ರಾಮನಗರ: ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಮೈ ಮುಟ್ಟಿದರೆ ಹುಷಾರ್. ಪಶ್ಚಿಮ ಬಂಗಾಳ ರೀತಿಯಲ್ಲಿ ನಿಮ್ಮ ಸರ್ಕಾರವೂ ನಾಶವಾಗುತ್ತೆ. ಪ್ರಕರಣ ದಾಖಲಾಗಿದೆಯಂತೆ ರೈತರನ್ನು ಏನಾದರು ಅರೆಸ್ಟ್ ಮಾಡಿದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದರು
ರಾಮನಗರ: ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಮೈ ಮುಟ್ಟಿದರೆ ಹುಷಾರ್. ಪಶ್ಚಿಮ ಬಂಗಾಳ ರೀತಿಯಲ್ಲಿ ನಿಮ್ಮ ಸರ್ಕಾರವೂ ನಾಶವಾಗುತ್ತೆ. ಪ್ರಕರಣ ದಾಖಲಾಗಿದೆಯಂತೆ ರೈತರನ್ನು ಏನಾದರು ಅರೆಸ್ಟ್ ಮಾಡಿದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಿಡದಿ ಟೌನ್ಶಿಪ್ ಯೋಜನೆಗಾಗಿ ಮಂಡಲಹಳ್ಳಿಯಲ್ಲಿ ಸರ್ವೇ ಮಾಡುತ್ತಿದ್ದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಸಂಬಂಧ ಪ್ರಕರಣ ದಾಖಲಾದ ರೈತರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ , ಪೋಲೀಸರು ಏನಾದರು ರೈತರ ಮೈ ಮುಟ್ಟಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದರು.
ಜಿಬಿಡಿಎ ಅಧಿಕಾರಿಗಳು ಮತ್ತು ಪೊಲೀಸರು ಏಕಾಏಕಿ ಗ್ರಾಮಕ್ಕೆ ನುಗ್ಗಿ ದೌರ್ಜನ್ಯದಿಂದ ಸರ್ವೇ ಮಾಡಿದ್ದಾರೆ. ಸರ್ಕಾರ, ಪೊಲೀಸರ ಮೂಲಕ ರೈತ ಮಹಿಳೆಯರನ್ನು ತಳ್ಳಿಸಿದೆ. ಅಲ್ಲದೆ, ಜಾಮೀನು ಸಿಗದಂತಹ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಮಾಯಕ ರೈತರ ಮೇಲೆ ಮರ್ಡರ್ ಕೇಸ್ ಹಾಕಿ ಕೊಲೆಗಾರರನ್ನಾಗಿ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಸರ್ಕಾರ ಪೊಲೀಸರ ಬಲ ಬಳಸಿಕೊಂಡು ಜಂಟಿ ಸರ್ವೇ ಕಾರ್ಯ ಮಾಡಲು ಏಕೆ ಮುಂದಾಯಿತು. ರೈತರಿಗೆ ಮೊದಲೇ ಏಕೆ ನೋಟಿಸ್ ಕೊಡಲಿಲ್ಲ. ಜಮೀನು ಕಳೆದುಕೊಳ್ಳುವ ಭೀತಿಯಿಂದ ರೈತರು ರೊಚ್ಚಿಗೇಳುವುದು ಸಹಜ. ಇದು ಗೊತ್ತಿದ್ದೂ ಸರ್ಕಾರ, ಬಿಡದಿಯಲ್ಲಿ ಎಮರ್ಜೆನ್ಸಿ ನಿರ್ಮಾಣ ಮಾಡುವ ಉದ್ದೇಶದಿಂದಲೇ ಘಟನೆ ಸೃಷ್ಟಿಸಿದೆ ಎಂದು ಆರೋಪಿಸಿದರು.
ಬೋಗಸ್ ಸಮಿತಿ ರಚನೆ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಟೌನ್ ಶಿಪ್ ಯೋಜನೆ ಅನುಷ್ಠಾನದ ಬಗ್ಗೆ ರೈತರ ಅಭಿಪ್ರಾಯ ಹಾಗೂ ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಲು ಸಮಿತಿ ರಚನೆ ಮಾಡಿ, 2 - 3ತಿಂಗಳಲ್ಲಿ ವರದಿ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ. ಇದೊಂದು ಬೋಗಸ್ ಸಮಿತಿ. ರೈತರನ್ನು ಮಟ್ಟಹಾಕಲು, ಬ್ರೈನ್ ವಾಶ್ ಮಾಡಲು ತೆಗೆದುಕೊಂಡಿರುವ ಸಮಯಾವಕಾಶ. ಹಾಗಾಗಿ ಎಫ್ಐಆರ್ ದಾಖಲಾಗಿರುವ ರೈತರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದೇನೆ. ಡಿ.ಕೆ.ಶಿವಕುಮಾರ್ ಮಾತೆತ್ತಿದ್ದರೆ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾರೆ. ಇಲ್ಲಿರುವುದು ರೈತರ ಪ್ರಶ್ನೆ, ಮೊದಲು ರೈತರ ಬಗ್ಗೆ ಮಾತನಾಡಲಿ. ವಿಷಯ ಡೈವರ್ಟ್ ಮಾಡಲು ಕುಮಾರಸ್ವಾಮಿ ಹೆಸರು ಎಳೆ ತರುತ್ತಿದ್ದಾರೆ ಎಂದು ಟೀಕಿಸಿದರು.
ಸಿಎಂಗೆ ಧಮ್, ತಾಕತ್ತಿದ್ದರೆ ಸಾಬೀತು ಪಡಿಸಲಿ:
ಅಶೋಕ್ ಕಾಲದಲ್ಲೂ ಯೋಜನೆ ಆಗಿತ್ತೆಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮುಖ್ಯಮಂತ್ರಿಗಳಿಗೆ ಧಮ್, ತಾಕತ್ತು ಇದ್ದರೆ ಅದನ್ನು ಸಾಬೀತು ಮಾಡಲಿ. ನಾವು ಅಧಿಕಾರದಲ್ಲಿದ್ದಾಗ ರೈತರಿಗೆ ಒಂದೇ ಒಂದು ನೋಟೀಸ್ ಕೊಟ್ಟಿಲ್ಲ. ಒಂದಿಚೂ ಭೂಮಿ ಸ್ವಾಧೀನ ಮಾಡಿಲ್ಲ. ಎಲ್ಲಾ ಪ್ರಕ್ರಿಯೆಗಳು ಕಾಂಗ್ರೆಸ್ ಕಾಲದಲ್ಲಿಯೇ ಆಗಿವೆ. ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಟೌನ್ಶಿಪ್ ಯೋಜನೆಯನ್ನು ಆಂಧ್ರ ಕಂಟ್ರಾಕ್ಟರ್ಗೆ ಟೆಂಡರ್ ಕೊಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುತ್ತಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ. ಇದು ಕೇವಲ ಬಿಡದಿ ಮಾತ್ರವಲ್ಲ ರಾಜ್ಯದ ರೈತರ ಪ್ರಶ್ನೆಯಾಗಿದೆ. ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಹೋರಾಟ ಮಾಡುತ್ತೇವೆ. ವಿಧಾನಸಭೆ ಅಧಿವೇಶನದಲ್ಲಿಯೂ ಪ್ರಸ್ತಾಪಿಸುತ್ತೇವೆ. ಮುಂದಿನ ದಿನಗಳಲ್ಲಿ ರೈತರ ಜೊತೆ ಚರ್ಚಿಸಿ ಈ ಭಾಗದಲ್ಲಿಯೇ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಹೇಳಿದರು.
ಟೌನ್ ಶಿಪ್ ಯೋಜನೆ ವ್ಯಾಪ್ತಿಯಲ್ಲಿ 2725 ಎಕರೆ ಗೋಮಾಳ ಇತ್ತು. ಈಗ ಅದು 700 ಎಕರೆಗೆ ಬಂದಿದೆ. ಆನೇಕಲ್ ನಲ್ಲೂ ಸರ್ಕಾರ ಭೂ ಸ್ವಾಧೀನ ಮಾಡುತ್ತಿದೆ. ಗೋವಾ , ಪಂಜಾಬ್ ಸೇರಿ ಮೂರು ರಾಜ್ಯಗಳ ಚುನಾವಣೆ ಹತ್ತಿರದಲ್ಲಿದ್ದು, ಅಲ್ಲಿಗೆ ಹಣ ಸಂದಾಯ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೂಟಿಗೆ ಇಳಿದಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಜಿ ಮಾಗಡಿ ಮಂಡಲ ಅಧ್ಯಕ್ಷ ಪ್ರಸಾದ್ ಗೌಡ ಮತ್ತಿತರರು ಹಾಜರಿದ್ದರು.
ಕೋಟ್ ............
ಈವರೆಗೆ ರಾಜ್ಯದಲ್ಲಿ 25 ಮಂದಿ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ಯಾವ ಮುಖ್ಯಮಂತ್ರಿ ಕೂಡಾ ನನಗೆ ಪೊರಕೆ ತೆಗೆದುಕೊಂಡು ಹೊಡೆಯಿರಿ ಅಂದಿರಲಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿ ಪದವಿಯ ಘನತೆಗೆ ಅಗೌರವ ತೋರಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.