ಕನ್ನಡಪ್ರಭ ವಾರ್ತೆ ಸಾಗರಪಟ್ಟಣದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು ಅಗತ್ಯವಿದ್ದಲ್ಲಿ ಮಣಿಪಾಲದ ಆಸ್ಪತ್ರೆಗೆ ತೆರಳಬಹುದು. ಇದಕ್ಕಾಗಿ ಅಲ್ಲಿನ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಗಾಬರಿಪಡುವ ಅಗತ್ಯವಿಲ್ಲ ಎಂದು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಈ ವರ್ಷ ಮತ್ತೆ ಮಂಗನ ಕಾಯಿಲೆ ಹಲವೆಡೆ ಕಾಣಿಸಿಕೊಂಡಿದೆ. ಅಧಿಕಾರಿಗಳು, ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದು, ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಲಾಗಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯ ಚುರುಕುಗೊಂಡಿದೆ. ಸಾರ್ವಜನಿಕರು ಮಂಗನ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿರ್ದಿಷ್ಟವಾದ ಚಿಕಿತ್ಸೆಇಲ್ಲದಿರುವುದರಿಂದ ಒಂದು ಹಂತದ ಲಸಿಕೆಗಳನ್ನು ನೀಡಲಾಗಿದೆ. ಡಿಎಂಪಿ ಎಣ್ಣೆಯನ್ನು ಗ್ರಾಮ ಪಂಚಾಯತಿ, ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಕಾಡಿನ ಸಂಪರ್ಕದಲ್ಲಿ ಇರುವವರು ಕಟ್ಟುನಿಟ್ಟಾಗಿ ಇದನ್ನು ಬಳಸಬೇಕು. ರೋಗಿಗಳ ಸುರಕ್ಷತೆಗಾಗಿ ಅರಳಗೋಡು, ಬಾರಂಗಿ ಮೊದಲಾದ ಕಡೆಯ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಪರಪ್ಪ, ಆಸ್ಪತ್ರೆ ಸಮಿತಿ ಸದಸ್ಯ ಜಯಕುಮಾರ್, ಫಣೀಂದ್ರ ಮೊದಲಾದವರಿದ್ದರು.- - - ಬಾಕ್ಸ್ ಕೆಎಫ್ಡಿ ಸಂಶೋಧನಾ ಕೇಂದ್ರ ತರಲು ಪ್ರಯತ್ನಸಾಗರದಲ್ಲಿ ಕೆಎಫ್ಡಿ ಸಂಶೋದನಾ ಕೇಂದ್ರ ಆರಂಭಿಸುವ ಕುರಿತು ಮಾತನಾಡಿದ ಶಾಸಕ ಬೇಳೂರು ಅವರು, ಉಪವಿಭಾಗೀಯ ಆಸ್ಪತ್ರೆಗೆ ಸಾಗರ ತಾಲೂಕು ಸೇರಿದಂತೆ ಶಿರಸಿ, ಸಿದ್ದಾಪುರ, ಹೊಸನಗರ ಮೊದಲಾದ ಕಡೆಗಳಿಂದ ಚಿಕಿತ್ಸೆಗೆ ಬರುತ್ತಾರೆ. ಇಲ್ಲಿ ಸಂಶೋದನಾ ಕೇಂದ್ರ ತೆರೆಯಬೇಕೆನ್ನುವ ಒತ್ತಾಯ ಮೊದಲಿನಿಂದಲೂ ಇದೆ. ಹಿಂದೆ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿಚರ್ಚೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಅಧಿವೇಶನದಲ್ಲಿ ಸರ್ಕಾರ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದು ಸಾಗರದಲ್ಲಿ ಸಂಶೋಧನಾ ಕೇಂದ್ರ ತೆರೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಾಗರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.