಜಾಗಗಳನ್ನು ಖಾಸಗಿಯವರಿಗೆ ಬಾಡಿಗೆ ಕೊಟ್ಟಿದ್ದು, ಮೆಗ್ಗಾನ್ ಆಸ್ಪತ್ರೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಎರಡು ಮೂರು ಕಡೆ ಅಕ್ರಮ ಎಣ್ಣೆ ದಂಧೆ ನಡೆಯುತ್ತಿದೆ. ನಗರದ ಹಲವು ಕಡೆ ಗಲೀಜು ನೀರಿನಲ್ಲಿ ಗೋಲುಗೊಪ್ಪ ಅಂಗಡಿ ಅಕ್ರಮವಾಗಿ ನಡೆಸುತ್ತಿದ್ದು, ಶಾಲಾ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಆದ್ದರಿಂದ ಇವುಗಳಿಗೆ ಅವಕಾಶ ಕೊಡಬಾರದು ಎಂದು ಮನವಿಯಲ್ಲಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ಎಸ್.ಬಿ.ಅಶೋಕ್ಕುಮಾರ್, ರಾಜ್ಯ ಉಪಾಧ್ಯಕ್ಷ ಆರ್.ಮಣಿಗೌಂಡರ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.