ತಾಯಿ ಪ್ರೀತಿ ಕಳೆದರೆ ಮತ್ತೆ ಗಳಿಸಲು ಅಸಾಧ್ಯ: ಡಾ.ಎಂ.ಜಿ.ಆರ್.ಅರಸ್

KannadaprabhaNewsNetwork | Published : Feb 26, 2024 1:35 AM

ಸಾರಾಂಶ

ಈ ಕೃತಿಯಲ್ಲಿ ಯಾವುದೇ ದ್ವೇಷದ ನುಡಿಗಳಲ್ಲಿ, ತಾಯಿಯನ್ನು ಇನ್ನಷ್ಟು ಪ್ರೀತಿಯಿಂದ ನೋಡಿಕೊಳ್ಳಬಹುದಾಗಿತ್ತು ಎಂಬ ಪಶ್ಚಾತ್ತಾಪ, ತಾಯಿಯ ಬಗ್ಗೆ ಹೆಮ್ಮೆ, ಸಂತಸದ ನುಡಿಗಳೂ ಇವೆ. 140 ಲೇಖಕರು ತಾಯಿಯ ಮಮತೆಯ ಒಡಲಾಟಗಳನ್ನು ಗ್ರಹಿಸಿದ್ದಾರೆ. ನೋವು ಸಂಕಟಗಳನ್ನು, ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದೊಂದು ಸಂಗ್ರಹಯೋಗ್ಯವಾದ ಕೃತಿಯಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿ ಹೆಣ್ಣು ಜನ್ಮ ನೀಡುವಾಗ ಅನುಭವಿಸುವ ಸಂಕಟ, ಸಂತಸ, ಮಗುವಿನ ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ತಳಮಳ ಹೊಂದಿರುತ್ತಾಳೆ. ಈ ಕೃತಿಗೆ ಮುನ್ನುಡಿ ಬರೆಯುವಾಗ ನಾನು ನನ್ನ ಜನ್ಮದಾತರ ನೆನೆದು ಭಾವುಕನಾಗಿದ್ದೆ. ಹೆತ್ತವರು ಕೃತಿ ಅಂತರಾಳದ ಒಳ ಧ್ವನಿ ಪ್ರತಿನಿಧಿಸುತ್ತದೆ ಎಂದು ಚುಟುಕು ಸಾಹಿತ್ಯ ಪರಿಷತ್ ಮೈಸೂರು ಕೇಂದ್ರ ಸಮಿತಿಯ ಪ್ರಧಾನ ಸಂಚಾಲಕ, ಸಂಸ್ಥಾಪಕ ಡಾ.ಎಂ.ಜಿ.ಆರ್.ಅರಸ್ ಹೇಳಿದರು.

ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಗುರುಭವನದಲ್ಲಿ ಭಾನುವಾರ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ವಚನ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ, ಸ್ಪೂರ್ತಿ ಪ್ರಕಾಶನ ತೆಲಿಗಿ, ನಿರ್ವರ್ಣ ಆರ್ಟ್ ಗ್ಯಾಲರಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃತಿಗಳ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ, ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಏನನ್ನಾದರೂ ಸಾಧನೆ ಮಾಡಿ, ಎಷ್ಟೇ ಸಂಪತ್ತುಗಳಿಸಿರಿ. ಆದರೆ ತಾಯಿಯ ಪ್ರೀತಿ ಒಮ್ಮೆ ಕಳೆದುಕೊಂಡರೆ ಮತ್ತೆ ಗಳಿಸಲು ಸಾಧ್ಯವಿಲ್ಲ. ಎಲ್ಲಿ ತಾಯಿ ಸಂತುಷ್ಟಭರಿತಳಾಗಿರುತ್ತಾಳೋ ಆ ಸಮಾಜ, ದೇಶವೂ ಸಂತುಷ್ಟವಾಗಿರುತ್ತದೆ ಎಂದರು.

ಈ ಕೃತಿಯಲ್ಲಿ ಯಾವುದೇ ದ್ವೇಷದ ನುಡಿಗಳಲ್ಲಿ, ತಾಯಿಯನ್ನು ಇನ್ನಷ್ಟು ಪ್ರೀತಿಯಿಂದ ನೋಡಿಕೊಳ್ಳಬಹುದಾಗಿತ್ತು ಎಂಬ ಪಶ್ಚಾತ್ತಾಪ, ತಾಯಿಯ ಬಗ್ಗೆ ಹೆಮ್ಮೆ, ಸಂತಸದ ನುಡಿಗಳೂ ಇವೆ. 140 ಲೇಖಕರು ತಾಯಿಯ ಮಮತೆಯ ಒಡಲಾಟಗಳನ್ನು ಗ್ರಹಿಸಿದ್ದಾರೆ. ನೋವು ಸಂಕಟಗಳನ್ನು, ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದೊಂದು ಸಂಗ್ರಹಯೋಗ್ಯವಾದ ಕೃತಿಯಾಗಿದೆ ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಾ ಹಾಲಪ್ಪಗೌಡರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಹೆತ್ತವರು ಎಂದ ಕೂಡಲೇ ಹೃದಯ ತುಂಬಿ ಬರುತ್ತದೆ ಕೃತಿ ಓದುವಾಗ ನನಗೂ ನನ್ನ ತಾಯಿಯ ನೆನಪಾಯಿತು. ನನಗೆ ಸಾಹಿತ್ಯದ ಮೇಲೆ ಒಲವು ಮೂಡಲು ತಾಯಿಯೇ ಕಾರಣ ಎಂದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್.ರಾಜಶೇಖರ್ ಗುಂಡಗಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭದ್ರಾವತಿಯ ಎಮೆರಿಟಿಸ್ ಪ್ರಾಧ್ಯಾಪಕಿ ಡಾ.ವಿಜಯಾದೇವಿ, ಕನ್ನಡ ಜಾಗೃತಿ ಕೇಂದ್ರದ ಅಧ್ಯಕ್ಷ ಎಸ್.ಮಲ್ಲಿಕಾರ್ಜುನಪ್ಪ, ಚುಸಾಪ ಗೌರವ ಕಾರ್ಯದರ್ಶಿ ಕೆಎಸ್.ವೀರಭದ್ರಪ್ಪ ತೆಲಿಗಿ, ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಎಂ.ಎಸ್.ಮಲ್ಲಮ್ಮ ನಾಗರಾಜ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಚುಸಾಪ ಗೌರವಾಧ್ಯಕ್ಷ ಶಿವಯೋಗಿ ಹಿರೇಮಠ್, ಸ್ಫೂರ್ತಿ ಪ್ರಕಾಶನ ತೆಲಿಗಿ ಅಧ್ಯಕ್ಷ ಎಂ.ಬಸವರಾಜ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಹರಿಹರದ ಲಲಿತಮ್ಮ ಚಂದ್ರಶೇಖರ, ದಾವಣಗೆರೆಯ ಜಯಮ್ಮ ನೀಲಗುಂದ, ಸಾಸ್ವಿಹಳ್ಳಿಯ ಕೆ.ಪಿ. ದೇವೇಂದ್ರಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ಡಿ.ವಿ.ಬಡಿಗೇರ್, ಶಾಂತಯ್ಯ ಪರಡಿಮಠ, ಚಂದ್ರಶೇಖರ ಸಂಗ, ರಾಘವೇಂದ್ರ ನಾಯಕ, ಅತಿಕ್ ವುಲ್ಲಾ, ಆರ್.ವೈ.ಕೀರ್ತನಾ, ಪ್ರದೀಪ್, ಹರಜತ್ ಅಲಿ, ಮಮತಾ, ರಿಯಾಜ್ ಅಹಮದ್, ಡಾ.ಸಂತೋಷ್ ಕುಲಕರ್ಣಿ, ಪ್ರವೀಣ್ ಕುಮಾರ್ ಅವರ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ರೇವಣಸಿದ್ದಪ್ಪ, ಸೌಮ್ಯ ಸತೀಶ್ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಪ್ರಕಾಶ ಬೂಸ್ನೂರು ಸ್ವಾಗತಿಸಿದರು. ಸುನಿತಾ ಪ್ರಕಾಶ್, ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ಸತ್ಯಭಾಮಾ ಮಂಜುನಾಥ ವಂದಿಸಿದರು.

Share this article