ಆಹಾರ ಸರಿಯಾಗಿ ವಿತರಿಸದಿದ್ರೆ ಉದ್ಯೋಗ ಕಳೆದುಕೊಳ್ತಿರಿ

KannadaprabhaNewsNetwork | Published : Oct 10, 2024 2:20 AM

ಸಾರಾಂಶ

ಎಲ್ಲ ಅಂಗನವಾಡಿಗಳಲ್ಲಿ ಸರ್ಕಾರ ನೀಡುವ ಆಹಾರ ಧಾನ್ಯಗಳನ್ನು ಸರಿಯಾಗಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಉದ್ಯೋಗ ಕಳೆದುಕೊಳ್ಳಬೇಕಾಗುವುದು ಎಂದು ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಎಲ್ಲ ಅಂಗನವಾಡಿಗಳಲ್ಲಿ ಸರ್ಕಾರ ನೀಡುವ ಆಹಾರ ಧಾನ್ಯಗಳನ್ನು ಸರಿಯಾಗಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಉದ್ಯೋಗ ಕಳೆದುಕೊಳ್ಳಬೇಕಾಗುವುದು ಎಂದು ಪುರಸಭಾ ಅಧ್ಯಕ್ಷ ಯಲ್ಲನಗೌಡ ಪಾಟೀಲ ಎಚ್ಚರಿಕೆ ನೀಡಿದರು.

ಪುರಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ಕೊರತೆ ಇರುವ ಸಹಾಯಕಿಯರ ನೇಮಕಾತಿಗೂ ಭರವಸೆ ನೀಡಿದರು. ಅಂಗನವಾಡಿಗಳು ನೀರು, ವಿದ್ಯುತ್ ಸಂಪರ್ಕವಿಲ್ಲದೆ ಕೆಲವು ಸ್ವಂತ ಕಟ್ಟಡ, ಕೆಲವು ಬಾಡಿಗೆ ಕಟ್ಟಡಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ಶಿಥಿಲಗೊಂಡು ಮಳೆಯಿಂದ ಸೋರುತ್ತಿವೆ. ಹೀಗಾಗಿ ಆವರಣದ ತುಂಬಾ ನೀರು ನಿಂತು ಗಲೀಜಾಗುತ್ತಿದೆ. ಹುಳುಗಳ ಕಾಟವೂ ಇದೆ. ಇವುಗಳಿಂದ ಮುಕ್ತಿ ದೊರೆಯಬೇಕು ಎಂದು ಸಭೆಯಲ್ಲಿ ಕಾರ್ಯಕರ್ತೆಯರು ತಮ್ಮ ಅಳಲನ್ನು ತೋಡಿಕೊಂಡರು.ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಸ್ವಂತ ಕಟ್ಟಡಗಳು ಇಲ್ಲದಿರುವ ಕಡೆಗಳಲ್ಲಿ ಪುರಸಭೆಯ ಜಾಗಗಳನ್ನು ಪರಿಶೋಧಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಸಿಡಿಪಿಒ ಗಮನಕ್ಕೆ ತರಲಾಗುವುದು. ಅಂಗನವಾಡಿಗಳಿಗೆ ಪುರಸಭೆಯಿಂದ ಮೂಲಭೂತ ಸೌಲಭ್ಯಗಳಾದ ನೀರು, ವಿದ್ಯುತ್ ಸಂಪರ್ಕವನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.ಸಭೆಯಲ್ಲಿ ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲರಜಾಕ ಭಾಗವಾನ, ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮತ್ತು ಸಂಯೋಜನಾಧಿಕಾರಿ ಸಿ ಎಸ್. ಮಠಪತಿ ಇದ್ದರು. ಪುರಸಭೆ ವ್ಯಾಪ್ತಿಯಲ್ಲಿ ಬರುವ 23 ವಾರ್ಡ್‌ಗಳ ಪೈಕಿ 40 ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.ಪಟ್ಟಣದ ಅಂಗನವಾಡಿಗಳಿಂದ ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಹಿಂದೆ ನೀವು ಏನು ಮಾಡಿದ್ದೀರಿ ನಾನು ನೋಡುವುದಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಏನಾದರೂ ಗೋಲ್ಮಾಲ್ ನಡೆದರೆ ತಾವು ನೇರವಾಗಿ ಅಮಾನತುಗೊಳ್ಳುತ್ತೀರಿ.

- ಯಲ್ಲನಗೌಡ ಪಾಟೀಲ್, ಪುರಸಭಾಧ್ಯಕ್ಷ.

ಹಲವಾರು ಕಡೆ ಅಂಗನವಾಡಿ ಕಟ್ಟಡಗಳು ದುರಸ್ತಿ ಮತ್ತು ಮೂಲ ಸೌಲಭ್ಯಗಳಿಗಾಗಿ ಕಾಯುತ್ತಿವೆ. ಸ್ಥಳೀಯ ಪುರಸಭೆ ಅಧ್ಯಕ್ಷರು ಮತ್ತು ನಾವು ಸೇರಿ ಎಲ್ಲೆಲ್ಲಿ ಕುಂದು ಕೊರತೆಗಳಿವೆ ಎಂಬುವುದನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಪುರಸಭೆ ತನ್ನ ಸ್ವಂತ ಜಾಕ ಚಕ ಬಂದಿ ಉತಾರ ಒದಗಿಸಿದಲ್ಲಿ ಶೀಘ್ರದಲ್ಲಿಯೇ ಅಂಗನವಾಡಿ ನೂತನ ಕಟ್ಟಡಗಳ ಮರು ನಿರ್ಮಾಣ ಸಹ ಮಾಡುತ್ತೇವೆ.

- ಕಾಶಿಬಾಯಿ ಕೋರೆಗೋಳ, ಸಿಡಿಪಿಒ.

Share this article