ಭಾರತೀಯ ಸಂಸ್ಕೃತಿ ನಾಟ್ಯ ಕಲೆ ರಕ್ಷಿಸಿದರೆ ಕಲಾವಿದರ ಉಳಿವು

KannadaprabhaNewsNetwork | Published : Dec 18, 2024 12:48 AM

ಸಾರಾಂಶ

ಚಿತ್ರದುರ್ಗ: ಮೊಬೈಲ್, ಟಿವಿ ಹಾವಳಿಗಳ ನಡುವೆ ಭಾರತೀಯ ಸಂಸ್ಕೃತಿ ನಾಟ್ಯ ಕಲೆಯನ್ನು ರಕ್ಷಿಸಿದರೆ ಮಾತ್ರ ಕಲಾವಿದರು ಉಳಿಯುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಚಿತ್ರದುರ್ಗ: ಮೊಬೈಲ್, ಟಿವಿ ಹಾವಳಿಗಳ ನಡುವೆ ಭಾರತೀಯ ಸಂಸ್ಕೃತಿ ನಾಟ್ಯ ಕಲೆಯನ್ನು ರಕ್ಷಿಸಿದರೆ ಮಾತ್ರ ಕಲಾವಿದರು ಉಳಿಯುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾ ಕೇಂದ್ರದ ರಜತ ಮಹೋತ್ಸವದ ನಾಟ್ಯ ರಂಜನಿ ನೃತ್ಯ ಹಬ್ಬ-2024 ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ನಾಟ್ಯಗಳು ನಶಿಸಿ ಹೋಗುತ್ತಿರುವ ಇಂದಿನ ಆಧುನಿಕ ಕಾಲದಲ್ಲಿ ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರ ಕಳೆದ 25 ವರ್ಷಗಳಿಂದಲೂ ಕಲೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು. ಕಲೆ ಸಂಸ್ಕೃತಿ ಉಳಿಸಲು ಸರ್ಕಾರದ ವತಿಯಿಂದ ಪ್ರೋತ್ಸಾಹವಿರುತ್ತದೆ. ಎಲ್ಲಿಯಾದರೂ ಸಿಎ ಸೈಟ್‍ಗಳಿದ್ದರೆ ಮಕ್ಕಳ ತರಬೇತಿಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ, ಕೋಟೆ ನಾಡು ಚಿತ್ರದುರ್ಗದಲ್ಲಿ ರಾಜರು ಕೇವಲ ಆಳ್ವಿಕೆ ನಡೆಸಿರುವುದಷ್ಟೆ ಅಲ್ಲ. ಕಲೆ, ಸಾಹಿತ್ಯ, ನಾಟ್ಯ, ಸಂಸ್ಕೃತಿಗೂ ಪ್ರೋತ್ಸಹಿಸಿದ್ದರು. ನಾಟ್ಯ ರಂಜನಿ ಕಲಾ ಕೇಂದ್ರದ ಕಿರಣ್‍ರವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಅಮೋಘವಾದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದಿರುವ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ. ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಆಯುಕ್ತೆ ಎಲ್.ಸವಿತಾ ಶಿವಕುಮಾರ್ ಮಾತನಾಡಿ, ಪ್ರಸ್ತುತ ಕಲಾವಿದರ ಸ್ಥಿತಿ ಶೋಚನೀಯವಾಗಿದೆ. ಕಲೆ ಮತ್ತು ಕಲಾವಿದರು ಉಳಿಯಬೇಕಾಗಿರುವುದರಿಂದ ಸರ್ಕಾರ ಎಲ್ಲಾ ರೀತಿಯ ನೆರವು ನೀಡಬೇಕೆಂದು ಮನವಿ ಮಾಡಿದರು.

ಇಬ್ಬರು ಮೃದಂಗ ಬಡ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದ ನಾಟ್ಯ ರಂಜನಿ ನೃತ್ಯ ಕಲಾ ಕೇಂದ್ರದ ಜಿ.ಕಿರಣ್, ಕಲಾವಿದರ ಬದುಕು ಶೋಚನೀಯವಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ. ಬಡ ಕಲಾವಿದರು ವೃದ್ಧಾಪ್ಯ ಕಾಲದಲ್ಲಿ ನೆಮ್ಮದಿಯಾಗಿ ಬದುಕಬೇಕಾದರೆ ಸರ್ಕಾರ ಸೌಲಭ್ಯಗಳನ್ನು ನೀಡಬೇಕೆಂದು ವಿನಂತಿಸಿದರು.ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿದರು.

ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ಕ್ರಿಯೇಟಿವ್ ಸ್ಟುಡಿಯೋ ಚಿತ್ರಕಲಾವಿದ ಟಿ.ಎಂ.ವೀರೇಶ್ ವೇದಿಕೆಯಲ್ಲಿದ್ದರು. ಶಿವನ ಸಪ್ತ ತಾಂಡವಗಳ ನೃತ್ಯ ರೂಪಕ ನವಶಕ್ತಿ ವೈಭವ ನಾಟ್ಯಗಳು ಪ್ರದರ್ಶನಗೊಂಡವು.

Share this article