ಕನ್ನಡಪ್ರಭ ವಾರ್ತೆ ಬಳ್ಳಾರಿ
ಮಕ್ಕಳಿಗೆ ಸಂಸ್ಕಾರ ನೀಡದೇ ಹೋದರೆ ತಂದೆ-ತಾಯಿಗೆ ವೃದ್ಧಾಶ್ರಮವೇ ಗತಿಯಾಗುತ್ತದೆ ಎಂದು ಶ್ರೀಧರಗಡ್ಡೆಯ ಕೊಟ್ಟೂರುಸ್ವಾಮಿ ಮಠದ ಮರಿಕೊಟ್ಟೂರು ಸ್ವಾಮಿಗಳು ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬಳ್ಳಾರಿ ಜಿಲ್ಲಾ ಘಟಕ ನಗರದ ಹೊರ ವಲಯದ ಅಲ್ಲೀಪುರ ಮಹಾದೇವತಾತ ಮಠದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕೌಟುಂಬಿಕ ಸಂಬಂಧಗಳ ಮಹತ್ವ ಕುರಿತು ತಿಳಿಸಿಕೊಡಬೇಕು. ಗುರುಹಿರಿಯರಿಗೆ ಗೌರವ ನೀಡುವುದು, ಕುಟುಂಬದ ಜೊತೆ ಬೆರೆಯುವುದು ರೂಢಿ ಮಾಡಿಸಬೇಕು. ಇದರಿಂದ ಮಕ್ಕಳಲ್ಲಿ ಮನೆಯಲ್ಲಿಯೇ ಸಂಸ್ಕಾರ ಬೆಳೆಯುತ್ತದೆ. ಸಮಾಜಮುಖಿ ಸೇವೆಯಲ್ಲೂ ತೊಡಗಿಸಿಕೊಳ್ಳಲು ಅವಕಾಶವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಭದ್ರಯ್ಯ ಸಮುದಾಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ವೀರಶೈವ ಲಿಂಗಾಯತ ನೌಕರರ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರಯ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಆರ್.ಎಚ್.ಯಂ.ಚನ್ನಬಸವಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.
ನಂದಿಪುರದ ಡಾ. ಮಹೇಶ್ವರ ಸ್ವಾಮಿ, ಗರಗ ನಾಗಲಾಪುರದ ಒಪ್ಪತ್ತೇಶ್ವರಸ್ವಾಮಿ, ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಪತಿ ಡಾ. ಯಶ್ವಂತ ಭೂಪಾಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಜ್ಞಾನಾಮೃತ ಪದವಿಪೂರ್ವ ಕಾಲೇಜಿನ ಮುಖ್ಯಸ್ಥ ಎಂ.ಜಿ. ಗೌಡ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು.ಶ್ರೀ ಸದ್ಗುರು ಮಹಾದೇವತಾತನವರ ಟ್ರಸ್ಟ ಕಮಿಟಿ ಸದಸ್ಯ ಎಸ್.ಜಗದೀಶ, ಉಪನ್ಯಾಸಕ ಡಾ. ಎಸ್.ಮಂಜುನಾಥ ಅವರು ಎಸ್ಸೆಸ್ಸೆಲ್ಸಿ-ಪಿಯುಸಿ ನಂತರ ಮುಂದೇನು? ವಿಷಯ ಕುರಿತು ಉಪನ್ಯಾಸ ನೀಡಿದರು. ವೀರಶೈವ ಸಮಾಜದ ಮುಖಂಡರಾದ ಕೆ.ಎಂ. ಮಹೇಶ್ವರ ಸ್ವಾಮಿ, ವಕೀಲ ರಾಜಶೇಖರ ಮುಲಾಲಿ ಉಪಸ್ಥಿತರಿದ್ದರು. ಶಿಕ್ಷಕ ದೊಡ್ಡಬಸಪ್ಪ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.