ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ನಾವು ಯಾವುದೇ ಪ್ರಯೋಜನ ಪಡೆದಿದ್ದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ ಲಗಾನ್ ಟೀಂಗೆ ಸವಾಲು ಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ನಾವು ಯಾವುದೇ ಪ್ರಯೋಜನ ಪಡೆದಿದ್ದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರ ಲಗಾನ್ ಟೀಂಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ತಮ್ಮ 74ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದ ಅವರು, 2006ರಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡಿ ಬಿ.ಎಸ್. ಯಡಿಯೂರಪ್ಪಗೆ ಉಪ ಮುಖ್ಯಮಂತ್ರಿ ಮಾಡಲು ಮಾತನಾಡಿ, ಒಪ್ಪಿಸಿದ್ದೆ. ಇದಕ್ಕೆ ಸಿ.ಎಂ.ಉದಾಸಿ ಸಾಕ್ಷಿ. ಬದಲಾದ ಪರಿಸ್ಥಿತಿಯಲ್ಲಿ ಕುರ್ಚಿ ತ್ಯಾಗ ಮಾಡಿದಾಗ ಯಡಿಯೂರಪ್ಪ ಅವರಿಗೆ ಅನ್ಯಾಯ ಆಗುತ್ತದೆಂದು ಬಿಂಬಿಸಲಾಯಿತು. 2008ರಲ್ಲಿ ಸಹ 110 ಸೀಟು ಗೆದ್ದಾಗ ನಾಲ್ವರು ಪಕ್ಷೇತರ ಶಾಸಕರನ್ನು ಕರೆ ತರುವ ಹೊಣೆ ನನಗೆ ನೀಡಲಾಗಿತ್ತು. ಆಗಲೂ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕೆ ಕೊಡುಗೆ ನೀಡಿದ್ದೇನೆ ಎಂದು ಹೇಳಿದರು.
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಜಿ.ಎಂ.ಸಿದ್ದೇಶ್ವರ ದಾವಣಗೆರೆ ಜಿಲ್ಲೆಗೆ ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮವನ್ನು ಸಿಂಗಾಪುರ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಯಾವುದೋ ಜಿಲ್ಲೆಯ ನಾನು ಚಿತ್ರದುರ್ಗ ಸಂಸದನಾಗುವಲ್ಲಿ ಸಿದ್ದೇಶ್ವರ ಕೊಡುಗೆ ಅವಿಸ್ಮರಣೀಯವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿಹರ ಬಿ.ಪಿ.ಹರೀಶ ಮಾತನಾಡಿ, 1996ರಲ್ಲಿ ಭೀಮಸಮುದ್ರ ಗ್ರಾಮವು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ಅಂದಿನಿಂದಲೂ ಸಿದ್ದೇಶ್ವರ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪ 2 ಸಲ, ಜಿ.ಎಂ. ಸಿದ್ದೇಶ್ವರ ನಾಲ್ಕು ಸಲ ಪ್ರತಿನಿಧಿಸಿದ ಕ್ಷೇತ್ರ ಇದು. ಇಡೀ ಕ್ಷೇತ್ರದ 1200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪರಿಚಿತ ಸಂಸದರು ಅಂತಾ ಯಾರಾದರೂ ಇದ್ದರೆ ಅದು ಜಿ.ಮಲ್ಲಿಕಾರ್ಜುನಪ್ಪ, ಜಿ.ಎಂ.ಸಿದ್ದೇಶ್ವರ್ ಮಾತ್ರ ಎಂದು ಹೇಳಿದರು.
ಪತ್ನಿ ಗಾಯತ್ರಿ ಸಿದ್ದೇಶ್ವರ, ಮಾಜಿ ಸಂಸದ ಬಿ.ವಿ. ನಾಯಕ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ, ಪ್ರೊ.ಎನ್.ಲಿಂಗಣ್ಣ, ಜೆಡಿಎಸ್ ನಾಯಕರಾದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಅಧ್ಯಕ್ಷ ಚಿದಾನಂದ ಗೌಡ, ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್ ಕುಮಾರ, ಯಶವಂತರಾವ್ ಜಾಧವ್, ದೇವರಮನೆ ಶಿವಕುಮಾರ, ಬಿ.ಎಸ್.ಜಗದೀಶ, ಶಾಂತರಾಜ ಪಾಟೀಲ್, ಎ.ವೈ. ಪ್ರಕಾಶ್, ಎಸ್.ಎಂ.ವೀರೇಶ ಹನಗವಾಡಿ, ಮುರುಗೇಶ ಆರಾಧ್ಯ, ಎ.ಬಿ.ಹನುಮಂತಪ್ಪ ಅರಕೆರೆ, ಚನ್ನಗಿರಿ ಬಿ.ಎಂ. ಶಿವಕುಮಾರ್, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ, ಶಿವನಹಳ್ಳಿ ರಮೇಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ಮಲ್ಲಿಕಾರ್ಜುನ ಇತರರು ಇದ್ದರು.
- - -
(ಟಾಪ್ ಕೋಟ್)ಕೇಂದ್ರದಲ್ಲಿ ನನ್ನನ್ನು ಮಂತ್ರಿ ಮಾಡುವಂತೆ ಯಡಿಯೂರಪ್ಪ ಹೇಳಿದ್ದು ಸತ್ಯ. ಆಗ ಅವಕಾಶ ಸಿಗಲಿಲ್ಲ. ಅನಂತಕುಮಾರ ಬಳಿ ಹೋಗಿ ಮಾತನಾಡಿದ್ದೆ. ಆದರೆ, ಸ್ವತಃ ಮೋದಿಯವರೆ ನನಗೆ ಫೋನ್ ಮಾಡಿ ಅಧಿಕಾರ ಸ್ವೀಕಾರಕ್ಕೆ ಆಹ್ವಾನಿಸಿದ್ದರು. ಯಡಿಯೂರಪ್ಪ-ಅನಂತಕುಮಾರ್ ಸೇರಿ ನನ್ನ ಮಂತ್ರಿ ಮಾಡಿದರು. ನನ್ನ, ಯಡಿಯೂರಪ್ಪ ಮಧ್ಯೆ ಸಂಬಂಧ ಹಳಸುವಂತೆ ಮಾಡಿದ್ದು ಬೇರೆಯವರು. - ಜಿ.ಎಂ.ಸಿದ್ದೇಶ್ವರ ಕೇಂದ್ರದ ಮಾಜಿ ಸಚಿವ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.