ಕನ್ನಡಪ್ರಭ ವಾರ್ತೆ ತಿಪಟೂರು ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಯಾವಾಗಲೂ ಕರ್ನಾಟಕದ ನೀರಾವರಿ, ಕೃಷಿ ಅಭಿವೃದ್ದಿ ಸೇರಿದಂತೆ ಎಲ್ಲದಕ್ಕೂ ವಿರೋಧಿಯಾಗಿ ನಡೆದುಕೊಂಡು ಬರುತ್ತಿರುವ ಸರ್ಕಾರವಾಗಿದ್ದು, ಮತ್ತೊಮ್ಮೆ ಮೋದಿಗೆ ಅಧಿಕಾರ ಸಿಕ್ಕಿದರೆ ಕರ್ನಾಟಕದ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ನಲ್ಲಿ ತಿಪಟೂರು, ತುರುವೇಕೆರೆ, ಗುಬ್ಬಿ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರವಾಗಿ ಭಾನುವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ರಾಜ್ಯದಿಂದ ೨೫ ಬಿಜೆಪಿಯಿಂದ ಸಂಸದರು ಆಯ್ಕೆಯಾಗಿ ಸಂಸತ್ಗೆ ಹೋಗಿದ್ದರೂ ೫ ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅಭಿವೃದ್ಧಿ, ನೀರಾವರಿ, ಬರ ಸೇರಿದಂತೆ ಯಾವುದೇ ಯೋಜನೆಗಳಿಗೆ ಅನುದಾನ ನೀಡುವಂತೆ ಸಂಸತ್ನಲ್ಲಿ ಒಬ್ಬರೂ ಪ್ರಸ್ತಾಪಿಸಲಿಲ್ಲ. ಈ ಸಂಸದರೆಲ್ಲ ಮೋದಿ ಕಂಡರೆ ಗಡಗಡ ನಡುಗುತ್ತ ಪಕ್ಕಕ್ಕೆ ಸರಿಯುತ್ತಿದ್ದರು. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ, ಕರ್ನಾಟಕ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ ಹಣವನ್ನೂ ನೀಡದೆ ವಂಚಿಸಿದ್ದಾರೆ. ಬರದಂತ ಪ್ರಮುಖ ಸಮಸ್ಯೆಗೂ ನಯಾಪೈಸೆ ಹಣ ನೀಡಿಲ್ಲದ ಇವರಿಗೆ ಯಾವುದೇ ಕಾರಣಕ್ಕೂ ಮತ ನೀಡಕೂಡದು ಎಂದರು.ನರೇಂದ್ರ ಮೋದಿ ಸರ್ಕಾರ ೨ಬಾರಿ ಅಧಿಕಾರಕ್ಕೆ ಬರುವಾಗಲೂ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಪ್ರತಿಯೊ ಬ್ಬರ ಖಾತೆಗೂ ೧೫ ಲಕ್ಷ ಹಣ ಹಾಕುತ್ತೇವೆಂದು ಹಸಿ ಸುಳ್ಳು ಹೇಳಿದ್ದು ಬಿಟ್ಟರೆ ೧ ರೂಪಾಯಿ ಸಹ ಹಾಕಲಿಲ್ಲ. ೨ ಕೋಟಿ ಉದ್ಯೋಗ ನೀಡುತ್ತೇವೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಸುಳ್ಳು ಹೇಳಿ ಮತ ಪಡೆದು ಅಧಿಕಾರ ಅನುಭವಿಸಿ ಬಡವರನ್ನು ಬಡವರನ್ನಾಗಿಸುತ್ತಿದ್ದಾರೆ.ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿಸಿದ್ದೇ ಅವರ ೧೦ ವರ್ಷಗಳ ಬಹುದೊಡ್ಡ ಸಾಧನೆಯಾಗಿದೆ. ಈ ಬಾರಿ ಚುನಾವಣೆಗೆ ನಮ್ಮ ಗ್ಯಾರಂಟಿ ಪದ ಕದ್ದು ಇದು ನಮ್ಮ ಮೋದಿ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದು, ಬಿಜೆಪಿಯವರ ಮನೆ ದೇವರೇ ಸುಳ್ಳು. ಅವರ ಯಾವುದೇ ಮಾತುಗಳು, ಭರವಸೆಗಳು ಮತ್ತು ಗ್ಯಾರಂಟಿಗಳನ್ನು ನಂಬಕೂಡದು ಹಾಗೂ ನಮ್ಮ ಕಾರ್ಯಕರ್ತರು ಮನೆಮನೆಗೆ ಹೋಗಿ ಇದನ್ನು ಹೇಳಿ ಕಾಂಗ್ರೆಸ್ಗೆ ಮತ ಹಾಕಿಸಬೇಕೆಂದರು.ಇಲ್ಲಿನ ಬಿಜೆಪಿ ಅಭ್ಯರ್ಥಿ ಸೋಮಣ್ಣ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಹಾಗೂ ಶಾಸಕ ಪುಟ್ಟರಂಗ ಶೆಟ್ಟಿ ವಿರುದ್ಧ ನಿಂತು ಬಹಳ ಮತಗಳ ಅಂತರದಿಂದ ಸೋತು ವಾಪಸ್ ಬಂದು ಈಗ ತುಮಕೂರಿನಿಂದ ಸ್ಪರ್ಧಿಸಿದ್ದಾರೆ. ಕಳೆದ ಬಾರಿಯ ಬಿಜೆಪಿ ಸರ್ಕಾರ ಸಾಕಷ್ಟು ಲೂಟಿ ಮಾಡಿದ್ದ ಸರ್ಕಾರವಾಗಿದ್ದು, ಇದರ ಪಾಲುದಾರರಲ್ಲಿ ಈ ಸೋಮಣ್ಣನು ಒಬ್ಬ. ಅವನ ಬಳಿ ಸಾಕಷ್ಟ ಹಣವಿದ್ದು ನನ್ನ ವಿರುದ್ಧವರೂ ೪೦ರಿಂದ ೫೦ಕೋಟಿ ಖರ್ಚು ಮಾಡಿದ್ದ. ಆದರೂ ಇನ್ನೂ ಅವನ ಹತ್ತಿರ ಲೂಟಿ ಹಣವಿರುವುದರಿಂದ ಅವನನ್ನು ಕರೆದುಕೊಂಡು ಬಂದು ಇಲ್ಲಿ ನಿಲ್ಲಿಸಿದ್ದಾರೆ.
ಕಳೆದ ಬಾರಿ ಇಲ್ಲಿ ಎಂಪಿ ಆಗಿದ್ದ ಬಸವರಾಜ ಒಂದು ದಿನವೂ ಈ ಭಾಗದ ಹಾಗೂ ರಾಜ್ಯ ಪರವಾಗಿ ಒಂದು ದಿನವೂ ಸಂಸತ್ ನಲ್ಲಿ ಮಾತನಾಡಲಿಲ್ಲ. ಯಾವುದೇ ಹಳ್ಳಿಗೂ ಹೋಗಲಿಲ್ಲ. ಆದರೆ ಈಗ ಸೋಮಣ್ಣನಿಗೆ ಬೆಂಬಲಿಸುತ್ತಿದ್ದು ಈ ಸೋಮಣ್ಣ ಗೆದ್ದರೂ ಯಾವುದೇ ಕೆಲಸ ಮಾಡಲ್ಲ. ಸೋಮಣ್ಣ ಕೆಲಸಗಾರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದು ಅವನು ವಸತಿ ಸಚಿವನಾಗಿ ಒಂದೇ ಒಂದು ಮನೆ ಬಡವರಿಗೆ ಕಟ್ಟಿಸಿಕೊಡಲಿಲ್ಲ.ಆದರೆ ನಮ್ಮ ಸರ್ಕಾರವಿದ್ದಾಗ ೧೪ ಲಕ್ಷ ೪೬ ಸಾವಿರ ಮನೆ ಕಟ್ಟಿಸಿಕೊಟ್ಟಿದ್ದೇವೆ. ಹಾಗಾಗಿ ಈ ಸುಳ್ಳು ಕೆಲಸಗಾರನಿಗೆ ಮತ ನೀಡಬೇಡಿ. ಆದರೆ ನಮ್ಮ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಸರಳ ಸಜ್ಜನನಾಗಿದ್ದು, ಕಳೆದ ಬಾರಿ ಅವರು ಸಂಸತ್ ಸದಸ್ಯನಾಗಿ ೭೦೦ಕ್ಕೂ ಹೆಚ್ಚು ಪ್ರಶ್ನೆಗಳನ್ನು ಈ ಜಿಲ್ಲೆಯ ರೈತರು, ಕೃಷಿ ಹಾಗೂ ಅಭಿವೃದ್ಧಿ ಸೇರಿದಂತೆ ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚಿಲ್ಲಿದ್ದಾರೆ.
ಈಗಲೂ ನೀವು ಮತ ನೀಡಿ ಗೆಲ್ಲಿಸಿದರೆ ನಿಮ್ಮ ಎಲ್ಲ ಸಮಸ್ಯೆಗಳ ಬಗ್ಗೆ ಅವರು ಕೇಂದ್ರದಲ್ಲಿ ಹೋರಾಡಲಿದ್ದು ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು. ಇಂದು ದೇಶಾದ್ಯಂತ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದು ಅವರ ಎಲ್ಲ ವಿಚಾರ ಧಾರೆಗಳನ್ನು ಕಾಂಗ್ರೆಸ್ ಅಳವಡಿಸಿಕೊಂಡು ಎಲ್ಲರಿಗೂ ಸಮಾನತೆ ನೀಡುವಲ್ಲಿ ಮುಂದಿದೆ ಎಂದರು.ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ ೨೦೧೪ ರಿಂದ ೧೯ ರವರೆಗೆ ಸಂಸತ್ನಲ್ಲಿ ಈ ಜಿಲ್ಲೆಯನ್ನು ಪ್ರತಿನಿಧಿಸಿ ಒಟ್ಟು ೭೦೦ಪ್ರಶ್ನೆಗಳ ಬಗ್ಗೆ ಮಾತನಾಡಿ ಪ್ರಮುಖ ೧೨೦ಕ್ಕೆ ಉತ್ತರ ಕಂಡುಕೊಂಡಿರುವುದು ನಿಮ್ಮಗಳ ಮುಂದಿದೆ. ಕುಡಿವ ನೀರು, ಇಸ್ರೋ, ಎಚ್ಎಎಲ್, ರೈಲ್ವೆ ಲೈನ್ ಡಬ್ಲಿಂಗ್, ಚತುಷ್ಪಥ ಹೆದ್ದಾರಿ ಸೇರಿದಂತೆ ಅನೇಕ ಯೋಜನೆಗಳನ್ನು ಮಂಜೂರು ಮಾಡಿಸಿ ಕಾರ್ಯಗತಗೊಳಿಸಲಾಗಿದೆ. ಈ ಬಾರಿಯೂ ನನ್ನನ್ನು ಗೆಲ್ಲಿಸಿದರೆ ಕೊಬ್ಬರಿ, ರಾಗಿ ಕಡ್ಲೇಕಾಯಿ, ಜೋಳ ಮತ್ತಿತರೆ ಉತ್ಪನ್ನಗಳಿಗೆ ಹೆಚ್ಚಿನ ಬೆಂಬಲ ಬೆಲೆ ಸೇರಿದಂತೆ ನೀರಾವರಿಗೆ ಹೆಚ್ಚಿನ ಆಧ್ಗಯತೆ ನೀಡುತ್ತೇನೆಂದು ತಿಳಿಸಿ ಮತ ಕೇಳಿದರು.ಸಮಾರಂಭದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಜಯಚಂದ್ರ. ಶಾಸಕರಾದ ಕೆ. ಷಡಕ್ಷರಿ. ಶ್ರೀನಿವಾಸು, ರಾಜೇಂದ್ರ, ಮುಖಂಡರುಗಳಾದ ಬೆಮೆಲ್ ಕಾಂತರಾಜು, ಕಿರಣ್ಕುಮಾರ್, ಶಫಿ ಅಹಮದ್, ರಫೀಕ್ ಅಹಮದ್, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ, ವಕ್ತಾರ ನಿಖಿತ್ರಾಜ್ ಮೌರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಸೇರಿದಂತೆ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಇತರೆ ಮುಖಂಡರುಗಳಿದ್ದರು.ಕುಮಾರಸ್ವಾಮಿ ಕೀಳು ಮಾತಿನಿಂದ ಮಹಿಳೆಯರಿಗೆ ಅವಮಾನ: ಡಿಕೆಶಿ: ನಮ್ಮ ಸರ್ಕಾರ ಈ ನಾಡಿನ ಮಹಿಳೆಯರ ಸ್ವಾಲಂಬನೆ ಜೀವನಕ್ಕೆ ರು.ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದು ಅವರ ಖಾತೆಗೆ ಪ್ರತಿ ತಿಂಗಳು ಹಣ ಹಾಕುತ್ತಿದ್ದೇವೆ. ಇದನ್ನು ಸಹಿಸದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಅವರನ್ನು ಅವಮಾನಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ದೇವೇಗೌಡರ ಕುಟುಂಬ ರಾಜಕೀಯವಾಗಿ ತಮ್ಮದೇ ಸ್ಥಾನಮಾನ ಹೊಂದಿದ್ದು, ಅವರಿಂದ ಇಂತಹ ಕೀಳು ಹೇಳಿಕೆ ಸಹಿಸಲು ಸಾಧ್ಯವಿಲ್ಲ. ನಾನು ಈ ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಸತ್ತಾಗ ತುಂಬಾ ನೊಂದುಕೊಂಡಿದ್ದು. ಅದುಬಿಟ್ಟರೆ ಎಚ್ಡಿಕೆ ನಮ್ಮ ಮಹಿಳೆಯರ ಬಗ್ಗೆ ಆಡಿರುವ ಮಾತನಿಂದ ಬಹಳ ನೊಂದಿದ್ದೇನೆ. ನನ್ನ ತಾಯಿ ಬಗ್ಗೆಯೂ ಇದಕ್ಕಿಂತ ಕೀಳು ಮಾತು ಆಡಿದ್ದ ಅವರು ಕ್ಷಮೆ ಕೇಳಿದ್ದರು.ಈಗಲೂ ಅವರು ಕ್ಷಮೆ ಕೇಳಿದರೂ ಕೇಳಬಹುದು. ಇವೆಲ್ಲ ಅವರಿಗೆ ಮಾಮೂಲಾಗಿದೆ. ಈ ಮಾತಿನ ಬಗ್ಗೆ ಮೋದಿ, ಯಡಿಯೂ ರಪ್ಪ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಮತ್ತಿತರರು ಏನು ಹೇಳುತ್ತೇರೆಂದು ಕೇಳಬೇಕಾಗಿದೆ. ಹಾಗಾಗಿ ಇವರ ಈ ಮಾತನ್ನು ರಾಜ್ಯದ ಮಹಿಳೆಯರು ಉಗ್ರವಾಗಿ ಖಂಡಿಸಬೇಕೆಂದು ಹೇಳಿದರು.
ಈ ಬಾರಿ ೪೦೦ಸೀಟು ಬಂದರೆ ಸಂವಿಧಾನ ಬದಲಾಯಿಸುತ್ತೇವೆಂದು ಹೇಳಿದ ಎಂಪಿಯನ್ನ ಮೋದಿ ಈವರೆಗೂ ಉಚ್ಚಾಟಿಸ ಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಹಾಗಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಎಲ್ಲರು ಸಮಾನ ವಾಗಿ ಅಧಿಕಾರದಲ್ಲಿದ್ದಂತೆ. ಕಮಲ ಕೆರೆಯಲ್ಲಿರಬೇಕು. ತೆನೆ ಹೊಲದಲ್ಲಿರಬೇಕು ಹಾಗೇ ದಾನ ಧರ್ಮ ಮಾಡುವ ಕೈ ಅಧಿಕಾರ ದಲ್ಲಿದ್ದರೆ ಯಾವಾಗಲೂ ಚಂದ. ಈ ಹಿಂದೆ ಸಾಕಷ್ಟು ಕಾರಣಗಳಿಗೆ ಚುನಾವಣೆ ನಡೆದಿದ್ದು, ಈ ಬಾರಿಯದ್ದು ಬಿಜೆಪಿಯ ಸುಳ್ಳಿಗೆ ಹಾಗೂ ಕಾಂಗ್ರೆಸ್ನ ಸತ್ಯದ ಭರವಸೆಗಳಿಗಾಗಿ ಚುನಾವಣೆ ನಡೆಯುತ್ತಿದ್ದು ಎಲ್ಲರೂ ಸತ್ಯವನ್ನು ಬೆಂಬಲಿಸಬೇಕು.ಇಲ್ಲಿನ ನಮ್ಮ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಈ ಜಿಲ್ಲೆಯ ನೀರಾವರಿ, ತೆಂಗು ಸೇರಿದಂತೆ ಎಲ್ಲ ಅಭಿವೃದ್ಧಿ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಕಳೆದ ಬಾರಿ ಕೇಂದ್ರದಿಂದ ಎಚ್ಎಎಲ್, ಇಸ್ರೋ, ಹೆದ್ದಾರಿ ಇತರ ಯೋಜನೆಗಳ ತಂದಿದ್ದು, ಈ ಬಾರಿ ಸಂಸತ್ಗೆ ಹೋಗಲು ನೀವು ಗೆಲ್ಲಿಸಿಕೊಟ್ಟರೆ ಈ ಜಿಲ್ಲೆಯ ಸಾಕಷ್ಟು ಸಮಸ್ಯೆಗಳು ಬಗೆ ಹರಿಯುವುದರಲ್ಲಿ ಸಂಶಯವಿಲ್ಲ ಎಂದರು.
10 ವರ್ಷದಿಂದ ಜನತೆ ಸುಳ್ಳು ಮಾರುತ್ತಿರುವ ಬಿಜೆಪಿ: ಪರಮೇಶ್ವರ್: ಈ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆ. ಪ್ರಜಾಪ್ರಭುತ್ವ ಅಸ್ತಿತ್ವ, ಅಭಿವೃದ್ಧಿ, ಧರ್ಮ, ದೇವರು ಹಾಗೂ ಅಧರ್ಮದ ವಿರುದ್ಧದ ಚುನಾವಣೆಯಾಗಿದೆ. ನಮ್ಮ ಸರ್ಕಾರ ನೀಡಿದ್ದ ೫ ಗ್ಯಾರಂಟಿಗಳನ್ನು ಸಕಾಲದಲ್ಲಿ ಈಡೇರಿಸಿದ್ದು ನಿಮ್ಮೆಲ್ಲ ಮನಸ್ಸು ಗೆದ್ದಿದೆ ಎಂದು ಗೃಹಮಂತ್ರಿ ಜಿ. ಪರಮೇಶ್ವರ್ ಹೇಳಿದರು.ಆದರೆ ಕೇಂದ್ರದ ಬಿಜೆಪಿ ಸರ್ಕಾರ ಕಳೆದ ೧೦ ವರ್ಷಗಳಿಂದ ಸುಳ್ಳಿನ ಭರವಸೆಗಳಲ್ಲೇ ದೇಶ ಆಳಿ ಅಶಾಂತಿ ಉಂಟುಮಾಡಿ ದೆ. ಅಲ್ಲದೆ ಸುಳ್ಳನ್ನೇ ಕಳೆದ ೧೦ ವರ್ಷಗಳಿಂದಲೂ ದೇಶದ ಜನತೆಗೆ ಉಚಿತವಾಗಿ ಮಾರಾಟ ಮಾಡಿಕೋಂಡು ಬರುತ್ತಿದ್ದು, ಇವತ್ತು ಬಿಜೆಪಿ ಬಿಡುಗಡೆ ಮಾಡಿರುವ ಗ್ಯಾರಂಟಿಗಳನ್ನು ನಂಬಬಾರದು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆ ಆಡಳಿತ ಮಾಡುವ ಈ ಸರ್ಕಾರವನ್ನು ಕಿತ್ತೊಗೆಯಬೇಕು. ನಮ್ಮ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರು ಆಡಳಿತದಲ್ಲಿ ಅನುಭವಿಗಳು. ಕಳೆದ ಬಾರಿ ಸಂಸತ್ ಸದಸ್ಯರಾಗಿ ಇಲ್ಲಿನ ಕೊಬ್ಬರಿ ಬೆಲೆ ಸೇರಿದಂತೆ ಎಲ್ಲ ಸಮಸ್ಯೆಗಳ ಬಗ್ಗೆ ಸಂಸತ್ನಲ್ಲಿ ಮಾತನಾಡಿದ್ದು ಮುಂದೆಯೂ ಅಭಿವೃದ್ಧಿ ಪರ ಚಿಂತನೆಗಳನ್ನೇ ಮಾಡುವ ಇವರನ್ನು ಹೆಚ್ಚಿನ ಬಹುಮತಗಳಿಂದ ಗೆಲ್ಲಿಕೊಡಬೇಕೆಂದು ಮನವಿ ಮಾಡಿಕೊಂಡರು.