ನಮ್ಮ ಬದುಕಿಗೆ ಇತಿ-ಮಿತಿ ಹಾಕಿಕೊಳ್ಳದಿದ್ದರೆ ತೊಂದರೆ: ಸಂಸದ ಕಾಗೇರಿ

KannadaprabhaNewsNetwork |  
Published : Apr 25, 2026, 03:00 AM IST
ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರೂಪ್‌ ಸಹಕಾರಿಯ ಕಟ್ಟಡ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರೂಪ್‌ ಗ್ರಾಮಗಳ ಸೇವಾ ಸಹಕಾರಿ ಸಂಘಗಳ ₹೨.೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.

ಯಲ್ಲಾಪುರ: ನಮ್ಮ ಬದುಕಿಗೆ ಇತಿ-ಮಿತಿ ಹಾಕಿಕೊಳ್ಳದೇ ನಾವು ಮುನ್ನಡೆದರೆ ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಹಾಸಣಗಿ ಗ್ರೂಪ್‌ ಗ್ರಾಮಗಳ ಸೇವಾ ಸಹಕಾರಿ ಸಂಘಗಳ ಪಾಸ್ಕ್ ಆಸ್ ಮಾಸ್ಕ್ ₹೨.೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಹಳ್ಳಿಗಳು ಬರಡಾಗಿ, ನಗರ ಬೆಳೆಯುತ್ತಿದೆ. ಮೌಲ್ಯ ಅಧಃಪತನದತ್ತ ಸಾಗಿದೆ. ಗ್ರಾಮೀಣ ಬದುಕು ಉಳಿದರೆ ಮಾತ್ರ ಮೌಲ್ಯ ಉಳಿದೀತು. ಅದನ್ನು ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಗ್ಲೋಬಲ್ ವಾರ್ನಿಂಗ್ ಇಂದು ಎಲ್ಲರನ್ನೂ ಕಾಡುತ್ತಿದೆ ಎಂದು ಹೇಳಿದರು.

ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತಿದೆ. ಕೇಂದ್ರ ಸಹಕಾರಿ ಇಲಾಖೆಯೂ, ಜಿಲ್ಲೆಯ ಸಹಕಾರಿ ವ್ಯವಸ್ಥೆಯನ್ನು ಅಧ್ಯಯನ ಮಾಡಿಹೋಗಿದೆ. ಅಷ್ಟು ಸಹಕಾರಿ ತತ್ವ ನಮ್ಮಲ್ಲಿ ಬೆಳೆದು ಬಂದಿದೆ. ರೈತರ ಜೀವನಾಡಿಯಾದ ಸಹಕಾರಿ ಸಂಘ, ಅವುಗಳಿಗೆ ಪೂರಕವಾದ ಕೆಡಿಸಿಸಿ ಬ್ಯಾಂಕ್ ಕೂಡ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.

ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಕೆಡಿಸಿಸಿ ಬ್ಯಾಂಕ್, ಸಹಕಾರಿ ಸಂಘ ಮತ್ತು ರೈತ ಇವು ತ್ರಿಟೈಯರ್ ವ್ಯವಸ್ಥೆ. ಪರಸ್ಪರ ಸಹಕಾರಿ ತತ್ವದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದೆ. ಆದರೆ ಕೇಂದ್ರದ ಹೊಸ ನೀತಿಯಿಂದಾಗಿ ನಬಾರ್ಡ್‌ನಿಂದ ಕೆಡಿಸಿಸಿ ಬ್ಯಾಂಕ್ ಸೇರಿದಂತೆ ರಾಜ್ಯದ ಎಲ್ಲ ಸಹಕಾರಿ ಸಂಸ್ಥೆ, ಬ್ಯಾಂಕುಗಳಿಗೆ ನೀಡುತ್ತಿರುವ ಸಹಾಯವನ್ನು ಶೇ. ೪೦ರಷ್ಟು ಕಡಿಮೆ ಮಾಡಿದೆ. ಇದರಿಂದ ನಮ್ಮ ಕೆಡಿಸಿಸಿ ಬ್ಯಾಂಕಿಗೆ ₹೯೧ ಕೋಟಿ ನಷ್ಟವಾಗಿದೆ. ನಾವು ₹೧೮ ಕೋಟಿ ಬೆಳೆಸಾಲ ನೀಡಿದ್ದೇವೆ. ಇದರಿಂದ ನಮ್ಮ ಬ್ಯಾಂಕಿಗೆ ಒಂದು ಕೋಟಿ ನಷ್ಟವಾಗಿದೆ. ಕಳೆದ ೪ ವರ್ಷಗಳಲ್ಲಿ ಕೇಂದ್ರದಿಂದ ನಬಾರ್ಡ್ ಮೂಲಕ ಬರುವ ಹಣ ಇಳಿಯುತ್ತಲೇ ಇದೆ. ಇಂದು ಶೇ. ೧೧ಕ್ಕೆ ಬಂದಿದೆ. ಈ ನೀತಿ ಬದಲಾಗದಿದ್ದರೆ ನಮ್ಮದೊಂದೇ ಅಲ್ಲ, ದೇಶದ ಎಲ್ಲ ಸಹಕಾರಿ ಸಂಸ್ಥೆಗಳು ಅತಂತ್ರಕ್ಕೆ ಹೋದೀತು. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು. ರಾಜ್ಯದಿಂದ ₹೭೮೦೦ ಕೋಟಿ ಬೇಡಿಕೆ ಸಲ್ಲಿಸಿದ್ದೆವು. ಆದರೆ ₹೩೭೬೫ ಕೋಟಿ ಮಾತ್ರ ಬಂದಿದೆ. ಇದರಿಂದ ರಾಜ್ಯದ ಸಹಕಾರಿ ಬ್ಯಾಂಕ್‌ಗಳಿಗೆ ₹೪.೫ ಕೋಟಿ ಹಾನಿಯಾಗಿದೆ. ನಾವೆಲ್ಲ ಸೇರಿ ಮುಖ್ಯಮಂತ್ರಿ ಜತೆ ಕೇಂದ್ರದ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೆ ಅವರು ಸ್ಪಂದಿಸಿಲ್ಲ. ಈ ವರ್ಷ ಇನ್ನೂ ಕಡಿಮೆ ಮಾಡಲಾಗಿದೆ.

ರಾಜ್ಯ ಸರ್ಕಾರ ಎಂದೋ ನೀಡಿದ ಸಾಲಮನ್ನಾದ ಹಣ ಕೂಡ ಇನ್ನೂ ₹೫ ಕೋಟಿ ಕೆಡಿಸಿಸಿ ಬ್ಯಾಂಕಿಗೆ ಬರಬೇಕಾಗಿದೆ. ಹೀಗಾದರೆ ಸಹಕಾರಿ ಬ್ಯಾಂಕ್‌ಗಳು ಹೇಗೆ ಉಳಿಯುತ್ತವೆ? ಎಂದರು.

ಸಂಸ್ಥೆಯ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಅಧ್ಯಕ್ಷತೆ ವಹಿಸಿದ್ದರು. ಉಮ್ಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಸಾಂದರ್ಭಿಕವಾಗಿ ಮಾತನಾಡಿದರು. ನಿರ್ದೇಶಕರಾದ ಮೋಹನ ಭಟ್ಟ, ರಾಮಕೃಷ್ಣ ಧುಂಡಿ, ರಾಘವೇಂದ್ರ ಭಟ್ಟ, ನಾಗರಾಜ ಹೆಗಡೆ, ವಿನೋದ ನಾಯ್ಕ, ರಾಮರಾಜ ಮರಾಠಿ, ಮಂಜುನಾಥ ಸಿದ್ದಿ, ಗಂಗಾಧರ ಮೇದಾರ, ಸುಶೀಲಾ ಜೋಶಿ, ವೀಣಾ ಹೆಗಡೆ, ಹೇರಂಭ ಹೆಗಡೆ, ಜಿ.ವಿ. ಹೆಗಡೆ, ಬಸವರಾಜ ಬೋಚಳ್ಳಿ ಇತರರಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಟಿ.ವಿ. ಹೆಗಡೆ ಬೆದೆಹಕ್ಲು ಸ್ವಾಗತಿಸಿದರು. ಪುಷ್ಪಾ ಮಾಳಕೊಪ್ಪ ಸಂಗಡಿಗರು ನಾಡಗೀತೆ ಹಾಡಿದರು. ಜಿ.ಎನ್. ಭಟ್ಟ ಶ್ರೀಗಳ ಸಂದೇಶ ವಾಚಿಸಿದರು. ರಶ್ಮಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋಲಾರ್‌ ಪ್ಯಾನಲಗೆ 2400 ಮರಗಳು ಬಲಿ!
ನಾಳೆ ಕುಮಟಾದಲ್ಲಿ ಸಾಧನಾ ಸೌರಭ ಕಾರ್ಯಕ್ರಮ, ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ