ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಕಚೇರಿಗೆ ಮುತ್ತಿಗೆ

KannadaprabhaNewsNetwork | Published : Apr 17, 2025 12:51 AM

ಸಾರಾಂಶ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ವರ್ತನೆ ಖಂಡಿಸಿ ಬುಧವಾರ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

- ಹರಿಹರದಲ್ಲಿ ರೈತ ಸಂಘ, ಹಸಿರು ಸೇನೆ ಪ್ರತಿಭಟನೆಯಲ್ಲಿ ಹಾಳೂರು ನಾಗರಾಜ್‌ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ಹರಿಹರ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ವರ್ತನೆ ಖಂಡಿಸಿ ಬುಧವಾರ ತಾಲೂಕು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ನಗರದ ಶಿವಮೊಗ್ಗ ರಸ್ತೆಯ ಪಕ್ಕಿರಸ್ವಾಮಿ ಮಠದಿಂದ ಆರಂಭವಾದ ಮೆರವಣಿಗೆಯು ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಮುಖ್ಯ ರಸ್ತೆ ಮೂಲಕ ಗಾಂಧಿ ವೃತ್ತಕ್ಕೆ ಆಗಮಿಸಿತು. ಕೆಲ ನಿಮಿಷ ಮಾನವ ಸರಪಳಿ ನಿರ್ಮಿಸಿ, ಆಕ್ರೋಶ ವ್ಯಕ್ತಪಡಿಸಿದ ರೈತರು, ತಾಲೂಕು ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಧ್ಯಕ್ಷ ಹಾಳೂರು ನಾಗರಾಜ್ ಮಾತನಾಡಿ, ಹರಿಹರ ತಾಲೂಕಿನಲ್ಲಿ ಸರ್ವೆ ಇಲಾಖೆ ರೈತರ ಸಮಸ್ಯೆಗಳನ್ನು ಇತ್ಯರ್ಥ ಮಾಡುವಲ್ಲಿ ಅಸಮರ್ಥವಾಗಿದೆ. ಗ್ರಾ.ಪಂ. ಪಿಡಿಒಗಳು, ಕಾರ್ಯದರ್ಶಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹಣ ನೀಡದಿದ್ದರೆ ಇ-ಸ್ವತ್ತನ್ನು ಸೇವೆ ನೀಡುತ್ತಿಲ್ಲ. ಗ್ರಾಮ ಸಭೆಗಳನ್ನು ಕರೆಯಬೇಕು. ಭತ್ತ, ರಾಗಿ, ಮೆಕ್ಕೆಜೋಳಕ್ಕೆ ಕೂಡಲೇ ಸರ್ಕಾರ ಮುಂಗಾರು, ಹಿಂಗಾರು ಬೆಳೆಯನ್ನದೇ, ವೈಜ್ಞಾನಿಕ ಬೆಲೆಯಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕನಿಷ್ಠ ₹೩,೫೦೦ ದಿಂದ ಗರಿಷ್ಠ ₹೪,೦೦೦ ಬೆಲೆ ನೀಡಬೇಕೆಂದು ಒತ್ತಾಯಿಸಿದರು.

ಭದ್ರಾ ಅಣೆಕಟ್ಟಿನಲ್ಲಿ ಬೇಸಿಗೆ ಹಂಗಾಮಿಗೆ ಸಾಕಷ್ಟು ನೀರು ಸಂಗ್ರಹವಿದೆ. ಕೊನೆ ಭಾಗದ ಜಮೀನಿಗೆ ನೀರು ಕೊಡುವಲ್ಲಿ ನೀರಾವರಿ ಇಲಾಖೆ ವಿಫಲವಾಗಿದೆ. ರೈತರಿಗೆ ನೀರು ಕೊಡದಿರುವ ಜಮೀನುಗಳನ್ನು ಸರ್ವೆ ಮಾಡಿ, ಆ ರೈತರಿಗೆ ಪರಿಹಾರ ಒದಗಿಸಿಕೊಡಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಮೈಕ್ರೋ ಫೈನಾನ್ಸ್‌ಗಳ ದಬ್ಬಾಳಿಕೆ ತಪ್ಪಿಲ್ಲ. ಕೂಡಲೇ ಅಂತ ಸಂಸ್ಥೆಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಸರ್ವೆ ಇಲಾಖೆಯ ಎಡಿಎಲ್‌ಆರ್ ನಾಗಭೂಷಣ ಮಾತನಾಡಿ, ಮೇ ೫ರಂದು ರೈತ ಮುಖಂಡರ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು. ತಾಪಂ ಇಒ ಸುಮಲತಾ ಅವರು ಪಿಡಿಒಗಳ ವಿರುದ್ಧದ ಆರೋಪಗಳ ಬಗ್ಗೆ ಲಿಖಿತ ರೂಪದಲ್ಲಿ ದೂರನ್ನು ನೀಡುವಂತೆ ಹೇಳಿದರು.

ತಹಸೀಲ್ದಾರ್ ಕೆ.ಎಂ.ಗುರು ಬಸವರಾಜ್ ರೈತರ ಮನವಿ ಸ್ವೀಕರಿಸಿ, ಆದ್ಯತೆ ಮೇರೆಗೆ ರೈತರ ಸಮಸ್ಯೆಗಳನ್ನು ಬಗೆಹರಿಸಲು ಮೇ ೫ರಂದು ಎಲ್ಲ ಅಧಿಕಾರಿಗಳ ಸಮ್ಮುಖ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಹಲಸಬಾಳು ಬಸವರಾಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಬಿ. ನಂದೀಶ್ ನಂದಿತಾವರೆ, ಮುಖಂಡರಾದ ಪರಮೇಶ್ವರಪ್ಪ ನಂದಿತಾವರೆ, ರಾಘವೇಂದ್ರ, ಪರಮೇಶ್ವರಪ್ಪ ಕೆಂಚನಹಳ್ಳಿ, ಪರಮೇಶ್ವರಪ್ಪ ಭಾನುವಳ್ಳಿ, ರಂಗಣ್ಣ ಹಾಲಿವಾಣ, ಗದಿಗೆಪ್ಪ ಗೋವಿನಹಾಳ್, ಕೆ.ವಿ.ರುದ್ರಮುನಿ, ಪರಶುರಾಮಪ್ಪ ರಾಜನಹಳ್ಳಿ, ಕೆ.ಜಿ.ನಾಗಪ್ಪ, ಕೆ.ಎಚ್.ಮಾಲತೇಶ್ ಹಾಗೂ ಇತರರಿದ್ದರು.

- - -

-16ಎಚ್‍ಆರ್‍ಆರ್1-2:

ಹರಿಹರದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಾಲೂಕು ಕಚೇರಿಗೆ ಬಳಿ ಪ್ರತಿಭಟನೆ ನಡೆಸಲಾಯಿತು.

Share this article