ಪರಿಸರ ಕಾಪಾಡದಿದ್ದರೆ ಜೀವಕುಲಕ್ಕೆ ದೊಡ್ಡ ಆಪತ್ತು: ಮಂಜುನಾಥ ಮಠದ

KannadaprabhaNewsNetwork |  
Published : Jun 06, 2024, 12:31 AM IST
ಫೋಟೋ : ೫ಎಚ್‌ಎನ್‌ಎಲ್೧ | Kannada Prabha

ಸಾರಾಂಶ

ರಸಾಯನಿಕ ಮುಕ್ತ ಆಹಾರದತ್ತ ಸಾಗಬೇಕು. ಸಾವಯವ ಕೃಷಿ ಬೇಕಾಗಿದೆ. ಸರ್ಕಾರ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಾಳೆಗಾಗಿ ನಾವು ಈಗಲೇ ಆಲೋಚಿಸಬೇಕು ಎಂದು ಪರಿಸರ ತಜ್ಞ ಮಂಜುನಾಥ ಮಠದ ಎಚ್ಚರಿಸಿದ್ದಾರೆ.

ಹಾನಗಲ್ಲ: ಪರಿಸರ ನಾಶ, ಕಾಂಕ್ರೀಟ್ ಕಾಡಿನ ವಿಸ್ತಾರದಿಂದಾಗಿ ಆಮ್ಲಮಳೆಯಂತಹ ವಿಪರೀತಗಳು ಸಂಭವಿಸುತ್ತಿವೆ. ನಮ್ಮಲ್ಲಿ ಜಾಗೃತಿ ಮೂಡದಿದ್ದರೆ ಜೀವಕುಲಕ್ಕೆ ದೊಡ್ಡ ಆಪತ್ತು ಕಾದಿದೆ ಎಂದು ಪರಿಸರ ತಜ್ಞ ಮಂಜುನಾಥ ಮಠದ ಹೇಳಿದರು.

ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಪರಿಸರ ದಿನಾಚರಣೆ ಹಾಗೂ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದಲ್ಲಿ ಕಾರ್ಬನ್ ಪ್ರಮಾಣ ಏರುತ್ತಿದೆ. ಗಾಳಿ, ನೀರು, ಬೆಳಕು, ಪರಿಶುದ್ಧವಾಗಿ ಸಿಗುತ್ತಿಲ್ಲ. ಮಳೆಯಿಂದಾದ ನೀರನ್ನು ಸಮುದ್ರದ ಪಾಲು ಮಾಡುತ್ತಿದ್ದೇವೆ. ಮಳೆನೀರು ಕೊಯ್ಲು ಮೂಲಕ ನೀರನ್ನು ಇಂಗಿಸಿ ಅಂತರ್ಜಲ ರಕ್ಷಿಸಬೇಕು. ಜನಸಂಖ್ಯೆ ಏರುತ್ತಿದೆ. ಪ್ರಕೃತಿ ಏರುಪೇರಾಗುತ್ತಿದೆ. ಮನುಷ್ಯ ತನ್ನ ಅವಶ್ಯಕತೆಗಳಿಗೆ ಕಾಡನ್ನು ಮಿತಿಮೀರಿ ಕಡಿದು ಹಾಕುತ್ತಿದ್ದಾನೆ. ರಸಾಯನಿಕ ಮುಕ್ತ ಆಹಾರದತ್ತ ಸಾಗಬೇಕು. ದೇಶೀ ತಳಿ ಮಾಯವಾಗುತ್ತಿದೆ. ಸಾವಯವ ಕೃಷಿ ಬೇಕಾಗಿದೆ. ಜನಸಂಖ್ಯೆ ನಿಯಂತ್ರಣದಲ್ಲಿ ಹಿಂದೆ ಬಿದ್ದಿದ್ದೇವೆ. ಸರ್ಕಾರ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಾಳೆಗಾಗಿ ನಾವು ಈಗಲೇ ಆಲೋಚಿಸಬೇಕು ಎಂದರು.

ಕದಳಿ ಮಹಿಳಾ ವೇದಿಕೆ ಸದಸ್ಯೆ ಸುಜಾತಾ ನಂದೀಶೆಟ್ಟರ ಶರಣೆ ಅಮುಗೆ ರಾಯಮ್ಮ ಕುರಿತು ಮಾತನಾಡಿ, ನೇಕಾರ ವೃತ್ತಿಯ ಅಮುಗೆ ರಾಯಮ್ಮ ಭಕ್ತಿ ವೈರಾಗ್ಯದ ನಿಧಿಯಾಗಿದ್ದರು. ಅಹಂಕಾರ ಸುಟ್ಟು ಆತ್ಮಬಲದ ಮೂಲಕ ಎಲ್ಲವನ್ನೂ ಗೆಲ್ಲಬೇಕು. ಸ್ವಯಂ ಅರಿವಿನಿಂದ ಮಾತ್ರ ನಮ್ಮ ಚಿತ್ತ ಸ್ವಚ್ಛವಾಗಿರಲು ಸಾಧ್ಯ. ಶರಣರ ಸಂದೇಶಗಳು ಈಗ ಮನೆ ಮನೆಯ ಮಾತಾಗಬೇಕು ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಧಾರ್ಮಿಕ, ಸಾಂಸ್ಕೃತಿಕ ಅರಿವಿನೊಂದಿಗೆ ಪರಿಸರದ ಅರಿವು ಮೂಡಿಸಲು ಮುಂದಾಗೋಣ. ಎಲ್ಲರೂ ಒಂದಾಗಿ ಆಲೋಚಿಸಿದರೆ ಮಾತ್ರ ಈ ಪ್ರಕೃತಿ ಸ್ವಚ್ಛವಾಗಿ ಉಳಿಯಲು ಸಾಧ್ಯ. ಒಂದು ಮಗು ಒಂದು ಗಿಡ ಎಂದು ಆಲೋಚಿಸಿದರೆ ಖಂಡಿತ ನಮ್ಮ ಪರಿಸರ ಉಳಿಸಲು ಸಾಧ್ಯ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ತಾಲೂಕು ಅಧ್ಯಕ್ಷ ಎಸ್.ಕೆ. ಕಲ್ಲನಗೌಡರ, ಜಿಲ್ಲಾ ಕಾರ್ಯದರ್ಶಿ ನಿರಂಜನ ಗುಡಿ, ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಉಪಾಧ್ಯಕ್ಷ ಶಂಭುಲಿಂಗ ಹೇಮಗಿರಿಮಠ, ವಕೀಲ ಎಂ.ಎಸ್. ಹುಲ್ಲೂರ, ತಾಲೂಕು ಕಾರ್ಯದರ್ಶಿ ಸುಭಾಸ ಹೊಸಮನಿ, ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ರೇಖಾ ಶೆಟ್ಟರ, ಅಕ್ಕಮ್ಮ ಶೆಟ್ಟರ, ಜ್ಯೋತಿ ಜಾಧವ, ಸುಮಂಗಲಾ ಕಟ್ಟಿಮಠ, ಶೋಭಾ ಪಾಟೀಲ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ