ಕನ್ನಡಪ್ರಭ ವಾರ್ತೆ ತುರುವೇಕೆರೆ
ಕಾಂಗ್ರೆಸ್ ನ ಅಧಿನಾಯಕ ಜೋಡೋ ಯಾತ್ರೆ ಮಾಡಿ ದೇಶ ಒಂದು ಮಾಡ್ತೇನೆ ಅಂತ ಹೇಳಿದರು. ಆದರೆ ಸಿದ್ದರಾಮಯ್ಯ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆದು ಖುಷಿಪಡುತ್ತಿದ್ದಾರೆ. ಸಿದ್ದರಾಮಯ್ಯನವರೇ ಜಾತಿ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತಬೇಡಿ. ಸಹೋದರರ ರೀತಿ ಇರುವವರನ್ನು ಹೊಡೆದಾಡಲು ಹಚ್ಚಬೇಡಿ. ಜಾತಿ ಗಣತಿ ನಡೆಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ. ಆದರೆ ನೀವು ಜಾತಿ ಸಮೀಕ್ಷೆ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದ್ದೀರಿ ಎಂದು ದೂರಿದರು. ಮನೆಮನೆಗೆ ತೆರಳದೇ ಕೂತಲ್ಲೇ ಸಮೀಕ್ಷೆ ಮಾಡಲಾಗಿದೆ. ನಾವೆಲ್ಲರೂ ಕಾವೇರಿ ತಾಯಿಯ ಮಕ್ಕಳು, ಕನ್ನಡ ತಾಯಿಯ ಮಕ್ಕಳು. ನಾವೆಲ್ಲರೂ ಒಂದೇ. ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸಲು ಸಮೀಕ್ಷೆ ಮಾಡಿ. ಆದರೆ ಅದು ನಿಮ್ಮ ಅಧಿಕಾರ ಉಳಿಸಿಕೊಳ್ಳಲು, ನಿಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಮಾಡುತ್ತಿರುವ ತಂತ್ರ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ರಾಜ್ಯದಲ್ಲಿ ಟ್ರ್ಯಾಪ್ ಗಳದ್ದೇ ಸದ್ದಾಗಿದೆ. ರಾಜ್ಯದಲ್ಲಿ ಹನಿ ಟ್ರ್ಯಾಪ್, ಕೇಂದ್ರದವರಿಗೆ ಮನಿ ಟ್ರ್ಯಾಪ್, ಕಂಟ್ರ್ಯಾಕ್ಟರ್ ಗಳಿಗೆ ಕಮೀಷನ್ ಟ್ರ್ಯಾಪ್, ಒಟ್ಟಿನಲ್ಲಿ ಈ ಸರ್ಕಾರ ರಾಜ್ಯದ ಜನರನ್ನು ಒಂದಲ್ಲಾ ಒಂದು ಟ್ರ್ಯಾಪ್ ನಲ್ಲಿ ಸಿಕ್ಕಿ ಹಾಕಿಸಿದೆ. ಇಂತಹ ಕೆಟ್ಟ ಸರ್ಕಾರವನ್ನು ಕಿತ್ತಗೆಯುವ ಕಾಲ ಸನ್ನಿಹಿತವಾಗಿದೆ. ಜಾಗೃತರಾಗಬೇಕು. ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ಮಾಡುತ್ತೇವೆ ನಿಖಿಲ್ ಕುಮಾರಸ್ವಾಮಿ ಹೇಳಿದರು. ಇದು ನಿರಂತರವಾಗಿ ಇರಬೇಕು ಎಂದು ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. ಬಿಜೆಪಿ ಸರ್ಕಾರವಿದ್ದಾಗ ಬಿಜೆಪಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ನವರು ವಿನಾಕಾರಣ 40 % ಸರ್ಕಾರ ಅಂತ ದೂಷಿಸಿದ್ದರು. ಆದರೆ ಈ ಸರ್ಕಾರ 60 % ಸರ್ಕಾರವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದರು. ಅತ್ಯಂತ ಭ್ರಷ್ಟ ಸರ್ಕಾರ. ಎಲ್ಲಾ ಇಲಾಖೆಗಳಲ್ಲಿ ಕಮೀಷನ್ ನೀಡಬೇಕಿದೆ. ರೈತರಿಗೆ ಸಿದ್ದರಾಮಯ್ಯನವರ ಕೊಡುಗೆ ಏನೇನೂ ಇಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರಿಗೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ರೈತರ ಹಿತ ಕಾಪಾಡುವ ವ್ಯಕ್ತಿ ಎಂದರೆ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಮಾತ್ರ ಎಂದರು. ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಜಾಗೃತಿಗೊಳಿಸಲು ಲಕ್ಷಾಂತರ ಜನರನ್ನು ಸೇರಿಸಿ ವಿಧಾನಸೌಧ ಚಲೋ ನಡೆಸಬೇಕು. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಈ ಸರ್ಕಾರಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಹೇಳಿದರು. ಮಾಜಿ ಶಾಸಕ ಎಂ.ಟಿ.ಲಕ್ಷ್ಮೀನಾರಾಯಣ್ ಮಾತನಾಡಿ ಗ್ಯಾರಂಟಿ ಹೆಸರಿನಲ್ಲಿ ರಾಜ್ಯವನ್ನು ಕಾಂಗ್ರೆಸ್ ದಿವಾಳಿ ಮಾಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಕೆಳಮಟ್ಟಕ್ಕೆ ಕುಸಿಯುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ರಮೇಶ್ ಗೌಡ, ತಾಲೂಕು ಅಧ್ಯಕ್ಷ ದೊಡ್ಡೇಗೌಡ, ಮಹಿಳಾ ಅಧ್ಯಕ್ಷೆ ಲೀಲಾವತಿ ಗಿಡ್ಡಯ್ಯ, ಮುಖಂಡರಾದ ಸಿಎಸ್ ಪುರ ನರಸಿಂಹಮೂರ್ತಿ, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಹೆಡಿಗೇಹಳ್ಳಿ ವಿಶ್ವನಾಥ್, ಬಿಜೆಪಿ ಮಂಡಲ ಅಧ್ಯಕ್ಷ ಮೃತ್ಯುಂಜಯ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಸೋಮೇನಹಳ್ಳಿ ಜಗದೀಶ್, ಪಟ್ಟಣ ಪಂಚಾಯಿತಿ ಸದಸ್ಯೆ ಆಶಾ ರಾಜಶೇಖರ್, ಹೇಮಚಂದ್ರು, ಚೂಡಾಮಣಿ ಸೇರಿದಂತೆ ಹಲವರು ಇದ್ದರು. 21 ಟಿವಿಕೆ 1 – ತುರುವೇಕೆರೆಯಲ್ಲಿ ಎನ್ ಡಿ ಎ ಮೈತ್ರಿಕೂಟದಿಂದ ಬೆಲೆ ಏರಿಕೆ ವಿರುದ್ಧ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಜ್ಯ ಯುವ ಜೆಡಿಎಸ್ ನ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.
ಕೋಟ್...